ಬೆಂಗಳೂರು: ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿರುವ ಹದಿಹರೆಯದ ಯುವ ಆಟಗಾರ ವೈಭವ್ ಸೂರ್ಯವಂಶಿ ಪರ ಭಾರತದ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಬ್ಯಾಟ್ ಬೀಸಿದ್ದಾರೆ. ಮುಂಬರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡುವಾಗ ವೈಭವ್ ಅವರ ವಯಸ್ಸನ್ನು ಲೆಕ್ಕಿಸದೆ, ಅವರ ಅಸಾಧಾರಣ ಪ್ರತಿಭೆಗೆ ಮಣೆಹಾಕಬೇಕು ಎಂದು ಗವಾಸ್ಕರ್ ಬಿಸಿಸಿಐ ಆಯ್ಕೆದಾರರನ್ನು ಒತ್ತಾಯಿಸಿದ್ದಾರೆ.
ಇಷ್ಟು ಚಿಕ್ಕ ವಯಸ್ಸಿನಲ್ಲೇ ಟೀಮ್ ಇಂಡಿಯಾ ಪ್ರವೇಶಿಸಿದರೆ ಅವರ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಟೀಕಾಕಾರರ ವಾದವನ್ನು ತಳ್ಳಿಹಾಕಿರುವ ಅವರು, ವೈಭವ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಆಡಲು ಸಂಪೂರ್ಣವಾಗಿ ಸಜ್ಜಾಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಖಾಸಗಿ ಕ್ರೀಡಾ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಗವಾಸ್ಕರ್, ವಯಸ್ಸು ಕೇವಲ ಒಂದು ಸಂಖ್ಯೆ ಮಾತ್ರ ಎಂಬುದನ್ನು ಆಯ್ಕೆ ಸಮಿತಿಗೆ ನೆನಪಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅಪಾರ ಅನುಭವ ಇರುವ ಹಾಗೂ ತಮಗಿಂತ ಹದಿನೈದು ವರ್ಷಗಳಷ್ಟು ಹಿರಿಯರಾದ ಬೌಲರ್ಗಳ ಎದುರು ಕಿಂಚಿತ್ತೂ ಭಯವಿಲ್ಲದೆ ವೈಭವ್ ಸಿಕ್ಸರ್ ಹಾಗೂ ಬೌಂಡರಿಗಳನ್ನು ಸಿಡಿಸುತ್ತಿರುವ ಪರಿಗೆ ಗವಾಸ್ಕರ್ ಬೆರಗಾಗಿದ್ದಾರೆ. ಇಂತಹ ಅದ್ಭುತ ಲಯದಲ್ಲಿರುವ ಯುವಕನಿಗೆ ಈಗ ಅವಕಾಶ ನೀಡದಿದ್ದರೆ ಇನ್ನೇನು ನೀಡುತ್ತೀರಿ ಎಂದು ಅವರು ಆಯ್ಕೆದಾರರಿಗೆ ನೇರ ಪ್ರಶ್ನೆ ಹಾಕಿದ್ದಾರೆ. ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗುವ ಭಾರತ ಟಿ20 ತಂಡದಲ್ಲಿ ವೈಭವ್ ಸ್ಥಾನ ಪಡೆಯಲು ಸರ್ವ ರೀತಿಯಲ್ಲೂ ಅರ್ಹರಾಗಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದಾರೆ.
ವೈಭವ್ ಅವರ ಬ್ಯಾಟಿಂಗ್ ಶೈಲಿಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಗವಾಸ್ಕರ್, ಅವರನ್ನು ಕೇವಲ ಚೆಂಡನ್ನು ಕುರುಡಾಗಿ ಬೀಸುವ ‘ಸ್ಲಾಗರ್’ ಎನ್ನುವುದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಬದಲಾಗಿ, ವೈಭವ್ ಉತ್ತಮ ತಂತ್ರಗಾರಿಕೆ ಹೊಂದಿರುವ ಓರ್ವ ನೈಜ ‘ಹಿಟ್ಟರ್’ ಎಂದು ಬಣ್ಣಿಸಿದ್ದಾರೆ. ಬ್ಯಾಟ್ ಅನ್ನು ನೇರವಾಗಿ ಬೀಸುವ ಮೂಲಕ ಬೌಲರ್ಗಳ ತಲೆಯ ಮೇಲಿನಿಂದ ಲಾಂಗ್ ಆನ್ ಮತ್ತು ಲಾಂಗ್ ಆಫ್ನತ್ತ ಚೆಂಡನ್ನು ಅಟ್ಟುವ ಕೌಶಲ ಅವರಲ್ಲಿದೆ. ಆಟದ ವೇಳೆ ತಮ್ಮ ಸಮತೋಲನವನ್ನು ಕಳೆದುಕೊಳ್ಳದೆ, ಮುಂಗಾಲನ್ನು ಕೊಂಚ ಸರಿಸಿ ಶಕ್ತಿಶಾಲಿ ಹೊಡೆತಗಳನ್ನು ಬಾರಿಸುವ ಅವರ ಬ್ಯಾಟಿಂಗ್ ತಂತ್ರಗಾರಿಕೆ ಅತ್ಯಂತ ಶಿಸ್ತುಬದ್ಧವಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಮಕ್ಕಳು ಗಲ್ಲಿಯಲ್ಲಿ ಕ್ರಿಕೆಟ್ ಆಡುವಾಗ ಯಾವುದೇ ರಕ್ಷಣಾತ್ಮಕ ಆಟದ (ಡಿಫೆನ್ಸ್) ಬಗ್ಗೆ ಯೋಚಿಸದೆ ಕೇವಲ ಚೆಂಡನ್ನು ಬಡಿಯುವುದರತ್ತ ಮಾತ್ರ ಗಮನ ಹರಿಸುತ್ತಾರೆ. ಅದೇ ರೀತಿಯ ನಿರ್ಭೀತ ಆಟವನ್ನು ವೈಭವ್ ಈಗ ಅಂತಾರಾಷ್ಟ್ರೀಯ ಮಟ್ಟದ ಆಟಗಾರರ ಎದುರು ಪ್ರದರ್ಶಿಸುತ್ತಿದ್ದಾರೆ ಎಂದು ಗವಾಸ್ಕರ್ ಹೋಲಿಕೆ ಮಾಡಿದ್ದಾರೆ. ಅವರೊಳಗಿರುವ ಈ ಮಗುವಿನಂತಹ ಮುಗ್ಧತೆ ಹಾಗೂ ಆಕ್ರಮಣಕಾರಿ ಮನೋಭಾವ ಯಾವತ್ತೂ ಮಾಸದಿರಲಿ, ಅದುವೇ ಕ್ರಿಕೆಟ್ ಪ್ರೇಮಿಗಳಿಗೆ ಅತೀವ ಆನಂದ ನೀಡುತ್ತದೆ ಎಂದು ಅವರು ಆಶಿಸಿದ್ದಾರೆ. ಈ ವರ್ಷದ ಜುಲೈನಲ್ಲಿ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಗವಾಸ್ಕರ್ ಅವರ ಈ ದೃಢವಾದ ಬೆಂಬಲದ ಬಳಿಕ ಬಿಸಿಸಿಐ ಆಯ್ಕೆದಾರರು ವೈಭವ್ ಸೂರ್ಯವಂಶಿ ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುವ ನಿಟ್ಟಿನಲ್ಲಿ ಗಂಭೀರವಾಗಿ ಚಿಂತಿಸುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ : ಒಂದೇ ಟಿ20 ಟೂರ್ನಿಯ ಪವರ್ಪ್ಲೇನಲ್ಲಿ 500 ರನ್ ಸಿಡಿಸಿದ ವಿಶ್ವದ ಮೊಟ್ಟ ಮೊದಲ ಬ್ಯಾಟರ್ ಆಗಿ ಸೂರ್ಯವಂಶಿ ದಾಖಲೆ



















