ಟೆಹ್ರಾನ್: ಯುದ್ಧಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಪಾಕಿಸ್ತಾನದಲ್ಲಿ ಇಂದು ಅಮೆರಿಕ-ಇರಾನ್ ನಡುವೆ ಶಾಂತಿ ಮಾತುಕತೆ ನಡೆಯುತ್ತಿರುವ ಬೆನ್ನಲ್ಲೇ, ಖ್ಯಾತ ರಾಜಕೀಯ ವಿಶ್ಲೇಷಕ ಮತ್ತು ‘ಯುರೇಷಿಯಾ ಗ್ರೂಪ್’ ಸಂಸ್ಥಾಪಕ ಐಯಾನ್ ಬ್ರೆಮ್ಮರ್ ಸ್ಫೋಟಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಇರಾನ್ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ತಮ್ಮ ತಂದೆಯ ಸಾವಿಗೆ ಪ್ರತಿಕಾರ ತೀರಿಸಿಕೊಳ್ಳುವ ತೀವ್ರ ಹಪಾಹಪಿಯಲ್ಲಿದ್ದು, ಇದು ಶಾಂತಿ ಪ್ರಕ್ರಿಯೆಗೆ ಅತಿ ದೊಡ್ಡ ಕಂಟಕವಾಗುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಖಾಸಗಿ ಸುದ್ದಿವಾಹಿನಿಯ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಬ್ರೆಮ್ಮರ್, ಮೊಜ್ತಬಾ ಖಮೇನಿ ಅವರ ನಿರ್ಧಾರಗಳು ಕೇವಲ ರಾಜತಾಂತ್ರಿಕ ತರ್ಕಕ್ಕೆ ಸೀಮಿತವಾಗಿಲ್ಲ ಎಂದು ವಿಶ್ಲೇಷಿಸಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ತನ್ನ ತಂದೆ ಆಯತೊಲ್ಲಾ ಅಲಿ ಖಮೇನಿ ಮತ್ತು ಕುಟುಂಬದ ಇತರ ಸದಸ್ಯರನ್ನು ಕಳೆದುಕೊಂಡಿರುವ ಮೊಜ್ತಬಾ ಅವರು ಅತೀವ ಸಿಟ್ಟಿನಲ್ಲಿದ್ದಾರೆ. “ಅವರಿಗೆ ಅವಕಾಶ ಸಿಕ್ಕರೆ ಅವರು ಕ್ಷಣಾರ್ಧದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೂ ಸಂಚು ರೂಪಿಸಬಹುದು. ಸದ್ಯದ ಪರಿಸ್ಥಿತಿಯಲ್ಲಿ ಅಮೆರಿಕಕ್ಕೆ ನೋವು ನೀಡುವುದೇ ಅವರ ಮುಖ್ಯ ಗುರಿಯಾಗಿದೆ” ಎಂದು ಬ್ರೆಮ್ಮರ್ ಹೇಳಿದ್ದಾರೆ. ಇರಾನ್ನಂತಹ ಕ್ರಾಂತಿಕಾರಿ ಮತ್ತು ಧಾರ್ಮಿಕ ಆಡಳಿತವಿರುವ ದೇಶವನ್ನು ಅತಿಯಾಗಿ ಇಕ್ಕಟ್ಟಿಗೆ ಸಿಲುಕಿಸಿದಾಗ ಇಂತಹ ಅಪಾಯಕಾರಿ ಪರಿಣಾಮಗಳು ಎದುರಾಗುತ್ತವೆ ಎಂದು ಅವರು ಎಚ್ಚರಿಸಿದ್ದಾರೆ.
ಕದನ ವಿರಾಮಕ್ಕೆ ಅಡ್ಡಿಯಾಗಬಹುದಾದ ತಾಂತ್ರಿಕ ಸವಾಲುಗಳು
ಕೇವಲ ಸೇಡಿನ ಭಾವನೆ ಮಾತ್ರವಲ್ಲದೆ, ಇರಾನ್ನ ಸೇನಾ ವ್ಯವಸ್ಥೆಯ ವಿಕೇಂದ್ರೀಕರಣವೂ ಶಾಂತಿ ಮಾತುಕತೆಗೆ ತೊಡಕಾಗಬಹುದು. ಯುದ್ಧದ ಆರಂಭಿಕ ದಿನಗಳಲ್ಲಿ ಇಸ್ರೇಲ್ನ ದಾಳಿಯಿಂದ ತಪ್ಪಿಸಿಕೊಳ್ಳಲು ಇರಾನ್ ತನ್ನ ಸೇನಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಸ್ಥಳೀಯ ಕಮಾಂಡರ್ಗಳಿಗೆ ನೀಡಿತ್ತು. ಈಗ ಇಸ್ಲಾಮಾಬಾದ್ನಲ್ಲಿ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದರೂ, ಈ ಸ್ಥಳೀಯ ಕಮಾಂಡರ್ಗಳು ಅದನ್ನು ಪಾಲಿಸುತ್ತಾರೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇದರ ಜೊತೆಗೆ, ಅಮೆರಿಕವು ಇರಾನ್ನ ಯುರೇನಿಯಂ ಸಮೃದ್ಧಗೊಳಿಸುವಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಮತ್ತು ಹೆಜ್ಬುಲ್ಲಾ, ಹೌತಿಗಳಂತಹ ಗುಂಪುಗಳಿಗೆ ಬೆಂಬಲ ನೀಡಬಾರದು ಎಂದು ವಿಧಿಸಿರುವ ಕಠಿಣ ಷರತ್ತುಗಳು ಮಾತುಕತೆ ವಿಫಲವಾಗುವಂತೆ ಮಾಡಬಹುದು.
ಅಮೆರಿಕದ ‘ಸಮರ ಸಿದ್ಧತೆ’
ಇತ್ತ ಅಮೆರಿಕವು ಶಾಂತಿ ಮಾತುಕತೆಯಲ್ಲಿ ತೊಡಗಿದ್ದರೂ, ಪರ್ಷಿಯನ್ ಗಲ್ಫ್ನಲ್ಲಿ ತನ್ನ ಸೇನಾ ಶಕ್ತಿಯನ್ನು ಹೆಚ್ಚಿಸುತ್ತಲೇ ಇದೆ. ಈಗಾಗಲೇ ಮೂರನೇ ವಿಮಾನವಾಹನೌಕೆ ಅಲ್ಲಿಗೆ ಧಾವಿಸುತ್ತಿದೆ. ಈ ಕುರಿತು ಮಾತನಾಡಿದ ಬ್ರೆಮ್ಮರ್, “ಟ್ರಂಪ್ ಅವರ ಈ ನಡೆಯು ಕೇವಲ ತೈಲ ಬೆಲೆಯನ್ನು ನಿಯಂತ್ರಣದಲ್ಲಿಡಲು ಮತ್ತು ಮಾರುಕಟ್ಟೆಯಲ್ಲಿ ವಿಶ್ವಾಸ ಮೂಡಿಸಲು ಮಾಡುತ್ತಿರುವ ತಂತ್ರವಾಗಿರಬಹುದು. ಒಂದು ವೇಳೆ ಮಾತುಕತೆ ಕೈಕೊಟ್ಟರೆ ಇರಾನ್ ಮೇಲೆ ಪೂರ್ಣ ಪ್ರಮಾಣದ ಭೂಸೇನಾ ದಾಳಿ ನಡೆಸುವ ಆಯ್ಕೆಯನ್ನು ಟ್ರಂಪ್ ಮುಕ್ತವಾಗಿಟ್ಟಿದ್ದಾರೆ” ಎಂದಿದ್ದಾರೆ.
ಈ ಮಾತುಕತೆಯಲ್ಲಿ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸುತ್ತಿರುವುದರ ಬಗ್ಗೆಯೂ ಬ್ರೆಮ್ಮರ್ ಮಾತನಾಡಿದ್ದಾರೆ. ಚೀನಾ ಮತ್ತು ಸೌದಿ ಅರೇಬಿಯಾದೊಂದಿಗೆ ಪಾಕಿಸ್ತಾನ ಹೊಂದಿರುವ ಭದ್ರತಾ ಸಂಬಂಧಗಳು ಅದಕ್ಕೆ ಈ ಅವಕಾಶ ನೀಡಿವೆ. ಆದರೆ, ಇದರಿಂದ ಭಾರತದ ರಾಜತಾಂತ್ರಿಕ ಸ್ಥಾನಮಾನಕ್ಕೆ ಯಾವುದೇ ಧಕ್ಕೆಯಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. “ಭಾರತವು ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI) ಮತ್ತು ಜಾಗತಿಕ ಆರ್ಥಿಕತೆಯಲ್ಲಿ ವಿಶ್ವದ ನಾಯಕನಾಗಿ ಬೆಳೆಯುತ್ತಿದೆ. ಪಾಕಿಸ್ತಾನ ಕೇವಲ ಒಂದು ಸಂಧಾನ ವೇದಿಕೆಯನ್ನು ಒದಗಿಸುತ್ತಿರಬಹುದು, ಆದರೆ ಭಾರತವು ಜಾಗತಿಕ ದಕ್ಷಿಣದ ಪ್ರಬಲ ಧ್ವನಿಯಾಗಿ ಹೊರಹೊಮ್ಮಿದೆ” ಎಂದು ಅವರು ಭಾರತದ ಬೆಳವಣಿಗೆಯನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಇರಾನ್ ಜೊತೆಗಿನ ಮಾತುಕತೆ ವಿಫಲವಾದರೆ ಮುಂದೇನು? ಅಮೆರಿಕದ ‘ಪ್ಲಾನ್ ಬಿ’ ಬಗ್ಗೆ ಟ್ರಂಪ್ ನೀಡಿದ ಖಡಕ್ ಎಚ್ಚರಿಕೆ



















