ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳು ಹಾಗೂ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ‘ರಾಷ್ಟ್ರೀಯ ಅಂಬೇಡ್ಕರ್ ಸೇನೆ’ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮುಖವಾಡ ಧರಿಸಿದವರು ಕೇವಲ ಅಧಿಕಾರ ರಾಜಕಾರಣದಲ್ಲಿ ಮುಳುಗಿದ್ದಾರೆ ಎಂದು ಸಂಘಟನೆ ನೇರ ವಾಗ್ದಾಳಿ ನಡೆಸಿದೆ.
ರಾಷ್ಟ್ರದ ಎರಡನೇ ಶ್ರೀಮಂತ ಮುಖ್ಯಮಂತ್ರಿ ಎಂದು ಖ್ಯಾತರಾಗಿದ್ದ ಸಿದ್ದರಾಮಯ್ಯನವರಿಂದ, ರಾಷ್ಟ್ರದ ಎರಡನೇ ಶ್ರೀಮಂತ ಎಂ.ಎಲ್.ಎ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರವಾಗುತ್ತಿದೆ. ಇಲ್ಲಿ ಜನ, ದೇಶಕ್ಕೆ ಬೆಲೆಯಿಲ್ಲ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮಾತುಗಳೆಲ್ಲವೂ ಕೇವಲ ವೇದಿಕೆಗಷ್ಟೇ ಸೀಮಿತ” ಎಂದು ಟೀಕಿಸಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬ ಹಾಗೂ ನಿರುದ್ಯೋಗ
ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತ್ ಹಾಗೂ ಮಹಾನಗರ ಪಾಲಿಕೆಗಳಿಗೆ ಸಕಾಲದಲ್ಲಿ ಚುನಾವಣೆ ನಡೆಸದೆ ಪ್ರಜಾಪ್ರಭುತ್ವದ ವಿಕೇಂದ್ರೀಕರಣವನ್ನು ಹತ್ತಿಕ್ಕಲಾಗುತ್ತಿದೆ. ಮತ್ತೊಂದೆಡೆ, ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡದೆ ಯುವ ಜನಾಂಗದ ಭವಿಷ್ಯದ ಜೊತೆ ಆಟವಾಡಲಾಗುತ್ತಿದೆ. ವರ್ಗಾವಣೆ ದಂಧೆ, ಲಂಚ ಮತ್ತು ಭ್ರಷ್ಟಾಚಾರಗಳು ವ್ಯವಸ್ಥೆಯನ್ನು ಸಂಪೂರ್ಣವಾಗಿ ನಡುಗಿಸಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತೆರಿಗೆ ಮತ್ತು ದರ ಏರಿಕೆಯ ಬಿಸಿ
ಏಕರೂಪದ ಜಿಎಸ್ಟಿ ವ್ಯವಸ್ಥೆ ಇದ್ದಾಗ್ಯೂ, ರಾಜ್ಯದ ಪ್ರತಿಯೊಂದು ಇಲಾಖೆಯಲ್ಲಿ ಸೇವಾ ಶುಲ್ಕ ಹಾಗೂ ತೆರಿಗೆಗಳನ್ನು ದುಪ್ಪಟ್ಟುಗೊಳಿಸಲಾಗಿದೆ.
15 ವರ್ಷ ದಾಟಿದ ದ್ವಿಚಕ್ರ ವಾಹನಗಳ ಶುಲ್ಕವನ್ನು 2,000 ರೂ.ಗೆ ಏರಿಸಲಾಗಿದೆ.
ವಿದ್ಯುತ್ ವಾಹನಗಳಿಗೂ ಪೂರ್ಣ ತೆರಿಗೆ ವಿಧಿಸಲಾಗುತ್ತಿದೆ. 20 ರೂಪಾಯಿಯ ಪ್ರಮಾಣ ಪತ್ರಕ್ಕೆ 100 ರೂ. ಹಾಗೂ 100 ರೂಪಾಯಿಯ ಮುದ್ರಾಂಕ ಪತ್ರಕ್ಕೆ 500 ರೂ. ಮಾಡಲಾಗಿದೆ. ವಿದ್ಯುತ್ ಮತ್ತು ನೀರಿನ ದರಗಳನ್ನು ದುಪ್ಪಟ್ಟುಗೊಳಿಸಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಾಗಿದೆ.
ರೈತ ವಿರೋಧಿ ಮತ್ತು ಅಭಿವೃದ್ಧಿ ಶೂನ್ಯ ನೀತಿ
ರೈತರ ಪಂಪ್ಸೆಟ್ಗಳ ವಿದ್ಯುತ್ ಶುಲ್ಕವನ್ನು 30 ಸಾವಿರದಿಂದ ಬರೋಬ್ಬರಿ ಎರಡೂವರೆ ಲಕ್ಷಕ್ಕೆ ಏರಿಸಿ ರೈತರ ಬೆನ್ನೆಲುಬು ಮುರಿಯಲಾಗಿದೆ. ಇದೀಗ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಕಿತ್ತುಕೊಂಡು ಟೌನ್ಶಿಪ್, ಕೈಗಾರಿಕಾ ವಲಯ ಹಾಗೂ ಕ್ರಿಕೆಟ್ ಸ್ಟೇಡಿಯಂ ಮಾಡಲು ಹೊರಟಿರುವುದು ರೈತ ವಿರೋಧಿ ಧೋರಣೆಯಾಗಿದೆ. ಗಂಗಾ ಪೂಜಾ ಆರತಿಯಂತಹ ನಕಲಿ ಕಾರ್ಯಕ್ರಮಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣವನ್ನು ಪೋಲು ಮಾಡಲಾಗಿದೆ ಎಂದು ಸಂಘಟನೆ ಆಪಾದಿಸಿದೆ.
ಕಾರ್ಮಿಕ ನಿಧಿ ದುರುಪಯೋಗ ಹಾಗೂ ಇಲಾಖೆಗಳ ವೈಫಲ್ಯ
ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ಸಾವಿರ ಕೋಟಿಗೂ ಅಧಿಕ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದ್ದು, ಇದರ ತನಿಖೆಗೆ ಹೈಕೋರ್ಟ್ ಆದೇಶಿಸಿದೆ. ಅಬಕಾರಿ, ಲೋಕೋಪಯೋಗಿ, ಅರಣ್ಯ, ಗೃಹ ಮತ್ತು ಸಹಕಾರ ಇಲಾಖೆಗಳಲ್ಲಿ ನಡೆದಿರುವ ಹಗರಣಗಳ ಕುರಿತು ‘ದಿ ಫೈಲ್’ ತನಿಖಾ ವರದಿಗಳೇ ಸರ್ಕಾರದ ಸಾಧನೆಗೆ ಸಾಕ್ಷಿಯಾಗಿವೆ. ರಸ್ತೆಗಳು ನರಕಸದೃಶವಾಗಿದ್ದು, ಬೀದಿನಾಯಿಗಳ ನಿಯಂತ್ರಣ ಮಾಡಲಾಗದ ಸರ್ಕಾರ ನಾಯಿಗಳಿಗೆ ಬಿರಿಯಾನಿ ಕೊಡುವ ಯೋಜನೆ ರೂಪಿಸುತ್ತಿದೆ ಎಂದು ಲೇವಡಿ ಮಾಡಲಾಗಿದೆ.
ಜಾತಿ-ಜಾತಿಗಳ ನಡುವೆ ದ್ವೇಷದ ಬೆಂಕಿ ಹಚ್ಚಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಈ ಸರ್ವಾಧಿಕಾರಿ ಧೋರಣೆಯಿಂದ ಇನ್ನಾದರೂ ರಾಜ್ಯದ ಜನತೆಗೆ ಮುಕ್ತಿ ಸಿಗಲಿ. ರಾಜ್ಯದಲ್ಲಿ ಶಾಂತಿ ಮತ್ತು ನೆಮ್ಮದಿಯ ಬದುಕು ಮರುಕಳಿಸಲಿ, ಎಂದು ರಾಷ್ಟ್ರೀಯ ಅಂಬೇಡ್ಕರ್ ಸೇನೆ ಪ್ರಕಟಣೆಯಲ್ಲಿ ಆಗ್ರಹಿಸಿದೆ.


















