ಬೆಂಗಳೂರು : ಮಹಿಳಾ ಕಸ್ಟಮ್ಸ್ ಅಧಿಕಾರಿಗೆ ಬ್ಲ್ಯಾಕ್ಮೇಲ್, ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಉದ್ಯಮಿ ಎಂ.ಕೃಪಲಾನಿ ವಿರುದ್ಧ ಹಲಸೂರು ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಕಸ್ಟಮ್ಸ್ ಅಧಿಕಾರಿ ಆಂತೋನಿ ಎಂಬುವವರು ಹಲಸೂರು ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ದೂರುದಾರರಾದ ಡಿ. ಆಂತೋನಿ ಮಂಗಳೂರಿನಲ್ಲಿ ಕಸ್ಟಮ್ಸ್ ಸೂಪರಿಡೆಂಟ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.
ಕಸ್ಟಮ್ಸ್ ಚಾರ್ಜ್ ಅನ್ನು ತಪ್ಪಿಸಲು ಸ್ಮಗ್ಲಿಂಗ್ ಹಾದಿ ಹಿಡಿದಿದ್ದ ಕೃಪಲಾನಿಗೆ ಪ್ರಕರಣವೊಂದರಲ್ಲಿ ಆಂತೋನಿ 8.50 ಲಕ್ಷ ರೂ. ದಂಡ ವಿಧಿಸಿದ್ದರು. ಇದೇ ಕಾರಣಕ್ಕೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದ ಕೃಪಲಾನಿ, ಆಂತೋನಿ ಸಹೋದ್ಯೋಗಿಯೊಬ್ಬರಿಗೆ ಕರೆ ಮಾಡಿ ಧಮ್ಕಿ ಹಾಕಿದ್ದ. ನಿನ್ನನ್ನ, ನಿನ್ನ ಹೆಂಡತಿ ಮಕ್ಕಳನ್ನ ಜೀವಸಹಿತ ಬಿಡೋದಿಲ್ಲ ಎಂದು ಬೆದರಿಕೆ ಕೂಡ ಹಾಕಿದ್ದ ಎನ್ನಲಾಗಿದೆ.
ಈ ಪ್ರಕರಣ ಸಂಬಂಧ ಕ್ರಮ ಕೈಗೊಳ್ಳುವಂತೆ ಪಲಾನಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಂತೋನಿ ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇರೆಗೆ ಹಲಸೂರು ಪೊಲೀಸರು, ಬಿಎನ್ಎಸ್ ಸೆಕ್ಷನ್ 308/4, 351/3, 351/1 ನ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈಗಾಗಲೇ ಕಸ್ಟಮ್ಸ್ ಮಹಿಳಾ ಅಧಿಕಾರಿಗೆ ಬ್ಲ್ಯಾಕ್ಮೇಲ್, ಲೈಂಗಿಕ ದೌರ್ಜನ್ಯ ಮಾಡಿದ ಪ್ರಕರಣದಲ್ಲಿ ಕೃಪಲಾನಿ ಬಂಧಿತನಾಗಿದ್ದಾನೆ. ಮಹಿಳಾ ಅಧಿಕಾರಿಗೆ ಬ್ಲ್ಯಾಕ್ಮೇಲ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ ಹೇಳಿದಂತೆ ಕೇಳದಿದ್ದರೆ ಖಾಸಗಿ ಫೋಟೋ, ವೀಡಿಯೋ ವೈರಲ್ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಕೃಪಲಾನಿ ಕಿರುಕುಳಕ್ಕೆ ಬೇಸತ್ತು ಮಹಿಳಾ ಅಧಿಕಾರಿ ಕೊನೆಗೂ ಪೊಲೀಸರಿಗೆ ದೂರು ನೀಡಿದ್ದು, ಯಲಹಂಕ ಠಾಣೆಯಲ್ಲಿ ಈತನ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಿದ್ದರು. ಬಳಿಕ ಇಂದಿರಾನಗರ ಪೊಲೀಸ್ ಠಾಣೆಗೆ ಕೇಸ್ ವರ್ಗಾವಣೆಗೊಂಡಿತ್ತು. ಈ ಬಗ್ಗೆ ತನಿಖೆಗೆ ಪುಲಕೇಶಿನಗರ ಎಸಿಪಿ ಹಾಗೂ ಇನ್ಸ್ಪೆಕ್ಟರ್ಗೆ ಅಧಿಕಾರಿಗಳು ಸೂಚಿಸಿದ್ದರು. ಇದೀಗ ಆರೋಪಿ ಕೃಪಲಾನಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅತ್ಯಾಚಾರ ಅಲ್ಲದೇ ಆರೋಪಿ ಮೇಲೆ ಹಲವು ಗಂಭೀರ ಆರೋಪಗಳನ್ನು ಮಹಿಳಾ ಅಧಿಕಾರಿ ಮಾಡಿದ್ದು, ಎಲೆಕ್ಟ್ರಾನಿಕ್ ಬ್ಯುಸಿನೆಸ್ ನಡೆಸುತ್ತಿದ್ದ ಕೃಪಲಾನಿ ಕಸ್ಟಮ್ಸ್ ಕಣ್ತಪ್ಪಿಸಿ ಸಾಕಷ್ಟು ವ್ಯವಹಾರ ನಡೆಸುತ್ತಿದ್ದ ಎಂಬ ಆರೋಪ ಈತನ ವಿರುದ್ಧ ಕೇಳಿಬಂದಿದೆ. ಕೃಪಲಾನಿಗೆ 9 ವರ್ಷದ ಹಿಂದೆ ಮಹಿಳಾ ಕಸ್ಟಮ್ಸ್ ಅಧಿಕಾರಿಗೆ ಪರಿಚಯವಾಗಿದ್ದು, ಆಕೆ ಜೊತೆಗೆ ಪ್ರೀತಿ ನಾಟಕವಾಡಿ ಸಲುಗೆ ಬೆಳೆಸಿಕೊಂಡಿದ್ದ. ಅಲ್ಲದೇ ಮದುವೆ ಆಮಿಷವೊಡ್ಡಿ ಕೆಲಸದ ಕೆಲ ಲೂಪ್ಹೋಲ್ ತಿಳಿದಿದ್ದ. ಆಕೆಯನ್ನು ಬಳಸಿಕೊಂಡು ಕೆಲ ಕಸ್ಟಮ್ಸ್ ಅಧಿಕಾರಿಗಳ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಹಣ ಕೂಡ ಪಡೆದಿದ್ದ ಎನ್ನಲಾಗಿದೆ. ಕೃಪಲಾನಿ ಜಾಲಕ್ಕೆ ಸಿಲುಕಿ ಹಲವು ಕಸ್ಟಮ್ಸ್ ಅಧಿಕಾರಿಗಳು ನರಳಿದ್ದಾರೆ ಎನ್ನಲಾಗಿದ್ದು, ಆ ಕಾರಣ ಈತನಿಂದ ಅನ್ಯಾಯವಾಗಿದ್ದರೆ ದೂರು ನೀಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ ; ಹೊಸಕೋಟೆ ಬಿರಿಯಾನಿ ತಿನ್ನಲು ಹೋದ ವಿದ್ಯಾರ್ಥಿಗೆ ಚಾಕು ಇರಿತ – ಸಿಸಿಟಿವಿಯಲ್ಲಿ ದೃಶ್ಯ ಸೆರೆ!


















