ಮುಂಬೈ : ಮಹಾರಾಷ್ಟ್ರದ ನಾಸಿಕ್ನಲ್ಲಿರುವ ಟಿಸಿಎಸ್ (TCS) ಘಟಕದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಹಾಗೂ ಮತಾಂತರ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿಗಳು ಹೊರಬೀಳುತ್ತಲೇ ಇವೆ. ಸಂತ್ರಸ್ತೆಯ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಮತ್ತು ಬಲವಂತವಾಗಿ ಧರ್ಮ ಬದಲಾಯಿಸಲು ಬೆದರಿಕೆ ಹಾಕಿರುವ ಆರೋಪದ ಮೇಲೆ ಟಿಸಿಎಸ್ನ ಮಾಜಿ ಉದ್ಯೋಗಿ ನಿದಾ ಖಾನ್ ವಿರುದ್ಧ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯು ಪರಿಶಿಷ್ಟ ಜಾತಿಗೆ ಸೇರಿದವರಾಗಿರುವುದರಿಂದ, ಈ ಪ್ರಕರಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬುರ್ಖಾ, ಇಸ್ಲಾಮಿಕ್ ಪುಸ್ತಕಗಳ ನೀಡಿಕೆ, ಮತಾಂತರದ ಸಂಚು
ಮತಾಂತರ ಮಾಡುವ ಉದ್ದೇಶದಿಂದಲೇ ಪ್ರಮುಖ ಆರೋಪಿ ನಿದಾ ಖಾನ್ ಸಂತ್ರಸ್ತೆಗೆ ಬುರ್ಖಾ ಹಾಗೂ ಇಸ್ಲಾಮಿಕ್ ಧಾರ್ಮಿಕ ಪುಸ್ತಕಗಳನ್ನು ನೀಡಿದ್ದಳು ಎಂಬುದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಈ ವಸ್ತುಗಳನ್ನು ಈಗಾಗಲೇ ಪೊಲೀಸರು ವಶಪಡಿಸಿಕೊಂಡಿದ್ದು, ಇವುಗಳನ್ನು ಎಲ್ಲಿಂದ ತರಲಾಗಿತ್ತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಇದಲ್ಲದೆ, ಸಂತ್ರಸ್ತೆಯ ಮೊಬೈಲ್ ಫೋನ್ನಲ್ಲಿ ‘ಇಸ್ಲಾಮಿಕ್ ಅಪ್ಲಿಕೇಶನ್’ಗಳನ್ನು ಇನ್ಸ್ಟಾಲ್ ಮಾಡಿ, ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಮ್ ಮೂಲಕ ಧಾರ್ಮಿಕ ವಿಚಾರಗಳ ಲಿಂಕ್ಗಳನ್ನು ಕಳುಹಿಸುವ ಮೂಲಕ ಆಕೆಯ ಮನಸ್ಸನ್ನು ಪರಿವರ್ತಿಸಲು ಯತ್ನಿಸಲಾಗಿತ್ತು. ಅಷ್ಟೇ ಅಲ್ಲದೆ, ಸಂತ್ರಸ್ತೆಯ ಶೈಕ್ಷಣಿಕ ದಾಖಲೆಗಳನ್ನು ಕಿತ್ತುಕೊಂಡಿದ್ದ ಆರೋಪಿ, ಆಕೆಯ ಹೆಸರನ್ನು ‘ಹಾನಿಯಾ’ ಎಂದು ಬದಲಾಯಿಸಲು ಒತ್ತಾಯಿಸಿದ್ದಳು. ಈ ಪ್ರಕ್ರಿಯೆಗಾಗಿ ಮಾಲೆಗಾಂವ್ನ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಲಾಗಿತ್ತು ಎಂಬ ಅಂಶವೂ ತನಿಖೆಯಿಂದ ಬಯಲಾಗಿದೆ.
ಮಲೇಷ್ಯಾಗೆ ಕಳುಹಿಸಲು ಷಡ್ಯಂತ್ರ
ಮತಾಂತರದ ಯತ್ನದ ಜೊತೆಗೆ ಇದೊಂದು ವ್ಯವಸ್ಥಿತ ಜಾಲ ಎಂಬುದು ಸ್ಪಷ್ಟವಾಗಿದೆ. ಪ್ರಕರಣದಲ್ಲಿ ಬಂಧಿತರಾಗಿರುವ ಏಳು ಶಂಕಿತರಲ್ಲಿ ನಿದಾ ಖಾನ್ನ ಸಹೋದರ ದಾನಿಶ್ ಶೇಖ್ ಕೂಡ ಸೇರಿದ್ದಾನೆ. ಈತ ಸಂತ್ರಸ್ತೆಗೆ ಮದುವೆಯ ಸುಳ್ಳು ಭರವಸೆ ನೀಡಿ ಲೈಂಗಿಕವಾಗಿ ಶೋಷಣೆ ಮಾಡಿದ್ದ. ದಾನಿಶ್ಗೆ ಆಗಲೇ ವಿವಾಹವಾಗಿತ್ತು ಎಂಬ ಸತ್ಯ ಸಂತ್ರಸ್ತೆಗೆ ತಿಳಿದಾಗ, ಉದ್ಯೋಗದ ನೆಪವೊಡ್ಡಿ ಆಕೆಯನ್ನು ಮಲೇಷ್ಯಾಕ್ಕೆ ಕಳುಹಿಸಿ ಅಲ್ಲಿ ‘ಇಮ್ರಾನ್’ ಎಂಬಾತನ ಅಡಿಯಲ್ಲಿ ಕೆಲಸಕ್ಕೆ ಸೇರಿಸುವ ಸಂಚು ರೂಪಿಸಲಾಗಿತ್ತು. ಪ್ರಕರಣದ ಮತ್ತೊಬ್ಬ ಆರೋಪಿ ತೌಸಿಫ್ ಬಿಲಾಲ್ ಅತ್ತಾರ್, ಸಂತ್ರಸ್ತೆಯ ಖಾಸಗಿ ವಿಚಾರಗಳನ್ನು ಆಕೆಯ ಕುಟುಂಬದವರಿಗೆ ತಿಳಿಸುವುದಾಗಿ ಬೆದರಿಸಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ತೀವ್ರಗೊಂಡ ತನಿಖೆ
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಟಿಸಿಎಸ್ ಸಂಸ್ಥೆಯು ಆರೋಪಿಗಳನ್ನು ಅಮಾನತುಗೊಳಿಸಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಿದಾ ಖಾನ್ ತಾನು ಗರ್ಭಿಣಿ ಎಂದು ಹೇಳಿ ನಿರೀಕ್ಷಣಾ ಜಾಮೀನು ಕೋರಿದ್ದಳಾದರೂ, ಕಳೆದ ವಾರ ನ್ಯಾಯಾಲಯವು ಆಕೆಗೆ ರಕ್ಷಣೆ ನೀಡಲು ನಿರಾಕರಿಸಿದೆ. ಸದ್ಯ ಆಕೆ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.
ಆಕೆಯ ಮೊಬೈಲ್ ಫೋನ್ ವಶಪಡಿಸಿಕೊಂಡರೆ ಡಿಜಿಟಲ್ ಸಾಕ್ಷ್ಯಗಳು, ಕೃತ್ಯಕ್ಕೆ ಹರಿದುಬಂದ ಹಣದ ಮೂಲ ಹಾಗೂ ಆಕೆಗೆ ಆಶ್ರಯ ನೀಡಿದವರ ಬಗ್ಗೆ ಮಹತ್ವದ ಮಾಹಿತಿ ಸಿಗಲಿದೆ ಎಂದು ಪೊಲೀಸರು ಭಾವಿಸಿದ್ದಾರೆ. ಈವರೆಗೆ ಏಳು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದಂತೆ ಒಟ್ಟು ಎಂಟು ಮಂದಿ ಈ ಜಾಲದ ವಿರುದ್ಧ ದೂರು ನೀಡಿದ್ದು, ಬಂಧಿತ ಏಳು ಶಂಕಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಇವರ ಜಾಲದಲ್ಲಿ ಇನ್ನೂ ಹಲವರು ಸಿಲುಕಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ : ಪಂಜಾಬ್ ಆಟಗಾರ ಅಜ್ಮತುಲ್ಲಾಗೆ ಮಾತೃವಿಯೋಗ : ಕಂಬನಿ ಮಿಡಿದ ಅಫ್ಘಾನಿಸ್ತಾನ ಸಹ ಆಟಗಾರರು



















