ಬೆಂಗಳೂರು : ಆನ್ಲೈನ್ ಔಷಧ ಮಾರಾಟ, ಆನ್ಲೈನ್ ಮೂಲಕ ಔಷಧಗಳಿಗೆ ಭಾರಿ ರಿಯಾಯಿತಿ ನೀಡುವುದದನ್ನು ವಿರೋಧಿಸಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ದೇಶಾದ್ಯಂತ ಇಂದು (ಮೇ 20) ಮೆಡಿಕಲ್ ಶಾಪ್ಗಳನ್ನು ಬಂದ್ ಮಾಡಲಾಗುತ್ತಿದೆ.
ರಾಜ್ಯದ ಔಷಧ ವರ್ತಕ ಸಂಘಗಳಿಂದ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲ ಸಂಘಟನೆಗಳು ಮೆಡಿಕಲ್ ಶಾಪ್ಗಳನ್ನು ಮುಚ್ಚುವ ಮೂಲಕ ಸಂಪೂರ್ಣ ಬೆಂಬಲ ಘೋಷಿಸಿದರೆ, ಇನ್ನೂ ಕೆಲ ಸಂಘಟನೆಗಳು ಕಪ್ಪುಪಟ್ಟಿ ಧರಿಸುವ ಮೂಲಕ ನೈತಿಕ ಬೆಂಬಲ ಸೂಚಿಸಿ ಮೆಡಿಕಲ್ ಶಾಪ್ ತೆರೆಯುವುದಾಗಿ ತಿಳಿಸಿವೆ.
ರಾಜ್ಯದಲ್ಲಿ ಸರಿ ಸುಮಾರು 26 ಸಾವಿರಕ್ಕೂ ಅಧಿಕ ಮೆಡಿಕಲ್ ಶಾಪ್ ಇದ್ದು, ಬೆಂಗಳೂರಿನ ಶೇಕಡಾ 90ರಷ್ಟು ಮೆಡಿಕಲ್ ಮಳಿಗೆಗಳು ಓಪನ್ ಆಗಲಿದೆ. ಕಪ್ಪು ರಿಬ್ಬನ್ ಕಟ್ಟಿ ನೈತಿಕ ಬೆಂಬಲ ಸೂಚಿಸಲು ನಿರ್ಧರಿಸಿದ್ದಾರೆ.
ಪ್ರಮುಖ ಬೇಡಿಕೆಗಳು ಏನು..?
- ಜಿಎಸ್ಆರ್ 220 (ಇ) ಹಿಂಪಡೆಯಬೇಕು
- ಅಕ್ರಮ ಇ-ಫಾರ್ಮಸಿಗಳನ್ನು ಬಂದ್ ಮಾಡಬೇಕು
- ಅತಿಯಾದ ಡಿಸ್ಕೌಂಟ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು
- ಸಣ್ಣ ಔಷಧಿ ವ್ಯಾಪಾರಿಗಳನ್ನು ರಕ್ಷಿಸಬೇಕು
ಆನ್ಲೈನ್ನಲ್ಲಿ ಮೆಡಿಸಿನ್ ಮಾರಾಟದ ಸಮಸ್ಯೆ
- ನಿಯಂತ್ರಣವಿಲ್ಲದ ಆನ್ಲೈನ್ ಔಷಧ ಮಾರಾಟ
- ನಕಲಿ ಔಷಧಿ ಚೀಟಿಗಳ ಬಳಕೆ
- ಆಂಟಿಬಯೋಟಿಕ್ ಮತ್ತು ಚಟ ಉಂಟುಮಾಡುವ ಔಷಧಿಗಳ ದುರುಪಯೋಗ
- ರೋಗಿ ಮತ್ತು ಫಾರ್ಮಸಿಸ್ಟ್ ನಡುವೆ ನೇರ ಸಂಪರ್ಕದ ಕೊರತೆ
- ನಕಲಿ ಮತ್ತು ಸರಿಯಾಗಿ ಸಂಗ್ರಹಿಸದ ಔಷಧಿಗಳ ಅಪಾಯ
- ಅತಿಯಾದ ಡಿಸ್ಕೌಂಟ್ ನೀತಿಯಿಂದಲೂ ಸಮಸ್ಯೆ
- ಭಾರೀ ರಿಯಾಯಿತಿಯಿಂದ ಸಣ್ಣ ವ್ಯಾಪಾರಿಗಳಿಗೆ ಅಪಾಯ
- ಮಾರುಕಟ್ಟೆಯಲ್ಲಿ ಏಕಾಧಿಪತ್ಯ ಭೀತಿ
ಬೃಹತ್ ಬೆಂಗಳೂರು ಕೆಮಿಸ್ಟ್ ಅಂಡ್ ಡಗಿಸ್ಟ್ ಅಸೋಸಿಯೇಷನ್ ಬಂದ್ಗೆ ನೈತಿಕ ಬೆಂಬಲ ನೀಡಿದೆ. ಎಂದಿನಂತೆ ಅಂಗಡಿಯ ಬಾಗಿಲು ತೆಗೆದು ರೋಗಿಗಳ ಸೇವೆಯಲ್ಲಿ ನಿರತರಾಗಿದ್ದಾರೆ. ಎಲ್ಲಾ ಮೆಡಿಕಲ್ ಶಾಪ್ ಸಿಬ್ಬಂದಿ ಬಾಗಿಲು ಮುಚ್ಚದೆ, ನಿರ್ಭಯದಿಂದ ಮತ್ತು ನಿರ್ಭೀತಿಯಿಂದ ವ್ಯಾಪಾರವನ್ನು ನಿರ್ವಹಿಸಿ. ರೋಗಿಗಳ ಸೇವೆಯಲ್ಲಿ ನಿರತರಾಗಿರಬೇಕೆಂದು ಬೃಹತ್ ಬೆಂಗಳೂರು ಕೆಮಿಸ್ಟ್ ಅಂಡ್ ಡಗಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಎಂ.ಕೆ ಮಾಯಣ್ಣ ಮನವಿ ಮಾಡಿದ್ದಾರೆ.
ಬಂದ್ಗೆ ಮುಖ್ಯ ಕಾರಣಗಳು :
AIOCD ಪ್ರಕಾರ, ಆನ್ಲೈನ್ ಔಷಧಾಲಯಗಳು (ಇ-ಫಾರ್ಮಸಿಗಳು) ಮತ್ತು ಕಾರ್ಪೊರೇಟ್ ವೇದಿಕೆಗಳ ಮೂಲಕ ಔಷಧಗಳನ್ನು ನಿಯಂತ್ರಣವಿಲ್ಲದೆ ಮಾರಾಟ ಮಾಡಲಾಗುತ್ತಿದೆ. ಅವರು ಶೇಕಡಾ 20 ರಿಂದ 60 ರಷ್ಟು ರಿಯಾಯಿತಿಗಳನ್ನು ನೀಡುತ್ತಿದ್ದಾರೆ. ಪರಿಣಾಮವಾಗಿ, ಸಣ್ಣ ವೈದ್ಯಕೀಯ ಅಂಗಡಿಗಳ ವ್ಯವಹಾರದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಆರೋಪಗಳಿವೆ. ಇದಲ್ಲದೆ, ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ. ನಕಲಿ/AI- ರಚಿತವಾದ ಪ್ರಿಸ್ಕ್ರಿಪ್ಷನ್ಗಳ ವಿರುದ್ಧ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಸಣ್ಣ ವೈದ್ಯಕೀಯ ಅಂಗಡಿಗಳು ಆರೋಪಿಸುತ್ತಿವೆ.
ಈ ಮುಷ್ಕರದ ನೇತೃತ್ವವನ್ನು ಎಐಒಸಿಡಿ ಅಧ್ಯಕ್ಷ ಜೆ.ಎಸ್. ಶಿಂಧೆ ಮತ್ತು ಪ್ರಧಾನ ಕಾರ್ಯದರ್ಶಿ ರಾಜೀವ್ ಸಿಂಘಾಲ್ ವಹಿಸಿದ್ದಾರೆ. ಇದು ಕೇವಲ ವಾಣಿಜ್ಯ ಸಮಸ್ಯೆಯಲ್ಲ, ರೋಗಿಗಳ ಆರೋಗ್ಯ ಮತ್ತು ಸುರಕ್ಷತೆಯ ವಿಷಯವೂ ಆಗಿದೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ : ಕೆ.ಎನ್ ರಾಜಣ್ಣಗೆ ಮತ್ತೆ ಸಿಗುತ್ತಾ ಸಚಿವ ಸ್ಥಾನ? ಸಿಎಂ ಸಿದ್ದರಾಮಯ್ಯ ಜೊತೆ ರಹಸ್ಯ ಮಾತುಕತೆ!



















