ಪುದುಚೆರಿ : ದೇಶೀಯ ಕ್ರಿಕೆಟ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ಪಾಂಡಿಚೇರಿ ಕ್ರಿಕೆಟ್ ಸಂಸ್ಥೆಯು (ಸಿಎಪಿ) ತನ್ನ ಮೂವರು ಪ್ರಥಮ ದರ್ಜೆ ಕ್ರಿಕೆಟಿಗರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಕಠಿಣ ಆದೇಶ ಹೊರಡಿಸಿದೆ.
19 ವರ್ಷದೊಳಗಿನವರ (ಅಂಡರ್-19) ರಾಜ್ಯ ತಂಡದ ತರಬೇತುದಾರ ವೆಂಕಟರಾಮನ್ ಅವರ ಮೇಲೆ ಹಲ್ಲೆ ನಡೆಸಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕ್ರೀಡಾಸ್ಪೂರ್ತಿಯನ್ನು ಎತ್ತಿಹಿಡಿಯಬೇಕಾದ ಆಟಗಾರರೇ ಕೋಚ್ ಮೇಲೆ ಹಲ್ಲೆ ನಡೆಸಿರುವುದು ಕ್ರಿಕೆಟ್ ಪ್ರೇಮಿಗಳಿಗೆ ತೀವ್ರ ಆಘಾತವನ್ನುಂಟುಮಾಡಿದೆ. ಬುಧವಾರ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪಾಂಡಿಚೇರಿ ಕ್ರಿಕೆಟ್ ಮಂಡಳಿ, ಈ ಅಶಿಸ್ತಿನ ವರ್ತನೆಯ ವಿರುದ್ಧ ತಾನು ಶೂನ್ಯ ಸಹಿಷ್ಣುತೆ (ಝೀರೋ ಟಾಲರೆನ್ಸ್) ಹೊಂದಿರುವುದನ್ನು ಸ್ಪಷ್ಟಪಡಿಸಿದೆ.
ಹಲ್ಲೆ ಘಟನೆ ಹಾಗೂ ಎಫ್ಐಆರ್ ದಾಖಲು
ವರದಿಗಳ ಪ್ರಕಾರ, ಈ ಘಟನೆಯು ಕಳೆದ ವರ್ಷ ಡಿಸೆಂಬರ್ 8 ರಂದು ನಡೆದಿದೆ. ಆಟಗಾರರು ಹಾಗೂ ತರಬೇತುದಾರರ ನಡುವಿನ ಭಿನ್ನಾಭಿಪ್ರಾಯ ತೀವ್ರ ಸ್ವರೂಪ ಪಡೆದುಕೊಂಡು ಹಲ್ಲೆ ಮಾಡುವ ಹಂತಕ್ಕೆ ತಲುಪಿದೆ ಎನ್ನಲಾಗಿದೆ. ಇದೀಗ ಈ ಪ್ರಕರಣವು ಕೇವಲ ಕ್ರೀಡಾ ಮಂಡಳಿಯ ಆಂತರಿಕ ವಿಚಾರವಾಗಿ ಉಳಿದಿಲ್ಲ, ಬದಲಾಗಿ ಇದು ಗಂಭೀರ ಕಾನೂನು ಹೋರಾಟವಾಗಿ ಮಾರ್ಪಟ್ಟಿದೆ.
ಹಲ್ಲೆಗೊಳಗಾದ ತರಬೇತುದಾರರ ದೂರಿನ ಮೇರೆಗೆ ಸೆಡುರಪೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸರು ಮೂವರು ಆಟಗಾರರ ವಿರುದ್ಧ ಕೊಲೆ ಯತ್ನ ಹಾಗೂ ಹಲ್ಲೆಯಂತಹ ಗಂಭೀರ ಆರೋಪಗಳ ಅಡಿ ಚಾರ್ಜ್ ಶೀಟ್ (ದೋಷಾರೋಪ ಪಟ್ಟಿ) ಸಲ್ಲಿಸಿದ್ದಾರೆ. ಪ್ರಸ್ತುತ ಈ ಪ್ರಕರಣವು ಪುದುಚೇರಿಯ ನಾಲ್ಕನೇ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ ಎಂದು ಕ್ರೀಡಾ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ವಿವರಿಸಿದೆ.
ಆಟಗಾರರ ವೃತ್ತಿಜೀವನಕ್ಕೆ ದೊಡ್ಡ ಪೆಟ್ಟು
ಹಲ್ಲೆ ಆರೋಪದ ಮೇಲೆ ಅಮಾನತುಗೊಂಡಿರುವ ಆಟಗಾರರನ್ನು ಜೆ. ಕಾರ್ತಿಕೇಯನ್, ಎ. ಅರವಿಂದರಾಜ್ ಮತ್ತು ಎಸ್. ಸಂತೋಷ್ ಕುಮಾರನ್ ಎಂದು ಗುರುತಿಸಲಾಗಿದೆ. ಈ ಮೂವರೂ ಆಟಗಾರರು ಪುದುಚೇರಿ ದೇಶೀಯ ಕ್ರಿಕೆಟ್ ತಂಡದ ಖಾಯಂ ಸದಸ್ಯರಾಗಿದ್ದರು. ಭಾರತದ ಪ್ರಮುಖ ದೇಶೀಯ ಟೂರ್ನಿಗಳಾದ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಹಾಗೂ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಳಲ್ಲಿ ಇವರು ಪುದುಚೇರಿ ರಾಜ್ಯವನ್ನು ಪ್ರತಿನಿಧಿಸಿದ್ದರು. ಅದರಲ್ಲೂ ವೇಗಿ ಎ. ಅರವಿಂದರಾಜ್ ಇತ್ತೀಚಿನ ದೇಶೀಯ ಕ್ರಿಕೆಟ್ ಋತುವಿನಲ್ಲೂ ತಂಡದ ಭಾಗವಾಗಿದ್ದರು. ಆದರೆ, ತಮ್ಮ ಕೋಪದ ಕೈಗೆ ಬುದ್ಧಿ ಕೊಟ್ಟ ಪರಿಣಾಮ ಇದೀಗ ಈ ಉದಯೋನ್ಮುಖ ಆಟಗಾರರ ವೃತ್ತಿಬದುಕು ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ.
ಮಂಡಳಿಯ ಕಟ್ಟುನಿಟ್ಟಿನ ನಿರ್ಬಂಧಗಳು
ಆಟಗಾರರ ವಿರುದ್ಧ ಕೊಲೆ ಯತ್ನದಂತಹ ಕ್ರಿಮಿನಲ್ ಪ್ರಕರಣ ದಾಖಲಾಗಿರುವುದರಿಂದ ಪಾಂಡಿಚೇರಿ ಕ್ರಿಕೆಟ್ ಮಂಡಳಿ ಆಡಳಿತಾತ್ಮಕವಾಗಿ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಅಮಾನತುಗೊಂಡಿರುವ ಈ ಮೂವರೂ ಆಟಗಾರರಿಗೆ ಕ್ರಿಕೆಟ್ ಸಂಸ್ಥೆಯ ಯಾವುದೇ ಆವರಣವನ್ನು ಪ್ರವೇಶಿಸದಂತೆ ಹಾಗೂ ಅಲ್ಲಿನ ಯಾವುದೇ ಸೌಲಭ್ಯಗಳನ್ನು ಬಳಸದಂತೆ ಸಂಪೂರ್ಣ ನಿಷೇಧ ಹೇರಲಾಗಿದೆ. ಅಷ್ಟೇ ಅಲ್ಲದೆ, ರಾಷ್ಟ್ರೀಯ ಹಾಗೂ ಬಾಹ್ಯ ಟೂರ್ನಿಗಳಲ್ಲಿ ಪಾಲ್ಗೊಳ್ಳುವುದಕ್ಕೂ ಬ್ರೇಕ್ ಹಾಕಲಾಗಿದೆ. ನ್ಯಾಯಾಲಯದಲ್ಲಿರುವ ಪ್ರಕರಣ ಇತ್ಯರ್ಥವಾಗಿ, ಆಟಗಾರರು ತಮ್ಮ ಮೇಲಿರುವ ಎಲ್ಲ ಆರೋಪಗಳಿಂದ ಮುಕ್ತರಾಗುವವರೆಗೂ ಈ ಅಮಾನತು ಆದೇಶ ಮುಂದುವರಿಯಲಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಮೇಲ್ಮನವಿಗೆ ಅವಕಾಶ
ಕಾನೂನು ಪ್ರಕ್ರಿಯೆಗಳು ಮುಗಿಯುವವರೆಗೆ ಆಟಗಾರರಿಗೆ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳುವ ಯಾವುದೇ ಅವಕಾಶಗಳಿಲ್ಲ. ಆದಾಗ್ಯೂ, ನೈಸರ್ಗಿಕ ನ್ಯಾಯದ ತತ್ವದಡಿ, ಅಮಾನತುಗೊಂಡಿರುವ ಆಟಗಾರರು ರಾಜ್ಯ ಕ್ರಿಕೆಟ್ ಮಂಡಳಿಯ ಎಥಿಕ್ಸ್ ಆಫೀಸರ್ (ನೈತಿಕ ಅಧಿಕಾರಿ) ಅಥವಾ ಓಂಬುಡ್ಸ್ಮನ್ (ಲೋಕಾಯುಕ್ತ) ಅವರ ಮುಂದೆ ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಹೊಂದಿದ್ದಾರೆ. ಒಟ್ಟಾರೆಯಾಗಿ, ಗುರುವಿಗೆ ಬೆಲೆ ಕೊಡದ ಹಾಗೂ ಅಶಿಸ್ತು ತೋರುವ ಕ್ರೀಡಾಪಟುಗಳಿಗೆ ಇದೊಂದು ದೊಡ್ಡ ಪಾಠವಾಗಿದೆ ಎಂದು ಕ್ರೀಡಾ ವಲಯದಲ್ಲಿ ಅವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ : ಐಪಿಎಲ್ನಲ್ಲಿ ಹೊಸ ಮೈಲಿಗಲ್ಲು ನೆಟ್ಟ ವೈಭವ್ ಸೂರ್ಯವಂಶಿ : ಕೊಹ್ಲಿ, ರೋಹಿತ್ ದಾಖಲೆ ಉಡೀಸ್!



















