2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೆನಡಾ ಕ್ರಿಕೆಟ್ ತಂಡದ ಆಟಗಾರನೊಬ್ಬ ತನಗೆ ಅಸುರಕ್ಷತೆಯ ಭಾವ ಕಾಡುತ್ತಿದೆ ಎಂದು ಹೇಳಿ ಹೆಚ್ಚುವರಿ ಭದ್ರತೆಯನ್ನು ಕೋರಿರುವ ಘಟನೆ ಬೆಳಕಿಗೆ ಬಂದಿದೆ. ಶ್ರೀಲಂಕಾಕ್ಕೆ ಆಗಮಿಸಿದ ತಕ್ಷಣ ಈ ಆಟಗಾರ ಅಧಿಕಾರಿಗಳನ್ನು ಸಂಪರ್ಕಿಸಿ ರಕ್ಷಣೆ ಕೋರಿದ್ದಾರೆ ಎನ್ನಲಾಗಿದೆ.
ಟೊರೊಂಟೊ ಸನ್ ವರದಿಯ ಪ್ರಕಾರ, ಈ ಆಟಗಾರ ಸದ್ಯ ತವರಿಗೆ ಮರಳಿದ್ದು, ಈ ವಿಷಯದ ಕುರಿತು ಯಾವುದೇ ಸಂದರ್ಶನ ನೀಡಲು ನಿರಾಕರಿಸಿದ್ದಾರೆ. ಟೂರ್ನಿಯಲ್ಲಿ ಕೆನಡಾ ತಂಡವು ಆರಂಭಿಕ ಹಂತದಲ್ಲೇ ಹೊರಬಿದ್ದಿದ್ದರೂ, ಮೈದಾನದ ಹೊರಗಿನ ಇಂತಹ ಬೆಳವಣಿಗೆಗಳು ಈಗ ದೊಡ್ಡ ಚರ್ಚೆಗೆ ಕಾರಣವಾಗಿವೆ.
ಸ್ಪಾಟ್ ಫಿಕ್ಸಿಂಗ್ ಆರೋಪ ಮತ್ತು ಐಸಿಸಿ ತನಿಖೆ
ಈ ಘಟನೆಯು ಕೆನಡಾ ತಂಡದ ಸುತ್ತ ಕೇಳಿಬರುತ್ತಿರುವ ಸ್ಪಾಟ್ ಫಿಕ್ಸಿಂಗ್ ಆರೋಪಗಳ ಬೆನ್ನಲ್ಲೇ ನಡೆದಿದೆ. ಸಿಬಿಸಿ (CBC) ಸಾಕ್ಷ್ಯಚಿತ್ರವೊಂದು ಚೆನ್ನೈನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆದಿದೆ ಎಂದು ಗಂಭೀರ ಆರೋಪ ಮಾಡಿದೆ. ವಿಶೇಷವಾಗಿ ಕೆನಡಾ ನಾಯಕ ದಿಲ್ಪ್ರೀತ್ ಬಾಜ್ವಾ ಅವರು ಎಸೆದ ಒಂದು ಓವರ್ನಲ್ಲಿ ನೋ-ಬಾಲ್ ಮತ್ತು ವೈಡ್ಗಳ ಮೂಲಕ 15 ರನ್ ಬಿಟ್ಟುಕೊಟ್ಟಿರುವುದು ಐಸಿಸಿ (ICC) ಭ್ರಷ್ಟಾಚಾರ ವಿರೋಧಿ ಘಟಕದ ಸಂಶಯಕ್ಕೆ ಕಾರಣವಾಗಿದೆ. ಈ ಕುರಿತು ಬಾಜ್ವಾ ಅವರನ್ನು ಐಸಿಸಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.
ಕ್ರಿಕೆಟ್ ಕೆನಡಾದಲ್ಲಿ ಅಪರಾಧ ಜಾಲದ ಹಸ್ತಕ್ಷೇಪ?
ಸಿಬಿಸಿ ಸಾಕ್ಷ್ಯಚಿತ್ರವಾದ ‘ಕರಪ್ಷನ್, ಕ್ರೈಮ್ ಅಂಡ್ ಕ್ರಿಕೆಟ್’ ಮತ್ತೊಂದು ಭಯಾನಕ ವಿಷಯವನ್ನು ಹೊರಹಾಕಿದೆ. ಕೆನಡಾ ಕ್ರಿಕೆಟ್ ಮಂಡಳಿಯಲ್ಲಿ ಕೆಲವು ಕ್ರಿಮಿನಲ್ ಗ್ಯಾಂಗ್ಗಳ ಪ್ರಭಾವವಿದೆ ಮತ್ತು ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲು ರಾಷ್ಟ್ರೀಯ ಆಟಗಾರನೊಬ್ಬನಿಗೆ ಬೆದರಿಕೆ ಹಾಕಲಾಗಿದೆ ಎಂಬ ಅಂಶಗಳನ್ನು ಸಾಕ್ಷ್ಯಚಿತ್ರದಲ್ಲಿ ಉಲ್ಲೇಖಿಸಲಾಗಿದೆ. ಕ್ರಿಕೆಟ್ ಕೆನಡಾದ ಅಧ್ಯಕ್ಷ ಅರವಿಂದರ್ ಖೋಸಾ ಅವರು ಈ ಆರೋಪಗಳನ್ನು ನಿರಾಕರಿಸಿದ್ದರೂ, ವಿಶ್ವಕಪ್ ಆರಂಭಕ್ಕೂ ಮುನ್ನ ನಾಯಕನ ಬದಲಾವಣೆ ಮತ್ತು ಮಂಡಳಿಯ ನಿರ್ಧಾರಗಳು ಅನುಮಾನಕ್ಕೆ ದಾರಿ ಮಾಡಿಕೊಟ್ಟಿವೆ. ಪ್ರಸ್ತುತ ಐಸಿಸಿ ಈ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ತನಿಖೆಯನ್ನು ತೀವ್ರಗೊಳಿಸಿದೆ.
ಇದನ್ನೂ ಓದಿ : ಪ್ರಧಾನಿ ಮೋದಿ ‘ಭಯೋತ್ಪಾದಕ’ ಎಂದ ಖರ್ಗೆಗೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಟಾಂಗ್!



















