ಬೆಂಗಳೂರು : ಬೌರಿಂಗ್ ಆಸ್ಪತ್ರೆ ಬಳಿ ಕಾಂಪೌಂಡ್ ಕುಸಿದು 7 ಜನ ಮೃತಪಟ್ಟ ದುರಂತದ ಕುರಿತು ಸಂಬಂಧಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಸಿಲಿಕಾನ್ ಸಿಟಿಯನ್ನು ಬೆಚ್ಚಿಬೀಳಿಸಿದ ಬೌರಿಂಗ್ ಆಸ್ಪತ್ರೆಯ ತಡೆಗೋಡೆ ಕುಸಿತದ ಭೀಕರ ದುರಂತವನ್ನು ಲೋಕಾಯುಕ್ತಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಏಳು ಮಂದಿಯ ಬಲಿತೆಗೆದುಕೊಂಡ ಈ ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಿದೆ.

ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಪ್ರತಿಕ್ರಿಯಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್, “ಮಳೆಯಿಂದ ಬೆಂಗಳೂರಿನ ವಿವಿಧೆಡೆ ಉಂಟಾಗಿರುವ ಅವಾಂತರಗಳನ್ನು ಗಮನದಲ್ಲಿಟ್ಟುಕೊಂಡು ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು, ಜಿಬಿಎ ಮುಖ್ಯ ಆಯುಕ್ತರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಐದೂ ಪಾಲಿಕೆಗಳ ಆಯುಕ್ತರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವುದಾಗಿ ಹೇಳಿದ್ದಾರೆ.
ಪ್ರತಿ ಬಾರಿ ಮಳೆ ಬಂದಾಗ ಈ ರೀತಿ ಘಟನೆಗಳು ಆಗುತ್ತಿವೆ. ಹಿಂದೊಮ್ಮೆ ಹೆಬ್ಬಾಳ ರಸ್ತೆಯಲ್ಲಿ ತಾಯಿ-ಮಗು ಮೃತಪಟ್ಟ ಪ್ರಕರಣದ ನಂತರವೂ ಇನ್ನೂ ಎಚ್ಚೆತ್ತಂತಿಲ್ಲ. ಶಿಥಿಲಾವಸ್ಥೆಯ ಕಾಂಪೌಂಡ್ ಪಕ್ಕದಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡುವುದು ಎಷ್ಟು ಸರಿ? ಮಳೆ ಬಂದಾಗ ಎಷ್ಟು ಸುರಕ್ಷಿತ ಎಂದು ಪಾಲಿಕೆ ಅಧಿಕಾರಿಗಳು ಗಮನ ವಹಿಸಬೇಕಿತ್ತು. ಈ ರೀತಿಯ ಪ್ರಕರಣಗಳು ಭವಿಷ್ಯದಲ್ಲಿ ಆಗಬಾರದು. ಆದ್ದರಿಂದ ಶಿಥಿಲಾವಸ್ಥೆ ತಲುಪಿರುವ ಸಾರ್ವಜನಿಕ ಕಟ್ಟಡಗಳನ್ನ ಗುರುತಿಸಿ, ತೆರವುಗೊಳಿಸುವ ಜವಾಬ್ದಾರಿಯನ್ನ ಅಧಿಕಾರಿಗಳಿಗೆ ನಿಗದಿಗೊಳಿಸಬೇಕಿದೆ. ಸಂಬಂಧಪಟ್ಟ ಅಧಿಕಾರಿಗಳನ್ನ ಕರೆಸಿ ತನಿಖೆ ನಡೆಸಲಿದ್ದೇವೆ ಎಂದು ನ್ಯಾಯಮೂರ್ತಿ ಬಿ.ಎಸ್ ಪಾಟೀಲ್ ಅವರು ತಿಳಿಸಿದ್ದಾರೆ.
“ಪ್ರಾಥಮಿಕ ಮಾಹಿತಿಯನ್ನ ಪಡೆದುಕೊಂಡಿದ್ದೇವೆ. ಕೇವಲ ಒಂದು ಗಂಟೆ ಮಳೆಗೆ ಇಷ್ಟೊಂದು ಸಮಸ್ಯೆಗಳು ಸೃಷ್ಟಿಯಾಗುವುದಾದರೆ ಮಾನ್ಸೂನ್ ಆರಂಭವಾಗುವ ಮುನ್ನ ಜಿಬಿಎ, ಬೆಸ್ಕಾಂ, ಒಳಚರಂಡಿ ಕಾಮಗಾರಿ ಇಲಾಖೆಗಳು ಇದೆಲ್ಲವನ್ನ ಗಮನಿಸುವುದಿಲ್ಲವೇ? ಕೆಲವೆಡೆ ವಿದ್ಯುತ್ ಪ್ರವಹಿಸಿ ಸಾವುಗಳಾಗಿವೆ. ಕೇವಲ ಬೌರಿಂಗ್ ಆಸ್ಪತ್ರೆಯ ಬಳಿ ಸಂಭವಿಸಿದ ಅವಘಡ ಮಾತ್ರವಲ್ಲ, ನಗರದಲ್ಲಿ ಸಂಭವಿಸಿರುವ ಎಲ್ಲಾ ಅವಘಡಗಳ ಕುರಿತು ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ” ಲೋಕಾಯುಕ್ತ ನ್ಯಾಯಮೂರ್ತಿ ಎಚ್ಚರಿಕೆ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ :
ಬುಧವಾರ ಏ.29ರ ಸಂಜೆ ನಗರದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು 7 ಜನ ಮೃತಪಟ್ಟಿದ್ದಾರೆ. ತುರ್ತು ಚಿಕಿತ್ಸಾ ವಿಭಾಗದ ಪಕ್ಕದಲ್ಲಿದ್ದ ಗೋಡೆ ಕುಸಿದ ಪರಿಣಾಮ ಪಕ್ಕದ ರಸ್ತೆಯಲ್ಲಿದ್ದ ಫುಟ್ಪಾತ್ ಮೇಲೆ ವ್ಯಾಪಾರ ಮಾಡುತ್ತಿದ್ದವರು ಹಾಗೂ ಪಾದಚಾರಿಗಳಲ್ಲಿ ಬಾಲಕಿ ಸಹಿತ 7 ಜನ ಸಾವನ್ನಪ್ಪಿದ್ದಾರೆ. ಕಾಂಪೌಂಡ್ ಗೋಡೆ ಕುಸಿದಿದ್ದರಿಂದ 10ಕ್ಕೂ ಅಧಿಕ ಮಂದಿ ಅವಶೇಷಗಳಡಿ ಸಿಲುಕಿದ್ದರು. ತಕ್ಷಣವೇ ಅಲ್ಲಿದ್ದ ಸಾರ್ವಜನಿಕರು ಕಾರ್ಯಾಚರಣೆ ನಡೆಸಿ ಕೆಲವರನ್ನು ರಕ್ಷಿಸಿದ್ದರು.
ಇದನ್ನೂ ಓದಿ : ಬೆಂಗಳೂರಿಗರೇ ಎಚ್ಚರ ; ಇಂದೂ ಸಹ ನಗರಕ್ಕೆ ಅಪ್ಪಳಿಸಲಿದೆ ರಣರಕ್ಕಸ ಮಳೆ.. ಹವಾಮಾನ ಇಲಾಖೆ ಮುನ್ಸೂಚನೆ!



















