ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಅಮೋಘ ಆರಂಭವನ್ನು ಪಡೆದುಕೊಂಡಿದೆ. ಆಡಿರುವ ಮೊದಲ ಎರಡು ಪಂದ್ಯಗಳಲ್ಲೂ ಭರ್ಜರಿ ಜಯ ಸಾಧಿಸುವ ಮೂಲಕ ಟ್ರೋಫಿ ಉಳಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಟ್ಟಿದೆ.
ಈ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಆಟಗಾರರಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಕೂಡ ಒಬ್ಬರು. ಸತತ ಎರಡು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿ ಅಬ್ಬರಿಸಿರುವ ಪಡಿಕ್ಕಲ್, ಪ್ರಸ್ತುತ ಅತ್ಯದ್ಭುತ ಫಾರ್ಮ್ನಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೇವಲ 29 ಎಸೆತಗಳಲ್ಲಿ 50 ರನ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 26 ಎಸೆತಗಳಲ್ಲಿ 61 ರನ್ ಸಿಡಿಸಿರುವ ಅವರ ಬ್ಯಾಟಿಂಗ್ ವೈಖರಿಯನ್ನು ಆರ್ಸಿಬಿ ತಂಡದ ಮೆಂಟರ್ ಹಾಗೂ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಲ್ಲದೆ, ಪಡಿಕ್ಕಲ್ ಅವರ ಭವಿಷ್ಯದ ಬಗ್ಗೆ ಮಹತ್ವದ ಭವಿಷ್ಯ ನುಡಿದಿದ್ದಾರೆ.
ಬದಲಾದ ಪಡಿಕ್ಕಲ್ ಆಟ: ಸೆಲೆಕ್ಟರ್ಗಳಿಗೆ ತಲೆನೋವು!
ಕೆಲವೇ ವರ್ಷಗಳ ಹಿಂದೆ, ದೇವದತ್ ಪಡಿಕ್ಕಲ್ ಅವರನ್ನು ಕೇವಲ ದೀರ್ಘಾವಧಿಯ ಮಾದರಿಯ ಕ್ರಿಕೆಟ್ಗೆ ಸೀಮಿತವಾದ ತಾಂತ್ರಿಕ ಬ್ಯಾಟರ್ ಎಂದು ಪರಿಗಣಿಸಲಾಗಿತ್ತು. ಆದರೆ ಈಗಿನ ಪಡಿಕ್ಕಲ್ ಸಂಪೂರ್ಣವಾಗಿ ಬದಲಾಗಿದ್ದಾರೆ. ಆರ್ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರು ಪಡಿಕ್ಕಲ್ ಅವರ ಈ ಬೆಳವಣಿಗೆಯನ್ನು ಬಹಳ ಹತ್ತಿರದಿಂದ ಗಮನಿಸಿದ್ದು, ಹಳೆಯ ಪಡಿಕ್ಕಲ್ಗೂ ಈಗಿನ ಪಡಿಕ್ಕಲ್ಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ. ಅವರ ಈ ಸ್ಫೋಟಕ ಫಾರ್ಮ್ ಅನ್ನು ನೋಡಿದರೆ, ಮುಂಬರುವ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಯ್ಕೆಗಾರರು ಅವರನ್ನು ಕಡೆಗಣಿಸುವುದು ಅಸಾಧ್ಯ ಎಂದು ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ. ಆರ್ಸಿಬಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪಡಿಕ್ಕಲ್ ಈಗ ಹೊಸ ಅವತಾರದಲ್ಲಿದ್ದು, ಎಲ್ಲಾ ಮಾದರಿಯ ಕ್ರಿಕೆಟ್ಗೂ ಹೇಳಿ ಮಾಡಿಸಿದ ಆಟಗಾರನಾಗಿ ರೂಪುಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಟೀಮ್ ಇಂಡಿಯಾ ನಿರ್ಲಕ್ಷಿಸುವಂತಿಲ್ಲ ಎಂದ ಕಾರ್ತಿಕ್
ದಿನೇಶ್ ಕಾರ್ತಿಕ್ ಪ್ರಕಾರ, 2025ರಲ್ಲಿ ಆರ್ಸಿಬಿಗೆ ಮರಳಿದ ಪಡಿಕ್ಕಲ್ ಅವರಿಗೂ ಮತ್ತು ಮೊದಲು ತಂಡದಲ್ಲಿದ್ದ ಪಡಿಕ್ಕಲ್ ಅವರಿಗೂ ಬಹಳ ವ್ಯತ್ಯಾಸವಿದೆ. “ಐಪಿಎಲ್ನಲ್ಲಿ ಆಡುವಾಗ ಎದುರಾಗುವ ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಅವರು ಕಲಿತುಕೊಂಡಿದ್ದಾರೆ ಮತ್ತು ತಮ್ಮ ಆಟವನ್ನು ಅವರು ಹೊಂದಿಸಿಕೊಂಡಿರುವ ರೀತಿ ನಿಜಕ್ಕೂ ಪ್ರಭಾವಶಾಲಿಯಾಗಿದೆ,” ಎಂದು ಕಾರ್ತಿಕ್ ಹೇಳಿದ್ದಾರೆ. “ಪಡಿಕ್ಕಲ್ ಇದೇ ಫಾರ್ಮ್ ಅನ್ನು ಮುಂದುವರೆಸಿದರೆ, ಟೀಮ್ ಇಂಡಿಯಾ ಅವರನ್ನು ಎಲ್ಲಾ ಮಾದರಿಯ ಕ್ರಿಕೆಟ್ನಲ್ಲೂ ಕಡೆಗಣಿಸಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಅವರು ಪ್ರಸ್ತುತ ಇತರ ಅನೇಕ ಆಟಗಾರರಿಗಿಂತ ಒಂದು ಹೆಜ್ಜೆ ಮುಂದಿರುವ ಮಟ್ಟದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ,” ಎಂದು ದಿನೇಶ್ ಕಾರ್ತಿಕ್ ದೃಢವಾಗಿ ಹೇಳಿದ್ದಾರೆ.
ತಮ್ಮ ಬ್ಯಾಟಿಂಗ್ ಶೈಲಿ ಬದಲಾದ ಬಗ್ಗೆ ಪಡಿಕ್ಕಲ್ ವಿವರಣೆ
ತಮ್ಮ ಬ್ಯಾಟಿಂಗ್ನಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ 25 ವರ್ಷದ ದೇವದತ್ ಪಡಿಕ್ಕಲ್ ಅವರಿಗೂ ಸ್ಪಷ್ಟ ಅರಿವಿದೆ. “ನಾನು ಚಿಕ್ಕವನಿದ್ದಾಗ ಮತ್ತು ಐಪಿಎಲ್ಗೆ ಹೊಸಬನಾಗಿ ಬಂದಾಗ, ರಿಸ್ಕ್ ತೆಗೆದುಕೊಳ್ಳಲು ಸ್ವಲ್ಪ ಹೆದರುತ್ತಿದ್ದೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ, ಐಪಿಎಲ್ನಲ್ಲಿ ನಡೆಯುವ ಎಲ್ಲವನ್ನೂ ನಿಭಾಯಿಸಲು ನಾನು ಕಲಿತಿದ್ದೇನೆ. ಈಗ ನಾನು ಪ್ರಬುದ್ಧತೆಯ ಹಂತವನ್ನು ತಲುಪಿದ್ದು, ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ಏನು ಮಾಡಬೇಕು ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ. ನಾನು ಈಗ ಹೆಚ್ಚು ಶಾಂತ ಮತ್ತು ನಿರಾಳವಾಗಿದ್ದೇನೆ ಹಾಗೂ ನನ್ನ ಕ್ರಿಕೆಟ್ ಅನ್ನು ನಿಜವಾಗಿಯೂ ಆನಂದಿಸುತ್ತಿದ್ದೇನೆ,” ಎಂದು ಐಪಿಎಲ್ 2025ರ ವಿಜೇತ ತಂಡದ ಪ್ರಭಾವಿ ಬ್ಯಾಟರ್ ಹೇಳಿದ್ದಾರೆ.
“2025ರಲ್ಲಿ ಆರ್ಸಿಬಿ ಜೊತೆ ನನಗೆ ಮತ್ತೆ ಅವಕಾಶ ಸಿಕ್ಕಾಗ, ನಾನು ಅನೇಕ ವಿಷಯಗಳನ್ನು ಬದಲಾಯಿಸಿಕೊಳ್ಳಬೇಕೆಂದು ನಿರ್ಧರಿಸಿದ್ದೆ. ಫಲಿತಾಂಶ ಏನೇ ಆಗಿರಲಿ, ಆ ಬದಲಾವಣೆಗಳ ಮೇಲೆ ಕೆಲಸ ಮಾಡಲು ನಾನು ಬದ್ಧನಾಗಿದ್ದೆ,” ಎಂದು ಪಡಿಕ್ಕಲ್ ತಿಳಿಸಿದ್ದಾರೆ. “ನೀವು ಒಂದು ನಿರ್ದಿಷ್ಟ ಶೈಲಿಯಲ್ಲಿ ಆಡುತ್ತಾ ಬೆಳೆದಾಗ ಅದನ್ನು ಬದಲಾಯಿಸಿಕೊಳ್ಳುವುದು ಸುಲಭವಲ್ಲ. ನಾನು ಕೇವಲ ಟೆಸ್ಟ್ ಕ್ರಿಕೆಟ್ಗೆ ಮಾತ್ರ ಸೀಮಿತವಾಗುತ್ತೇನೆ ಎಂದು ಸುಲಭವಾಗಿ ಒಪ್ಪಿಕೊಳ್ಳಬಹುದಿತ್ತು. ಆದರೆ ನನ್ನ ಕಂಫರ್ಟ್ ಜೋನ್ನಿಂದ ಹೊರಬಂದು, ಹೊಸ ಸವಾಲುಗಳಿಗೆ ಹೊಂದಿಕೊಳ್ಳುವುದು ನನಗೆ ಬಹಳ ಮುಖ್ಯವಾಗಿತ್ತು,” ಎಂದು ಅವರು ವಿವರಿಸಿದ್ದಾರೆ. ಐಪಿಎಲ್ 2025ರ ಋತುವಿನಲ್ಲಿ 10 ಪಂದ್ಯಗಳಲ್ಲಿ 150ರ ಸ್ಟ್ರೈಕ್ ರೇಟ್ನೊಂದಿಗೆ 247 ರನ್ ಗಳಿಸಿದ್ದ ಪಡಿಕ್ಕಲ್, ಈ ಆವೃತ್ತಿಯಲ್ಲೂ ಅದ್ಭುತ ಲಯದಲ್ಲಿದ್ದು ಆರ್ಸಿಬಿ ಬ್ಯಾಟಿಂಗ್ ಪಡೆಯ ಆಧಾರಸ್ತಂಭವಾಗಿದ್ದಾರೆ.
ಇದನ್ನೂ ಓದಿ : ಬುಮ್ರಾ ಮೊದಲ ಎಸೆತಕ್ಕೆ ಸಿಕ್ಸರ್ ಬಾರಿಸಿದ ಸೂರ್ಯವಂಶಿ : ಯುವ ಬ್ಯಾಟರ್ ಧೈರ್ಯಕ್ಕೆ ಬೆಚ್ಚಿಬಿದ್ದ ಮುಂಬೈ ಇಂಡಿಯನ್ಸ್!


















