ಕಾಸ್ಗಂಜ್ (ಉತ್ತರ ಪ್ರದೇಶ): ಮದ್ಯದ ಪೆಗ್ಗೆ ಬೆರೆಸಲು ನೀರು ತಂದುಕೊಡಲು ನಿರಾಕರಿಸಿದ ಎಂಬ ಕಾರಣಕ್ಕೆ 9 ವರ್ಷದ ಬಾಲಕನನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆಯೊಂದು ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ನಡೆದಿದೆ. ನಾಮಕರಣ ಸಮಾರಂಭದ ಸಂಭ್ರಮದ ನಡುವೆಯೇ ಈ ಭೀಕರ ಕೃತ್ಯ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.\
ಸಹಾವರ್ ಪೊಲೀಸ್ ಠಾಣಾ ವ್ಯಾಪ್ತಿಯ ಯಾಕುತ್ಗಂಜ್ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಸಂತ್ರಸ್ತ ಬಾಲಕನ ಮನೆಯಲ್ಲಿಯೇ ನಾಮಕರಣ ಸಮಾರಂಭವನ್ನು ಆಯೋಜಿಸಲಾಗಿತ್ತು. ಸಮಾರಂಭದ ಹಿನ್ನೆಲೆಯಲ್ಲಿ ಮನೆಗೆ ಸಂಬಂಧಿಕರು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇದೇ ವೇಳೆ ಬಾಲಕನ ತಂದೆ ಜಸ್ವೀರ್ ಗೋಲಾ ಅವರ ಸಂಬಂಧಿಯೂ ಆಗಿರುವ ಆರೋಪಿ ಧನೇಶ್ ಯಾದವ್ ಎಂಬಾತ ಸಮಾರಂಭದ ನಡುವೆಯೂ ಮದ್ಯಪಾನ ಮಾಡುತ್ತಿದ್ದ. ಮದ್ಯಕ್ಕೆ ಬೆರೆಸಲು ನೀರು ತಂದುಕೊಡುವಂತೆ ಆತ ಆಟವಾಡುತ್ತಿದ್ದ ಬಾಲಕನಿಗೆ ಸೂಚಿಸಿದ್ದಾನೆ.
ಕ್ಷುಲ್ಲಕ ಕಾರಣಕ್ಕೆ ಗುಂಡಿಕ್ಕಿದ ಪಾತಕಿ
ತಾನು ಆಟವಾಡುತ್ತಿರುವುದಾಗಿ ಹೇಳಿದ ಬಾಲಕ, ನೀರು ತಂದುಕೊಡಲು ನಿರಾಕರಿಸಿದ್ದಾನೆ. ಇದರಿಂದ ಕುಪಿತಗೊಂಡ ಆರೋಪಿ ಧನೇಶ್ ಯಾದವ್, ಮದ್ಯದ ಅಮಲಿನಲ್ಲಿ ವಿವೇಚನೆ ಕಳೆದುಕೊಂಡು ತನ್ನ ಬಳಿಯಿದ್ದ ಬಂದೂಕಿನಿಂದ ನೇರವಾಗಿ ಬಾಲಕನ ಹೊಟ್ಟೆಗೆ ಗುಂಡು ಹಾರಿಸಿದ್ದಾನೆ. ಗುಂಡಿನ ಶಬ್ದ ಕೇಳುತ್ತಿದ್ದಂತೆಯೇ ನಾಮಕರಣ ಸಮಾರಂಭದಲ್ಲಿ ಆತಂಕ ಮತ್ತು ಕೋಲಾಹಲ ಉಂಟಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕನನ್ನು ತಕ್ಷಣವೇ ಕಾಸ್ಗಂಜ್ನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತನ ಸ್ಥಿತಿ ತೀರಾ ಗಂಭೀರವಾಗಿದ್ದ ಕಾರಣ ವೈದ್ಯರ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಅಲಿಗಢದ ಆಸ್ಪತ್ರೆಗೆ ರವಾನಿಸಲಾಯಿತು.
ಚಿಕಿತ್ಸೆ ಫಲಿಸದೆ ಸಾವು, ಆರೋಪಿ ಸೆರೆ
ಅಲಿಗಢದ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇತ್ತ ಘಟನೆ ನಡೆದ ತಕ್ಷಣವೇ ಆರೋಪಿ ಧನೇಶ್ ಸ್ಥಳದಿಂದ ಪರಾರಿಯಾಗಿದ್ದ. ಬಾಲಕನ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತೀವ್ರ ಶೋಧ ನಡೆಸಿ ಆರೋಪಿಯನ್ನು ಖಿತೌಲಿ ಕಾಲುವೆ ಸೇತುವೆಯ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯಕ್ಕೆ ಬಳಸಲಾದ ಬಂದೂಕನ್ನು ಸಹ ಆತನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಠಾಣಾಧಿಕಾರಿ ಗೋವಿಂದ್ ಬಲ್ಲಭ್ ಶರ್ಮಾ ಮಾಹಿತಿ ನೀಡಿದ್ದಾರೆ.
ಈ ಅಮಾನವೀಯ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಭಾರ್ತಿ, “ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ಕೃತ್ಯದ ಹಿಂದಿನ ಇತರ ಎಲ್ಲಾ ಆಯಾಮಗಳ ಕುರಿತಾಗಿಯೂ ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಕತ್ತು ಸೀಳಲ್ಪಟ್ಟು ಕೊಲೆಯಾದ ಪತ್ನಿಯ ಶವದ ಮುಂದೆ ಕಣ್ಣೀರಿಟ್ಟಿದ್ದ ಗಂಡನೇ ಹಂತಕ!



















