ಫರೀದಾಬಾದ್ : ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತಿದ್ದಾನೆ ಎಂಬ ಏಕೈಕ ಕಾರಣಕ್ಕೆ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಆಟಗಾರನೊಬ್ಬನನ್ನು ಅಪಹರಿಸಿ, ಸತತ ಮೂರು ದಿನಗಳ ಕಾಲ ಕ್ರೂರವಾಗಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ಭೀಕರ ಘಟನೆ ದೆಹಲಿ ಸಮೀಪದ ಫರೀದಾಬಾದ್ನಲ್ಲಿ ನಡೆದಿದೆ. ಮೃತ ಯುವಕನನ್ನು ಭಿವಾಡಿಯ ಸೈದ್ಪುರ ಗ್ರಾಮದ ನಿವಾಸಿ, 21 ವರ್ಷದ ಮೋನು ಎಂದು ಗುರುತಿಸಲಾಗಿದೆ. ಈ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಇಬ್ಬರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಪ್ರೀತಿಸಿದ್ದೇ ತಪ್ಪಾಯ್ತೇ?
ಮೃತ ಮೋನು ಇತ್ತೀಚೆಗಷ್ಟೇ ತನ್ನ 12ನೇ ತರಗತಿ ಪರೀಕ್ಷೆಗಳನ್ನು ಮುಗಿಸಿದ್ದು, ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದ ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರ. ಜಿಲ್ಲಾ ಮಟ್ಟದಲ್ಲಿ ಹಲವು ಪದಕಗಳನ್ನು ಜಯಿಸಿದ್ದ ಈತ ರಾಜ್ಯ ಮಟ್ಟದಲ್ಲೂ ಗುರುತಿಸಿಕೊಂಡಿದ್ದ. ಫರೀದಾಬಾದ್ನ ತಿಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ಅಪ್ರಾಪ್ತ ಬಾಲಕಿಯ ಸೋದರಮಾವ ನರೇಂದ್ರ ಎಂಬಾತ ಮೋನು ಅವರ ಸೈದ್ಪುರ ಗ್ರಾಮದಲ್ಲೇ ವಾಸವಾಗಿದ್ದರಿಂದ, ಬಾಲಕಿ ಆಗಾಗ ಅಲ್ಲಿಗೆ ಭೇಟಿ ನೀಡುತ್ತಿದ್ದಳು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಪರಿಚಯವಾಗಿ, ಬಳಿಕ ಅದು ಪ್ರೇಮಕ್ಕೆ ತಿರುಗಿತ್ತು. ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ ಇವರಿಬ್ಬರು ಓಡಿಹೋಗಿದ್ದರು ಎನ್ನಲಾಗಿದ್ದು, ಈ ಸಂಬಂಧ ಬಾಲಕಿಯ ತಂದೆ ಪೊಲೀಸ್ ದೂರು ದಾಖಲಿಸಿದ್ದರು. ತದನಂತರ ಬಾಲಕಿ ಪತ್ತೆಯಾಗಿದ್ದರೂ, ಮೋನು ಮಾತ್ರ ನಾಪತ್ತೆಯಾಗಿದ್ದ.
ಪೊಲೀಸ್ ವಿಚಾರಣೆಗೆ ಹೋದವನಿಗೆ ಕಾದಿತ್ತು ಮೃತ್ಯು
ಮೋನು ಅವರ ಸೋದರಮಾವ ನರೇಂದ್ರ ನೀಡಿರುವ ಮಾಹಿತಿಯ ಪ್ರಕಾರ, ಮೇ 17ರಂದು ಮೋನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಗೆ ಸಹಕರಿಸಲು ಮತ್ತು ವಿಚಾರಣೆಗೆ ಹಾಜರಾಗಲು ಹೋಗಿದ್ದ. ಆದರೆ, ಆತ ಠಾಣೆಗೆ ತಲುಪುವ ಮೊದಲೇ ಬಾಲಕಿಯ ಕುಟುಂಬಸ್ಥರು ಆತನನ್ನು ಹಾದಿ ಮಧ್ಯದಲ್ಲೇ ಅಪಹರಿಸಿದ್ದರು ಎಂದು ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ. ಅಪಹರಣದ ಬಳಿಕ ಮೋನುವನ್ನು ರಹಸ್ಯ ಸ್ಥಳದಲ್ಲಿ ಕೂಡಿಹಾಕಿದ ಆರೋಪಿಗಳು, ಸತತ ಮೂರು ದಿನಗಳ ಕಾಲ ಆತನಿಗೆ ತೀವ್ರವಾಗಿ ದೈಹಿಕವಾಗಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಕ್ರೀಡಾಪಟು
ಮೇ 20 ರಂದು ತಡರಾತ್ರಿ ಬಾಲಕಿಯ ಮನೆಯ ಹೊರಗಡೆ ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಮೋನು ಬಿದ್ದಿರುವುದಾಗಿ ಪೊಲೀಸರು ಆತನ ಕುಟುಂಬದವರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ತೀವ್ರ ರಕ್ತಸ್ರಾವ ಹಾಗೂ ಮೂಳೆ ಮುರಿತದಿಂದ ಬಳಲುತ್ತಿದ್ದ ಯುವಕನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ. ಫರೀದಾಬಾದ್ ಪೊಲೀಸ್ ವಕ್ತಾರ ಯಶ್ಪಾಲ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಈ ಅಮಾನವೀಯ ಹತ್ಯೆಯ ಹಿಂದೆ ಇನ್ನೂ ಯಾರ ಕೈವಾಡವಿದೆ ಎಂಬ ಬಗ್ಗೆ ಎಲ್ಲಾ ಆಯಾಮಗಳಿಂದಲೂ ತನಿಖೆ ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಶಿರಸಿ ನಡುರಸ್ತೆಯಲ್ಲೇ ಭೀಕರ ಗ್ಯಾಂಗ್ವಾರ್ – 6 ಜನರ ವಿರುದ್ಧ FIR!



















