ಬೆಂಗಳೂರು : ವಿಶ್ವ ಕ್ರಿಕೆಟ್ನ ಶ್ರೀಮಂತ ಲೀಗ್ ಎಂದೇ ಕರೆಯಲ್ಪಡುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮತ್ತು ಪಾಕಿಸ್ತಾನ್ ಸೂಪರ್ ಲೀಗ್ (PSL) ನಡುವಿನ ಜಿದ್ದಾಜಿದ್ದಿ ಈಗ ಆಟಗಾರರ ಮೇಲೆ ಪರಿಣಾಮ ಬೀರಲಾರಂಭಿಸಿದೆ. ಶ್ರೀಲಂಕಾದ ಅನುಭವಿ ಆಲ್ರೌಂಡರ್ ದಸುನ್ ಶನಕ ಅವರು ಪಾಕಿಸ್ತಾನ್ ಸೂಪರ್ ಲೀಗ್ನ ಒಪ್ಪಂದವನ್ನು ಅರ್ಧದಲ್ಲೇ ಕೈಬಿಟ್ಟು ಐಪಿಎಲ್ ಆಡಲು ಮುಂದಾದ ಕಾರಣಕ್ಕೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ (PCB) ಅವರ ಮೇಲೆ ಒಂದು ವರ್ಷದ ನಿಷೇಧ ಹೇರಿದೆ.
ಈ ಕಠಿಣ ಕ್ರಮದ ಮೂಲಕ ಪಿಸಿಬಿ ವಿದೇಶಿ ಆಟಗಾರರಿಗೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದೆ. 2026ರ ಪಿಎಸ್ಎಲ್ ಸೀಸನ್ಗಾಗಿ ಲಾಹೋರ್ ಖಲಂದರ್ಸ್ ತಂಡದೊಂದಿಗೆ ಸುಮಾರು 75 ಲಕ್ಷ ಪಾಕಿಸ್ತಾನಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿದ್ದ ಶನಕ, ಟೂರ್ನಿ ಆರಂಭಕ್ಕೆ ಕೆಲವೇ ದಿನಗಳ ಮೊದಲು ಹಠಾತ್ ನಿರ್ಗಮಿಸಿ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೇರಿಕೊಂಡಿದ್ದರು.
ಗಾಯಾಳು ಆಟಗಾರನ ಬದಲಿಗೆ ಐಪಿಎಲ್ಗೆ ಹಾರಿದ್ದ ಶಾನಕ
ಪಿಎಸ್ಎಲ್ ಹರಾಜಿನಲ್ಲಿ ಪಾಲ್ಗೊಂಡು ಲಾಹೋರ್ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದ ಶನಕ ಅವರಿಗೆ ಐಪಿಎಲ್ನಿಂದ ಅನಿರೀಕ್ಷಿತ ಕರೆ ಬಂದಿತ್ತು. ರಾಜಸ್ಥಾನ ರಾಯಲ್ಸ್ ತಂಡದ ಪ್ರಮುಖ ಆಟಗಾರ ಸ್ಯಾಮ್ ಕರನ್ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಕಾರಣ, ಅವರ ಬದಲಿಗೆ ಆಟಗಾರನಾಗಿ ಶಾನಕ ಆಯ್ಕೆಯಾಗಿದ್ದರು. ಆರ್ಥಿಕವಾಗಿ ಮತ್ತು ವೃತ್ತಿಜೀವನದ ದೃಷ್ಟಿಯಿಂದ ಐಪಿಎಲ್ ಆಕರ್ಷಕವಾಗಿದ್ದರಿಂದ ಶನಕ ಪಿಎಸ್ಎಲ್ ಒಪ್ಪಂದವನ್ನು ಧಿಕ್ಕರಿಸಿ ಭಾರತಕ್ಕೆ ಪ್ರಯಾಣ ಬೆಳೆಸಿದ್ದರು.
ಈ ಹಠಾತ್ ನಿರ್ಧಾರವು ಲಾಹೋರ್ ಖಲಂದರ್ಸ್ ತಂಡದ ಯೋಜನೆಯನ್ನೇ ತಲೆಕೆಳಗಾಗಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪಿಸಿಬಿ, ಆಟಗಾರರು ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕು ಮತ್ತು ಅಧಿಕೃತ ಒಪ್ಪಂದಗಳನ್ನು ಗೌರವಿಸಬೇಕು ಎಂದು ಪ್ರತಿಪಾದಿಸಿ ಈ ಶಿಕ್ಷೆ ವಿಧಿಸಿದೆ.
ತಪ್ಪೊಪ್ಪಿಗೆ ಹಾಗೂ ಕ್ಷಮೆಯಾಚಿಸಿದ ಶ್ರೀಲಂಕಾ ಆಲ್ರೌಂಡರ್ ತನ್ನ ವಿರುದ್ಧ ಕ್ರಮ ಜರುಗಿದ ಬೆನ್ನಲ್ಲೇ ದಸುನ್ ಶನಕ ಅವರು ಪಿಸಿಬಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
“ಪಿಎಸ್ಎಲ್ನಿಂದ ಹಿಂದೆ ಸರಿಯುವ ನನ್ನ ನಿರ್ಧಾರದ ಬಗ್ಗೆ ನನಗೆ ವಿಷಾದವಿದೆ. ಪಾಕಿಸ್ತಾನದ ಜನತೆ, ಪಿಎಸ್ಎಲ್ ಅಭಿಮಾನಿಗಳು ಮತ್ತು ವಿಶೇಷವಾಗಿ ಲಾಹೋರ್ ಖಲಂದರ್ಸ್ ಫ್ರಾಂಚೈಸಿಯ ಕ್ಷಮೆಯಾಚಿಸುತ್ತೇನೆ. ಇದೊಂದು ಪ್ರತಿಷ್ಠಿತ ಟೂರ್ನಿಯಾಗಿದ್ದು, ನನ್ನ ನಿರ್ಧಾರದಿಂದ ಉಂಟಾದ ಅಸಮಾಧಾನವನ್ನು ನಾನು ಅರ್ಥಮಾಡಿಕೊಂಡಿದ್ದೇನೆ,” ಎಂದು ಅವರು ತಿಳಿಸಿದ್ದಾರೆ. ಆದಾಗ್ಯೂ, ಮಂಡಳಿಯು ಅವರ ಕ್ಷಮೆಯಾಚನೆಯನ್ನು ಕೇವಲ ದಾಖಲೆಗೆ ಸೀಮಿತಗೊಳಿಸಿ, ನಿಯಮದಂತೆ ಮುಂದಿನ ಒಂದು ವರ್ಷದವರೆಗೆ ಲೀಗ್ನಿಂದ ಅವರನ್ನು ದೂರವಿಟ್ಟಿದೆ.
ಬ್ಲೆಸ್ಸಿಂಗ್ ಮುಜರಬಾನಿಗೂ ಬಿತ್ತು ಎರಡು ವರ್ಷಗಳ ನಿಷೇಧದ ಬರೆ
ಕೇವಲ ಶಾನಕ ಮಾತ್ರವಲ್ಲದೆ, ಜಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಜರಬಾನಿ ಕೂಡ ಇದೇ ರೀತಿಯ ಶಿಕ್ಷೆಗೆ ಗುರಿಯಾಗಿದ್ದಾರೆ. ಮುಜರಬಾನಿ ಅವರು ಇಸ್ಲಾಮಾಬಾದ್ ಯುನೈಟೆಡ್ ತಂಡದೊಂದಿಗಿನ ಒಪ್ಪಂದವನ್ನು ಮುರಿದು, ಮುಸ್ತಫಿಜುರ್ ರೆಹಮಾನ್ ಬದಲಿಗೆ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು ಸೇರಿದ್ದರು.
ಇವರ ವರ್ತನೆಯನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಿದ ಪಿಸಿಬಿ, ಅವರಿಗೆ ಎರಡು ವರ್ಷಗಳ ಕಾಲ ಪಿಎಸ್ಎಲ್ ನಿಷೇಧ ಹೇರಿದೆ. ಐಪಿಎಲ್ ಮತ್ತು ಪಿಎಸ್ಎಲ್ ವೇಳಾಪಟ್ಟಿಗಳು ಒಂದಕ್ಕೊಂದು ಸಂಘರ್ಷಕ್ಕೀಡಾಗುತ್ತಿರುವುದರಿಂದ, ಆಟಗಾರರು ಐಪಿಎಲ್ನ ದೊಡ್ಡ ಮೊತ್ತದ ಹಣದ ಆಸೆಗೆ ಬಿದ್ದು ಪಿಎಸ್ಎಲ್ ಅನ್ನು ಅಲಕ್ಷಿಸುತ್ತಿದ್ದಾರೆ ಎಂಬುದು ಪಿಸಿಬಿ ವಾದವಾಗಿದೆ. ಈ ಹಿನ್ನೆಲೆಯಲ್ಲಿ ಮಂಡಳಿಯು ಮುಂಬರುವ ದಿನಗಳಲ್ಲಿ ಇನ್ನಷ್ಟು ಕಠಿಣ ನಿಯಮಗಳನ್ನು ರೂಪಿಸಲು ಸಜ್ಜಾಗಿದೆ.
ಇದನ್ನೂ ಓದಿ : GST ದತ್ತಾಂಶದಿಂದ ಗುಂಡಿನ ದಾಳಿಯವರೆಗೆ – ಬಿಷ್ಣೋಯ್ ಗ್ಯಾಂಗ್ನ ‘ಡಿಜಿಟಲ್ ಸುಲಿಗೆ’ಯ ಕರಾಳ ಮುಖ ಬಹಿರಂಗ!


















