ಬೆಂಗಳೂರು : ನಗರದಲ್ಲಿ ಮತ್ತೊಂದು ಬೃಹತ್ ಭೂ ಹಗರಣ ಬಯಲಿಗೆ ಬಂದಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸೇರಿದ ಸುಮಾರು 160 ಕೋಟಿ ರೂ. ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲು ಯತ್ನಿಸಿದ ಆರೋಪದ ಮೇಲೆ ಐವರ ವಿರುದ್ಧ ಶೇಷಾದ್ರಿಪುರಂ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಬೆಂಗಳೂರು ದಕ್ಷಿಣದ ಕೊತ್ತನೂರಿನಲ್ಲಿ ಬೆಲೆಬಾಳುವ ಆಸ್ತಿಯನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಯತ್ನಿಸಿದ ಲಕ್ಷ್ಮೀನಾರಾಯಣ, ಮಾರುತಿ ಕುಮಾರ್ ಸೇರಿದಂತೆ ಐವರ ವಿರುದ್ಧ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿವೆ.
ಡಿವೈಎಸ್ಪಿ ಹನುಮಂತರಾಯ ಅವರು ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣವನ್ನು ದಾಖಲಿಸಲಾಗಿದ್ದು, ಸರ್ಕಾರಿ ಜಾಗವನ್ನು ನಕಲಿ ದಾಖಲೆಗಳ ಮೂಲಕ ಗುಳುಂ ಮಾಡಲು ಯತ್ನಿಸಿದ ಭೂಗಳ್ಳರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಈ 160 ಕೋಟಿ ರೂ. ಮೌಲ್ಯದ ಜಾಗವು ಸರ್ವೆ ನಂಬರ್ 177/1 ಮತ್ತು 176/1 ರಲ್ಲಿ ಬರುವ 10 ಗುಂಟೆ ಆಸ್ತಿಯಾಗಿದೆ. ಬಿಡಿಎ ಈ ಆಸ್ತಿಯನ್ನು 1994ರ ಅಕ್ಟೋಬರ್ನಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿ ಸ್ವಾಧೀನಪಡಿಸಿಕೊಂಡಿತ್ತು. 1995ರ ಡಿಸೆಂಬರ್ನಲ್ಲಿ ಇದಕ್ಕೆ ಸಂಬಂಧಿಸಿದ ತೀರ್ಪು ಅನುಮೋದನೆಗೊಂಡಿತ್ತು ಮತ್ತು 1999ರಲ್ಲಿ ಇದನ್ನು ಅಭಿಯಂತರ ವಿಭಾಗಕ್ಕೆ ಹಸ್ತಾಂತರಿಸಲಾಗಿತ್ತು.
ಈ ಜಮೀನು ಬಿಡಿಎಗೆ ಸೇರಿದ್ದೆಂದು ಕರ್ನಾಟಕ ಹೈಕೋರ್ಟ್ ಸಹ ಆದೇಶ ನೀಡಿತ್ತು. ಅಷ್ಟೇ ಅಲ್ಲದೆ, 1996ರಲ್ಲಿ ವಾರಸುದಾರರಾದ ಮಾರಿಯಮ್ಮ ಅವರಿಗೆ ಬಿಡಿಎ ಕಡೆಯಿಂದ ಪರಿಹಾರವನ್ನೂ ನೀಡಲಾಗಿತ್ತು. ಆದರೂ, ಆರೋಪಿಗಳು ನಕಲಿ ಜಿಪಿಎ ದಾಖಲೆಗಳನ್ನು ಸೃಷ್ಟಿಸಿ ಈ ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ಕಬಳಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಹರ್ಷವರ್ಧನ್ ಎಂಬುವರು ಬಿಡಿಎ ಆಯುಕ್ತರಿಗೆ ಈ ಬಗ್ಗೆ ದೂರು ನೀಡಿದ್ದರು. ಡಿವೈಎಸ್ಪಿ ಹನುಮಂತರಾಯ ಅವರು ಈ ದೂರಿನ ತನಿಖೆ ನಡೆಸಿ, ನಕಲಿ ದಾಖಲೆಗಳ ಸೃಷ್ಟಿ ನಡೆದಿರುವುದನ್ನು ಖಚಿತಪಡಿಸಿಕೊಂಡ ನಂತರ ಎಫ್ಐಆರ್ ದಾಖಲಿಸಲಾಗಿದೆ. ಪ್ರತ್ಯೇಕ ಸರ್ವೆ ನಂಬರ್ಗಳ ಕಾರಣದಿಂದ ಎರಡು ಪ್ರತ್ಯೇಕ ಎಫ್ಐಆರ್ಗಳನ್ನು ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ ; 8ನೇ ವೇತನ ಆಯೋಗ : ಸಲಹೆ, ಸೂಚನೆ ನೀಡುವ ದಿನಾಂಕ ವಿಸ್ತರಣೆ.. ಇಲ್ಲಿದೆ ಹೊಸ ಅಪ್ಡೇಟ್!



















