ಬೆಂಗಳೂರು. ಕೇಂದ್ರ ಸರ್ಕಾರ ಕೈಗೊಂಡಿರುವ ಗಣತಿ ಕಾರ್ಯಕ್ಕೆ ವಿಕಲಚೇತನ ನೌಕರರನ್ನು ನೇಮಕ ಮಾಡಿರುವುದನ್ನು ಖಂಡಿಸಿ, ತಕ್ಷಣವೇ ವಿನಾಯತಿ ನೀಡಬೇಕು, ಇಲ್ಲವಾದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಚಿಲವಾಡಗಿ ಎಚ್ಚರಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೀರಪ್ಪ ಅಂಡಗಿ, ಗಣತಿ ಕಾರ್ಯದಲ್ಲಿ ವಿಶೇಷವಾಗಿ ಕಣ್ಣು ಕಾಣದವರು, ನಡೆಯಲು ಅಸಮರ್ಥರು ಸೇರಿದಂತೆ ವಿವಿಧ ರೀತಿಯ ವಿಕಲತೆ ಹೊಂದಿರುವ ನೌಕರರನ್ನು ನಿಯೋಜಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಜಿಬಿಎ ಪ್ರತಿ ಬಾರಿ ಗಣತಿ ಕಾರ್ಯದ ವೇಳೆ ವಿಕಲಚೇತನ ನೌಕರರ ಮೇಲೆಯೇ ದರ್ಪ ತೋರುತ್ತಿದೆ. ಈ ಹಿಂದೆಯೂ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ಕಾರ್ಯದಲ್ಲಿ ನಿಯಮ ಬಾಹಿರವಾಗಿ ವಿಕಲಚೇತನ ನೌಕರರನ್ನು ನೇಮಕ ಮಾಡಲಾಗಿತ್ತು. ಹೋರಾಟದ ಮೂಲಕ ಆಗ ವಿನಾಯತಿ ಪಡೆಯಲಾಗಿತ್ತು,” ಎಂದು ಹೇಳಿದ್ದಾರೆ.
ಬೆಂಗಳೂರು ನಗರದಂತಹ ಮಹಾನಗರದಲ್ಲಿ ಬಹುಮಹಡಿ ಕಟ್ಟಡಗಳು ಹೆಚ್ಚಿದ್ದು, ಅಂತಹ ಪ್ರದೇಶಗಳಿಗೆ ತೆರಳಿ ಕಣ್ಣು ಕಾಣದ ಅಥವಾ ಶಾರೀರಿಕ ಅಸಮರ್ಥತೆ ಹೊಂದಿರುವ ನೌಕರರು ಹೇಗೆ ಗಣತಿ ಕಾರ್ಯ ನಿರ್ವಹಿಸಬೇಕು ಎಂಬುದು ಪ್ರಶ್ನೆಯಾಗಿದ್ದು, ಈ ಕುರಿತು ಈಗಾಗಲೇ ಮನವಿ ಸಲ್ಲಿಸಿದ್ದರೂ ಜಿಬಿಎಯಿಂದ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಗಣತಿ ತರಬೇತಿಗೆ ಹಾಜರಾಗದಿದ್ದರೆ ನೋಟಿಸ್ ನೀಡುವುದು, ವೇತನ ತಡೆಹಿಡಿಯುವ ಎಚ್ಚರಿಕೆ ನೀಡಲಾಗುತ್ತಿದೆ ಎಂಬ ಮಾಹಿತಿ ಬಂದಿದ್ದು, ಇದರಿಂದ ಅನೇಕ ವಿಕಲಚೇತನ ನೌಕರರು ಆತಂಕಕ್ಕೊಳಗಾಗಿದ್ದಾರೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಸಂಜೆ 4 ಗಂಟೆಗೆ ಸಾಂಕೇತಿಕ ಧರಣಿ ನಡೆಸಲಾಗುತ್ತಿದ್ದು, ಕೂಡಲೇ ವಿನಾಯತಿ ನೀಡದಿದ್ದರೆ ಜಿಬಿಎ ಕಚೇರಿ ಮುಂದೆ ಉಗ್ರ ಹೋರಾಟ ನಡೆಸುವುದರ ಜೊತೆಗೆ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಎಚ್ಚರಿಕೆ ನೀಡಿದ್ದಾರೆ. “ಯಾವುದೇ ವಿಕಲಚೇತನ ನೌಕರರು ಗೊಂದಲಕ್ಕೊಳಗಾಗಬಾರದು. ಸಂಘವು ನಿಮ್ಮ ಪರವಾಗಿ ನ್ಯಾಯಕ್ಕಾಗಿ ಹೋರಾಡಲಿದೆ,” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅರೆಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದತ್ತು ಪಡೆದ ಉದ್ಯಮಿ ಸತೀಶ್ ಶೆಟ್ಟಿ



















