ನವದೆಹಲಿ : ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಇಂದು ಸಂಸತ್ನ ವಿಶೇಷ ಅಧಿವೇಶನದಲ್ಲಿ ಮಂಡಿಸಿರುವ 3 ಪ್ರಮುಖ ಮಸೂದೆಗಳು ಭಾರೀ ಚರ್ಚೆ ಹಾಗೂ ಸಂಘರ್ಷಕ್ಕೆ ಕಾರಣವಾಗುವ ಲಕ್ಷಣ ಗೋಚರಿಸುತ್ತಿದೆ.
ಈ ಮಸೂದೆಗಳು ಕೇವಲ ಮಹಿಳಾ ಮೀಸಲಾತಿಗೆ ಮಾತ್ರ ಸೀಮಿತವಾಗಿರದೆ, ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ, ಜನಗಣತಿ ಆಧಾರಿತ ಸೀಟು ಹಂಚಿಕೆ ಮತ್ತು ಒಕ್ಕೂಟ ವ್ಯವಸ್ಥೆಯ ಸಮತೋಲನದಂತಹ ಅತ್ಯಂತ ಸೂಕ್ಷ್ಮ ಹಾಗೂ ಗಂಭೀರ ವಿಚಾರಗಳನ್ನು ಒಳಗೊಂಡಿರುವುದು ವಿರೋಧ ಪಕ್ಷಗಳು ಮತ್ತು ಸಂವಿಧಾನ ತಜ್ಞರ ಆತಂಕಕ್ಕೆ ಕಾರಣವಾಗಿದೆ.
3 ಪ್ರಮುಖ ಮಸೂದೆಗಳ ಸ್ವರೂಪ ಮತ್ತು ಉದ್ದೇಶ
ಮೊದಲನೆಯದ್ದು ಸಾಂವಿಧಾನಿಕ ತಿದ್ದುಪಡಿ ಮಸೂದೆ. ಇದು ಲೋಕಸಭೆಯ ಒಟ್ಟು ಸದಸ್ಯರ ಬಲವನ್ನು 850ಕ್ಕೆ ಹೆಚ್ಚಿಸುವ ಪ್ರಸ್ತಾಪವನ್ನು ಹೊಂದಿದೆ. ಇದರಲ್ಲಿ 815 ಸದಸ್ಯರು ರಾಜ್ಯಗಳಿಂದ ನೇರವಾಗಿ ಆಯ್ಕೆಯಾದರೆ, ಉಳಿದ 35 ಸ್ಥಾನಗಳನ್ನು ಕೇಂದ್ರಾಡಳಿತ ಪ್ರದೇಶಗಳಿಗೆ ಮೀಸಲಿಡುವ ಉದ್ದೇಶವಿದೆ. ಇದರ ಜೊತೆಗೆ, ರಾಜ್ಯಗಳ ಜನಸಂಖ್ಯೆಗೆ ಅನುಗುಣವಾಗಿ ವಿಧಾನಸಭೆಗಳ ಸ್ಥಾನಗಳ ಸಂಖ್ಯೆಯನ್ನು ಪರಿಷ್ಕರಿಸುವ ಪ್ರಸ್ತಾಪವೂ ಇದರಲ್ಲಿದೆ.
2ನೇ ಮಸೂದೆಯು ಕೇಂದ್ರಾಡಳಿತ ಪ್ರದೇಶಗಳ ಕಾಯ್ದೆ, ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ ಹಾಗೂ ದೆಹಲಿ ಕಾಯ್ದೆಗಳಿಗೆ ತಿದ್ದುಪಡಿ ತಂದು ಆಯಾ ಪ್ರದೇಶಗಳಲ್ಲಿ ಕ್ಷೇತ್ರಗಳ ಪುನರ್ವಿಂಗಡಣೆಗೆ ಅವಕಾಶ ಮಾಡಿಕೊಡಲಿದೆ.
ಇನ್ನು 3ನೇ ಮಸೂದೆಯು, ಈ ಸಂಪೂರ್ಣ ಪ್ರಕ್ರಿಯೆಯನ್ನು ನಿರ್ವಹಿಸಲು ಹೊಸ ಡಿಲಿಮಿಟೇಶನ್(ಮರುವಿಂಗಡಣಾ ಆಯೋಗ) ಆಯೋಗವನ್ನು ರಚಿಸಲು ಪ್ರಸ್ತಾಪಿಸುತ್ತದೆ. ಈ 850 ಸ್ಥಾನಗಳ ಲೆಕ್ಕಾಚಾರ ಹೇಗೆ ಬಂತು ಮತ್ತು ಅವುಗಳನ್ನು ರಾಜ್ಯಗಳಿಗೆ ಹೇಗೆ ಹಂಚಿಕೆ ಮಾಡಲಾಗುತ್ತದೆ ಎಂಬ ಬಗ್ಗೆ ವಿರೋಧ ಪಕ್ಷಗಳು ತೀವ್ರ ಪ್ರಶ್ನೆಗಳನ್ನು ಎತ್ತುತ್ತಿವೆ.
ಮಹಿಳಾ ಮೀಸಲಾತಿ ತಕ್ಷಣ ಜಾರಿಯಾಗುತ್ತದೆಯೇ?
ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಗೊಂಡರೂ ಅದು ತಕ್ಷಣವೇ ಜಾರಿಗೆ ಬರುವುದಿಲ್ಲ ಎಂಬುದೇ ಇಲ್ಲಿನ ಪ್ರಮುಖ ಅಂಶ. ಉದ್ದೇಶಿತ 334ಎ ವಿಧಿಯ ತಿದ್ದುಪಡಿಯ ಪ್ರಕಾರ, ಕ್ಷೇತ್ರಗಳ ಪುನರ್ವಿಂಗಡಣೆ ಪ್ರಕ್ರಿಯೆ ಪೂರ್ಣಗೊಂಡ ನಂತರವಷ್ಟೇ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ. ಇದೇ ಕಾರಣಕ್ಕೆ ಮಹಿಳಾ ಸಂಘಟನೆಗಳು, ಸಂಸದರು ಹಾಗೂ ಕಾನೂನು ತಜ್ಞರು, ಜನಸಂಖ್ಯೆಯ ಏರಿಳಿತಗಳಿಗೂ ಶೇ.33ರಷ್ಟು ನಿಗದಿತ ಮೀಸಲಾತಿಗೂ ಸಂಬಂಧವಿಲ್ಲದಿರುವುದರಿಂದ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ಮೀಸಲಾತಿಯಿಂದ ಪ್ರತ್ಯೇಕಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಜಾರಿಯಾದ ದಿನದಿಂದ 15 ವರ್ಷಗಳ ಕಾಲ ಈ ಮೀಸಲಾತಿ ಅಸ್ತಿತ್ವದಲ್ಲಿರಲಿದ್ದು, ಪರ್ಯಾಯ (ರೊಟೇಶನ್) ಆಧಾರದ ಮೇಲೆ ಮಹಿಳೆಯರಿಗೆ, ಅದರಲ್ಲಿಯೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗೆ ಸ್ಥಾನಗಳನ್ನು ಹಂಚಿಕೆ ಮಾಡಲಾಗುತ್ತದೆ.
ಜನಗಣತಿ ಮತ್ತು ಪ್ರಾತಿನಿಧ್ಯದ ವಿವಾದ
ಈ ಪ್ರಕ್ರಿಯೆಯಲ್ಲಿ ಯಾವ ವರ್ಷದ ಜನಗಣತಿಯನ್ನು ಆಧಾರವಾಗಿಟ್ಟುಕೊಳ್ಳಲಾಗುತ್ತದೆ ಎಂಬುದು ಸದ್ಯದ ಅತಿ ದೊಡ್ಡ ವಿವಾದ. ಸಂವಿಧಾನದ 81ನೇ ವಿಧಿಯ ಪ್ರಕಾರ ಲೋಕಸಭಾ ಸ್ಥಾನಗಳನ್ನು ಜನಸಂಖ್ಯೆಯ ಆಧಾರದ ಮೇಲೆ ಹಂಚಿಕೆ ಮಾಡಲಾಗುತ್ತದೆ. ಆದರೆ, 2001 ಮತ್ತು 2003ರ ತಿದ್ದುಪಡಿಗಳ ಮೂಲಕ 1971ರ ಜನಗಣತಿಯ ಆಧಾರದ ಮೇಲಿದ್ದ ಸೀಟುಗಳ ಹಂಚಿಕೆಯನ್ನು 2026ರ ನಂತರದ ಮೊದಲ ಜನಗಣತಿಯವರೆಗೆ ಯಥಾಸ್ಥಿತಿಯಲ್ಲಿ (ಫ್ರೀಜ್) ಇರಿಸಲಾಗಿತ್ತು. ಇದೀಗ ಹೊಸ ಮಸೂದೆಯು ಈ ನಿರ್ಬಂಧವನ್ನು ಸಡಿಲಿಸಿ, ಸಂಸತ್ತು ನಿರ್ಧರಿಸುವ ಯಾವುದೇ ಹೊಸ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ವಿಂಗಡಣೆ ಮಾಡಲು ಅವಕಾಶ ಕಲ್ಪಿಸುತ್ತದೆ. ಇದು 2011ರ ಜನಗಣತಿಯನ್ನು ಬಳಸಲಾಗುತ್ತದೆಯೋ ಅಥವಾ ಹೊಸ ದತ್ತಾಂಶವನ್ನು ಆಧರಿಸಲಾಗುತ್ತದೆಯೋ ಎಂಬ ಗೊಂದಲವನ್ನು ಸೃಷ್ಟಿಸಿದೆ.
ದಕ್ಷಿಣ ಭಾರತದ ರಾಜ್ಯಗಳ ಆತಂಕವೇಕೆ?
ಜನಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿರುವ ದಕ್ಷಿಣ ಭಾರತದ ರಾಜ್ಯಗಳಿಗೆ ಈ ಹೊಸ ಪ್ರಾತಿನಿಧ್ಯದ ಲೆಕ್ಕಾಚಾರ ನುಂಗಲಾರದ ತುತ್ತಾಗಿದೆ. ಜನಸಂಖ್ಯಾ ಸ್ಫೋಟವನ್ನು ಯಶಸ್ವಿಯಾಗಿ ತಡೆದ ರಾಜ್ಯಗಳು ಸಂಸತ್ತಿನಲ್ಲಿ ತಮ್ಮ ಪ್ರಾತಿನಿಧ್ಯವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದರೆ, ಜನಸಂಖ್ಯೆ ಹೆಚ್ಚಿರುವ ರಾಜ್ಯಗಳು ಹೆಚ್ಚಿನ ಸೀಟುಗಳನ್ನು ಪಡೆಯುವ ಸಾಧ್ಯತೆಯಿದೆ. ಇದು ರಾಜ್ಯಗಳ ರಾಜಕೀಯ ಚೌಕಾಸಿಯ ಶಕ್ತಿಯನ್ನು ಕುಗ್ಗಿಸಲಿದೆ ಮತ್ತು ಪ್ರಾದೇಶಿಕ ಅಸಮತೋಲನಕ್ಕೆ ಕಾರಣವಾಗಲಿದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅಭಿಪ್ರಾಯಪಟ್ಟಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೇರಿದಂತೆ ಹಲವು ನಾಯಕರು, ಸಂವಿಧಾನಾತ್ಮಕ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದರ ವಿರುದ್ಧ ಎಚ್ಚರಿಕೆ ನೀಡಿದ್ದು, ವಿರೋಧ ಪಕ್ಷಗಳು ತಾವು ಮಹಿಳಾ ಮೀಸಲಾತಿ ಪರವಾಗಿದ್ದೇವೆ, ಆದರೆ ಕ್ಷೇತ್ರ ಪುನರ್ವಿಂಗಡಣೆಯ ವಿರುದ್ಧವಾಗಿದ್ದೇವೆ ಎಂಬ ನಿಲುವನ್ನು ಸ್ಪಷ್ಟಪಡಿಸಿವೆ.
ಇದನ್ನೂ ಓದಿ : GBA ವ್ಯಾಪ್ತಿಯ ಐದು ಪಾಲಿಕೆಗಳ ಬಜೆಟ್ಗೆ ಸರ್ಕಾರ ಒಪ್ಪಿಗೆ!


















