ನವದೆಹಲಿ : ಖ್ಯಾತ ಉದ್ಯಮಿ ದಿವಂಗತ ಸಂಜಯ್ ಕಪೂರ್ ಅವರ ನಿಧನದ ನಂತರ ಅವರ ಕುಟುಂಬದಲ್ಲಿ ಉಂಟಾಗಿರುವ ಸುಮಾರು 30,000 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಿವಾದವನ್ನು ಬಗೆಹರಿಸಲು ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆ ಇಟ್ಟಿದೆ. ದೇಶದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರನ್ನು ಈ ಹೈಪ್ರೊಫೈಲ್ ಪ್ರಕರಣದ ಸಂಧಾನಕಾರರನ್ನಾಗಿ ಸುಪ್ರೀಂ ಕೋರ್ಟ್ ನೇಮಕ ಮಾಡಿದೆ.

ಕಳೆದ ವರ್ಷ ಜೂನ್ನಲ್ಲಿ ಸಂಜಯ್ ಕಪೂರ್ ನಿಧನರಾದ ನಂತರ, ‘ಸೋನಾ ಕಾಮ್ಸ್ಟಾರ್’ ಕಂಪನಿ ಮತ್ತು ಕಪೂರ್ ಕುಟುಂಬಕ್ಕೆ ಸೇರಿದ ‘ರಾಣಿ ಕಪೂರ್ ಫ್ಯಾಮಿಲಿ ಟ್ರಸ್ಟ್’ ವಿಚಾರವಾಗಿ ಕಾನೂನು ಸಮರ ಆರಂಭವಾಗಿತ್ತು. ಸಂಜಯ್ ಕಪೂರ್ ಅವರ ತಾಯಿ ರಾಣಿ ಕಪೂರ್ ಅವರು ದೆಹಲಿ ಹೈಕೋರ್ಟ್ನಲ್ಲಿ ದಾವೆ ಹೂಡಿ, ಈ ಟ್ರಸ್ಟ್ ವಂಚನೆ ಮತ್ತು ನಕಲಿ ದಾಖಲೆಗಳಿಂದ ಕೂಡಿದೆ ಎಂದು ಆರೋಪಿಸಿದ್ದರು.
ಈಗ ಸುಪ್ರೀಂ ಕೋರ್ಟ್ ಈ ವಿವಾದವನ್ನು ನ್ಯಾಯಾಲಯದ ಹೊರಗೆ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸೂಚಿಸಿದ್ದು, ಇದಕ್ಕಾಗಿ ನ್ಯಾಯಮೂರ್ತಿ ಚಂದ್ರಚೂಡ್ ಅವರ ನೇತೃತ್ವದಲ್ಲಿ ಸಂಧಾನ ಪ್ರಕ್ರಿಯೆ ನಡೆಯಲಿದೆ. ಇದು ಕೇವಲ ಟ್ರಸ್ಟ್ಗೆ ಸಂಬಂಧಿಸಿದ ವಿವಾದವಾಗಿದ್ದು, ಸಂಜಯ್ ಕಪೂರ್ ಅವರ ವಿತ್ತಪತ್ರದ (Will) ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಕರಿಶ್ಮಾ ಕಪೂರ್ ಮಕ್ಕಳೂ ಭಾಗಿ
ಈ ಸಂಧಾನ ಪ್ರಕ್ರಿಯೆಗೆ ಕುಟುಂಬದ ಎಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ. ಇದರಲ್ಲಿ ಸಂಜಯ್ ಕಪೂರ್ ಅವರ ಎರಡನೇ ಪತ್ನಿ, ಬಾಲಿವುಡ್ ನಟಿ ಕರಿಶ್ಮಾ ಕಪೂರ್ ಅವರ ಮಕ್ಕಳಾದ ಸಮೈರಾ ಮತ್ತು ಕಿಯಾನ್ ಕೂಡ ಭಾಗಿಯಾಗಲಿದ್ದಾರೆ. ಆದರೆ, ಈ ಹಿಂದೆ ದಾಖಲಾಗಿರುವ ನಕಲಿ ದಾಖಲೆ ಸೃಷ್ಟಿಯ ಕ್ರಿಮಿನಲ್ ಪ್ರಕರಣವು ಈ ಸಂಧಾನದಿಂದ ಹೊರತಾಗಿ ಪ್ರತ್ಯೇಕವಾಗಿ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ. ಇನ್ನು ಸಂಜಯ್ ಅವರ ಮೂರನೇ ಪತ್ನಿ ಪ್ರಿಯಾ ಕಪೂರ್ ಅವರು ಸಂಧಾನಕ್ಕೆ ಸಹಕರಿಸುವುದಾಗಿ ತಿಳಿಸಿದ್ದು, ಕುಟುಂಬದ ಖಾಸಗಿ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಅವರಿದ್ದ ಪೀಠವು, ಕುಟುಂಬದ ಗೌರವವನ್ನು ಕಾಪಾಡಿಕೊಳ್ಳುವಂತೆ ಕಪೂರ್ ಕುಟುಂಬದ ಸದಸ್ಯರಿಗೆ ಕಿವಿಮಾತು ಹೇಳಿದೆ. “ಕುಟುಂಬದ ಆಂತರಿಕ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸಿ ಪ್ರಕರಣವನ್ನು ಮತ್ತಷ್ಟು ಕಲುಷಿತಗೊಳಿಸಬೇಡಿ” ಎಂದು ಕೋರ್ಟ್ ಎಚ್ಚರಿಸಿದೆ. ಅಲ್ಲದೆ, ಮಾಧ್ಯಮಗಳೊಂದಿಗೆ ಮಾತನಾಡುವುದು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪೋಸ್ಟ್ ಮಾಡುವುದನ್ನು ನಿಲ್ಲಿಸಿ, ಸಕಾರಾತ್ಮಕ ಮನಸ್ಥಿತಿಯೊಂದಿಗೆ ಸಂಧಾನಕ್ಕೆ ಕುಳಿತುಕೊಳ್ಳುವಂತೆ ಸೂಚಿಸಿದೆ. ಸಂಜಯ್ ಕಪೂರ್ ಅವರ ತಾಯಿ ರಾಣಿ ಕಪೂರ್ ಅವರಿಗೆ ದೆಹಲಿಯ ರಾಜೋಕ್ರಿಯಲ್ಲಿರುವ ಫಾರ್ಮ್ಹೌಸ್ಗೆ ಪ್ರವೇಶ ನೀಡಲು ಪ್ರಿಯಾ ಕಪೂರ್ ಸಮ್ಮತಿಸಿದ್ದು, ವಿವಾದದ ತೀವ್ರತೆಯನ್ನು ತಗ್ಗಿಸುವ ಪ್ರಯತ್ನ ನಡೆದಿದೆ.
ಇದನ್ನೂ ಓದಿ ; ತಮಿಳುನಾಡಲ್ಲಿ ಮತ್ತೆ ‘ರೆಸಾರ್ಟ್ ರಾಜಕೀಯ’ : TVKಗೆ ಬೆಂಬಲ ನೀಡುವ ವಿಚಾರದಲ್ಲಿ AIADMKಯಲ್ಲಿ ಭಿನ್ನಮತ?



















