ಬೆಂಗಳೂರು : ನಗರದಲ್ಲಿ ಸರಣಿ ಬೈಕ್ ಹಾಗೂ ಗ್ಯಾಸ್ ಸಿಲಿಂಡರ್ ಕಳ್ಳತನ ನಡೆಸುತ್ತಿದ್ದ ಆರೋಪಿಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಅಭಿಷೇಕ್ ಎಂಬಾತ ಬಂಧಿತ ಆರೋಪಿಯಾಗಿದ್ದು, ಆರೋಪಿಯಿಂದ 25 ದ್ವಿಚಕ್ರ ವಾಹನಗಳು ಹಾಗೂ 12 ಗ್ಯಾಸ್ ಸಿಲಿಂಡರ್ಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ತನಿಖೆ ವೇಳೆ ಬೆಚ್ಚಿಬೀಳಿಸುವ ಅಂಶಗಳು ಬೆಳಕಿಗೆ ಬಂದಿವೆ.
ಸಂಬಂಧಿಕರ ಸಾವಿನ ಹಿನ್ನೆಲೆಯಲ್ಲಿ ದೂರುದಾರನೊಬ್ಬ ಬೈಕ್ ನಿಲ್ಲಿಸಿ ತೆರಳಿದ್ದ ವೇಳೆ, ಅದೇ ಬೈಕ್ನ್ನು ನಕಲಿ ಕೀ ಬಳಸಿ ಕದ್ದು ಪರಾರಿಯಾಗಿದ್ದ ಆರೋಪಿಯ ವಿರುದ್ಧ ಬೈಕ್ ಮಾಲೀಕ ದೂರು ನೀಡಿದ್ದರು. ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಕೆಂಗೇರಿ ಪೊಲೀಸರು ಅಭಿಷೇಕ್ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸರಣಿ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.
ಪೊಲೀಸರ ತನಿಖೆ ವೇಳೆ ರಾತ್ರಿ ವೇಳೆ ನಕಲಿ ಕೀ ಬಳಸಿ ವಿವಿಧ ಪ್ರದೇಶಗಳಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಎನ್ನುವುದು ಬಹಿರಂಗವಾಗಿದೆ. ಬಳಿಕ ಕದ್ದ ಬೈಕ್ಗಳನ್ನು ಫೇಸ್ಬುಕ್ ಮಾರ್ಕೆಟ್ಪ್ಲೇಸ್ ಹಾಗೂ ಓಎಲ್ಎಕ್ಸ್ಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ. “ಡಾಕ್ಯುಮೆಂಟ್ ಇಲ್ಲ” ಎಂದು ಹೇಳಿ ಕಡಿಮೆ ದರಕ್ಕೆ ವಾಹನಗಳನ್ನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಇದರ ಜೊತೆಗೆ ಮನೆಗಳ ಹೊರಭಾಗದಲ್ಲಿ ಇಡಲಾಗಿದ್ದ ಗ್ಯಾಸ್ ಸಿಲಿಂಡರ್ಗಳನ್ನೂ ಕಳವು ಮಾಡುತ್ತಿದ್ದ ಆರೋಪ ಕೇಳಿಬಂದಿದೆ. ಕದ್ದ ಸಿಲಿಂಡರ್ಗಳನ್ನು ಬಾಬೂಸಾಪಾಳ್ಯದಲ್ಲಿರುವ ತನ್ನ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಅಭಿಷೇಕ್ ವಿರುದ್ಧ ಈಗಾಗಲೇ ನಾಲ್ಕು ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಸದ್ಯ ಆರೋಪಿಯನ್ನು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನಷ್ಟು ಕಳ್ಳತನ ಪ್ರಕರಣಗಳ ಸಂಪರ್ಕವಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ವಿಜಯ್ ನೇತೃತ್ವದ ಟಿವಿಕೆ ವಿರುದ್ಧ ಭ್ರಷ್ಟಾಚಾರ ಆರೋಪ : ಆರೇ ಗಂಟೆಯಲ್ಲಿ ಹಂಚಿಕೆಯಾಗಿದ್ದ ಟೆಂಡರ್ ರದ್ದು!



















