ಮೀರತ್ (ಉತ್ತರ ಪ್ರದೇಶ): ತನ್ನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಪತ್ನಿಯನ್ನೇ ಪೇಪರ್ ಕಟ್ಟರ್ನಿಂದ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿ, ಬಳಿಕ ಇದೊಂದು ಕಳ್ಳತನದ ಯತ್ನ ಎಂದು ಬಿಂಬಿಸಲು ಯತ್ನಿಸಿದ ಪಾಪಿ ಪತಿಯನ್ನು ಉತ್ತರ ಪ್ರದೇಶದ ಮೀರತ್ ಪೊಲೀಸರು ಬಂಧಿಸಿದ್ದಾರೆ. ಪತ್ನಿಯ ಶವದ ಮುಂದೆ ನಿಂತು ಕಣ್ಣೀರು ಸುರಿಸುವ ಮೂಲಕ ಪೊಲೀಸರ ಕಣ್ಣಿಗೆ ಮಣ್ಣೆರಚಲು ಯತ್ನಿಸಿದ್ದ ಈತನ ಅಸಲಿ ಮುಖ ತನಿಖೆಯ ವೇಳೆ ಬಯಲಾಗಿದೆ.
ಅನೈತಿಕ ಸಂಬಂಧ ಪ್ರಶ್ನಿಸಿದ್ದೇ ಕೊಲೆಗೆ ಕಾರಣ
ಮೀರತ್ನ ಲಿಸಾರಿ ಗೇಟ್ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಕೌಸರ್ ಎಂಬ ಮಹಿಳೆ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದಳು. ಆರಂಭದಲ್ಲಿ ದುಷ್ಕರ್ಮಿಗಳು ಚೂಪಾದ ಆಯುಧದಿಂದ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿತ್ತು. ಆದರೆ, ಪೊಲೀಸರು ತನಿಖೆ ಚುರುಕುಗೊಳಿಸಿದಾಗ ಪತಿ ಸಾಕಿಬ್ ಮೇಲೆಯೇ ಅನುಮಾನ ವ್ಯಕ್ತವಾಗಿದೆ. ಸಾಕಿಬ್ ಬೇರೊಬ್ಬ ಮಹಿಳೆಯೊಂದಿಗೆ ಹೊಂದಿದ್ದ ಅನೈತಿಕ ಸಂಬಂಧಕ್ಕೆ ಕೌಸರ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಳು. ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಪತ್ನಿಯಿಂದಲೇ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಿದೆ ಎಂದು ಭಾವಿಸಿದ ಸಾಕಿಬ್, ಕೌಸರ್ ಗಾಢ ನಿದ್ರೆಯಲ್ಲಿದ್ದಾಗ ಪೇಪರ್ ಕಟ್ಟರ್ ಬಳಸಿ ಆಕೆಯ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಕಳ್ಳತನದ ಕತೆ ಕಟ್ಟಿ ಕಣ್ಣೀರು ಸುರಿಸಿದ್ದ ಪಾತಕಿ
ಕೊಲೆಯ ನಂತರ ಸಾಕಿಬ್ ಪೊಲೀಸರು ಮತ್ತು ತನ್ನ ಕುಟುಂಬದವರನ್ನು ದಾರಿ ತಪ್ಪಿಸಲು ಹೈಡ್ರಾಮಾ ಮಾಡಿದ್ದಾನೆ. ಕಪ್ಪು ಬಟ್ಟೆ ಧರಿಸಿದ್ದ ಅಪರಿಚಿತ ದುಷ್ಕರ್ಮಿಯೊಬ್ಬ ಮನೆಗೆ ನುಗ್ಗಿ ಕೊಲೆ ಮಾಡಿದ್ದಾನೆ ಎಂದು ಕತೆ ಕಟ್ಟಿದ್ದ. ಅಷ್ಟೇ ಅಲ್ಲದೆ, ಘಟನೆ ನಡೆದಾಗ ಮನೆಯಲ್ಲಿದ್ದ ತನ್ನ ಮೂವರು ಚಿಕ್ಕ ಹೆಣ್ಣುಮಕ್ಕಳಲ್ಲಿ ಒಬ್ಬಳಿಗೆ, ‘ಮನೆಗೆ ಕಳ್ಳರು ಬಂದು ಅಮ್ಮನನ್ನು ಕೊಂದರು’ ಎಂದು ಪೊಲೀಸರ ಬಳಿ ಸುಳ್ಳು ಹೇಳುವಂತೆ ಬಲವಂತವಾಗಿ ಸೂಚಿಸಿದ್ದ. ತನ್ನ ಮೇಲೆ ಯಾರಿಗೂ ಅನುಮಾನ ಬಾರದಿರಲಿ ಎಂದು ಪತ್ನಿಯ ಶವದ ಮುಂದೆ ನಿಂತು ಬಿಕ್ಕಿ ಬಿಕ್ಕಿ ಅಳುತ್ತಾ ನಾಟಕವಾಡಿದ್ದ.
ತನಿಖೆಯಲ್ಲಿ ಬಣ್ಣ ಬಯಲು
ಪೊಲೀಸರ ವಿಚಾರಣೆ ವೇಳೆ ಸಾಕಿಬ್ ಪದೇ ಪದೇ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದ. ಇದರಿಂದ ಅನುಮಾನಗೊಂಡ ಪೊಲೀಸರು ಸಾಕ್ಷ್ಯಾಧಾರಗಳನ್ನು ಕಲೆಹಾಕಿ ತೀವ್ರ ವಿಚಾರಣೆ ನಡೆಸಿದಾಗ ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆತ ನೀಡಿದ ಮಾಹಿತಿಯ ಆಧಾರದ ಮೇಲೆ ಕೊಲೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ. ಹಗಲಿನಲ್ಲಿ ಮೊಬೈಲ್ ಟವರ್ ಅಳವಡಿಸುವ ಕೆಲಸ ಮತ್ತು ರಾತ್ರಿ ಮಂಡಿಯಲ್ಲಿ ರಿಕ್ಷಾ ಓಡಿಸುತ್ತಿದ್ದ ಈತ, ಈ ಹಿಂದೆಯೂ ಪತ್ನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಕಿರುಕುಳ ಹಾಗೂ ಪ್ರಚೋದನೆ ನೀಡುತ್ತಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಮೀರತ್ ಎಸ್ಪಿ (ನಗರ) ವಿನಾಯಕ್ ಗೋಪಾಲ್ ಭೋಸಲೆ ಸ್ಪಷ್ಟಪಡಿಸಿದ್ದಾರೆ.
ದಂಪತಿಯ ಈ ಜಗಳ ಮತ್ತು ತಂದೆಯ ಕ್ರೌರ್ಯಕ್ಕೆ ಮೂವರು ಮುಗ್ಧ ಹೆಣ್ಣುಮಕ್ಕಳು ಬಲಿಯಾಗಿದ್ದಾರೆ. ತಾಯಿ ಕೊಲೆಯಾಗಿ, ತಂದೆ ಜೈಲು ಪಾಲಾದ ಕಾರಣ ಈ ಮಕ್ಕಳು ಇದೀಗ ಅನಾಥರಾಗಿದ್ದು, ಅವರ ಭವಿಷ್ಯ ಮತ್ತು ಪಾಲನೆಯ ಕುರಿತು ಆತಂಕ ಎದುರಾಗಿದೆ.
ಇದನ್ನೂ ಓದಿ : ಕಮರ್ಷಿಯಲ್ ಗ್ಯಾಸ್ ದರ ಇಳಿಸಿ – ಬೆಂಗಳೂರು ಹೋಟೆಲ್ ಅಸೋಸಿಯೇಷನ್ನಿಂದ ಪ್ರಧಾನಿ ಮೋದಿಗೆ ಪತ್ರ!



















