ಬೆಂಗಳೂರು : ಪಾಕಿಸ್ತಾನ್ ಸೂಪರ್ ಲೀಗ್ (PSL) ವೇಳೆ ಆಟಗಾರರು ತಂಗಿದ್ದ ಹೋಟೆಲ್ನಲ್ಲಿ ಭದ್ರತಾ ನಿಯಮಗಳ ಉಲ್ಲಂಘನೆಯಾಗಿರುವುದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಲಾಹೋರ್ ಖಲಂದರ್ಸ್ ತಂಡದ ನಾಯಕ ಶಾಹೀನ್ ಶಾ ಅಫ್ರಿದಿ ಮತ್ತು ಜಿಂಬಾಬ್ವೆ ಮೂಲದ ಆಟಗಾರ ಸಿಕಂದರ್ ರಾಜಾ ಅವರು ಹೋಟೆಲ್ನಲ್ಲಿ ಭದ್ರತಾ ಶಿಷ್ಟಾಚಾರಗಳನ್ನು ಮೀರಿದ್ದಾರೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಎಲ್ಲಾ ಫ್ರಾಂಚೈಸಿಗಳಿಗೆ ಅತ್ಯಂತ ಕಠಿಣವಾದ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಭದ್ರತಾ ವಿಚಾರದಲ್ಲಿ ಇನ್ನು ಮುಂದೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಲಾಗುವುದಿಲ್ಲ ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಿಸಿಬಿ ಎಚ್ಚರಿಕೆ ನೀಡಿದೆ. ಈ ವಿವಾದದ ಕಿಡಿ ಹೊತ್ತಿಕೊಂಡಿದ್ದು ಸಿಕಂದರ್ ರಾಜಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಒಂದು ಪೋಸ್ಟ್ನಿಂದ.
ಹೋಟೆಲ್ನಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಮಂಡಳಿಗೆ ಧನ್ಯವಾದ ಅರ್ಪಿಸಿ ಅವರು ಪೋಸ್ಟ್ ಮಾಡಿದ್ದರು. ಆದರೆ, ಈ ಭೇಟಿಯ ಹಿಂದೆ ಭದ್ರತಾ ನಿಯಮಗಳ ಗಾಳಿ ತೂರಲಾಗಿತ್ತು ಎಂಬುದು ಈಗ ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ, ಕಳೆದ ಶನಿವಾರ ತಡರಾತ್ರಿ ಸಿಕಂದರ್ ರಾಜಾ ಅವರ ಕೋಣೆಯಲ್ಲಿ ಸುಮಾರು ನಾಲ್ವರು ಅತಿಥಿಗಳು ಪತ್ತೆಯಾಗಿದ್ದರು. ಈ ಸಮಯದಲ್ಲಿ ತಂಡದ ನಾಯಕ ಶಾಹೀನ್ ಶಾ ಅಫ್ರಿದಿ ಕೂಡ ಅಲ್ಲಿ ಉಪಸ್ಥಿತರಿದ್ದರು ಎನ್ನಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಬೇಜವಾಬ್ದಾರಿ ವರ್ತನೆಯಿಂದ ಆಟಗಾರರ ಸುರಕ್ಷತೆಗೆ ಧಕ್ಕೆ ಬರಲಿದೆ ಎಂದು ಪಿಸಿಬಿಗೆ ಆತಂಕ ವ್ಯಕ್ತಪಡಿಸಿದ್ದಾರೆ
ಎಚ್ಚೆತ್ತುಕೊಂಡಿರುವ ಪಿಸಿಬಿ
ಪೊಲೀಸ್ ಇಲಾಖೆಯ ತೀವ್ರ ಆಕ್ಷೇಪದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪಿಸಿಬಿ, ಎಲ್ಲಾ ಎಂಟು ಫ್ರಾಂಚೈಸಿಗಳಿಗೆ ಅಧಿಕೃತ ಇಮೇಲ್ ಕಳುಹಿಸಿದೆ. ಈ ಹೊಸ ಮಾರ್ಗಸೂಚಿಯ ಪ್ರಕಾರ, ಯಾವುದೇ ಆಟಗಾರ ಅಥವಾ ಅಧಿಕಾರಿ ತನ್ನ ಕುಟುಂಬ ಸದಸ್ಯರನ್ನು ಭೇಟಿ ಮಾಡಬೇಕಿದ್ದಲ್ಲಿ ಕನಿಷ್ಠ 24 ಗಂಟೆಗಳ ಮೊದಲೇ ಮಂಡಳಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಪೂರ್ವಾನುಮತಿ ಇಲ್ಲದೆ ಯಾವುದೇ ಅತಿಥಿಗಳನ್ನು ಹೋಟೆಲ್ ಕೋಣೆಗೆ ಕರೆಸಿಕೊಳ್ಳುವಂತಿಲ್ಲ. ಅಲ್ಲದೆ, ಕೇವಲ ಆಟಗಾರನ ಪತ್ನಿ, ಪೋಷಕರು ಮತ್ತು ಒಡಹುಟ್ಟಿದವರಿಗೆ ಮಾತ್ರ ಆಟಗಾರನ ಕೋಣೆಗೆ ಪ್ರವೇಶಿಸಲು ಅವಕಾಶವಿರುತ್ತದೆ. ಈ ಭೇಟಿಗೂ ಮುನ್ನ ಭದ್ರತಾ ಸಿಬ್ಬಂದಿಯ ತಪಾಸಣೆ ಮತ್ತು ಅನುಮತಿ ಅತ್ಯಗತ್ಯ ಎಂದು ಪಿಸಿಬಿ ಸ್ಪಷ್ಟಪಡಿಸಿದೆ.
ಪಾಕಿಸ್ತಾನದಲ್ಲಿ ಕ್ರಿಕೆಟ್ ಪಂದ್ಯಾವಳಿಗಳ ಆಯೋಜನೆಯೇ ಒಂದು ದೊಡ್ಡ ಸವಾಲಾಗಿರುವಾಗ, ಆಟಗಾರರ ಈ ರೀತಿಯ ನಡವಳಿಕೆಯು ಭದ್ರತಾ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಸಾಧ್ಯತೆ ಇರುತ್ತದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಫ್ರಾಂಚೈಸಿಗಳು ಮತ್ತು ಆಟಗಾರರು ಭದ್ರತಾ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ, ಹೋಟೆಲ್ ಆವರಣದಲ್ಲಿ ಅವರಿಗೆ ಸುರಕ್ಷಿತ ವಾತಾವರಣ ಒದಗಿಸುವುದು ಅಸಾಧ್ಯ ಎಂದು ಪೊಲೀಸರು ಪಿಸಿಬಿಗೆ ಖಡಕ್ ಆಗಿ ತಿಳಿಸಿದ್ದಾರೆ. ಪಿಸಿಬಿಯ ಭದ್ರತಾ ವ್ಯವಸ್ಥಾಪಕರು ಮತ್ತು ಭ್ರಷ್ಟಾಚಾರ ವಿರೋಧಿ ವಿಭಾಗದ ಮುಖ್ಯಸ್ಥರು ಈಗಾಗಲೇ ಈ ವಿಷಯದ ಬಗ್ಗೆ ಪಿಎಸ್ಎಲ್ ಸಿಇಒ ಸಲ್ಮಾನ್ ನಸೀರ್ ಅವರೊಂದಿಗೆ ಚರ್ಚೆ ನಡೆಸಿದ್ದು, ನಿಯಮ ಉಲ್ಲಂಘಿಸಿದವರ ಮೇಲೆ ಕಣ್ಗಾವಲು ಇರಿಸಲು ನಿರ್ಧರಿಸಿದ್ದಾರೆ.
ಈ ಘಟನೆಯು ಪಿಎಸ್ಎಲ್ನ ಶಿಸ್ತಿನ ಮೇಲೆ ಕರಿನೆರಳು ಬೀರಿದ್ದು, ಮುಂಬರುವ ಪಂದ್ಯಗಳಲ್ಲಿ ಫ್ರಾಂಚೈಸಿಗಳು ತಮ್ಮ ಆಟಗಾರರ ಚಟುವಟಿಕೆಗಳ ಮೇಲೆ ಹೆಚ್ಚಿನ ನಿಗಾ ಇಡುವಂತೆ ಸೂಚಿಸಲಾಗಿದೆ. ಹೋಟೆಲ್ನಲ್ಲಿ ಅತಿಥಿಗಳ ಭೇಟಿಗೆ ಪ್ರತ್ಯೇಕ ಸ್ಥಳವನ್ನು ನಿಗದಿಪಡಿಸಲು ಮಂಡಳಿ ಚಿಂತಿಸುತ್ತಿದ್ದು, ಯಾವುದೇ ಕಾರಣಕ್ಕೂ ಆಟಗಾರರ ಖಾಸಗಿ ವಲಯಕ್ಕೆ ಅಪರಿಚಿತರು ಅಥವಾ ಅನಧಿಕೃತ ವ್ಯಕ್ತಿಗಳು ಪ್ರವೇಶಿಸದಂತೆ ತಡೆಯಲು ಸಜ್ಜಾಗಿದೆ. ಒಟ್ಟಾರೆಯಾಗಿ, ಶಾಹೀನ್ ಅಫ್ರಿದಿ ಮತ್ತು ಸಿಕಂದರ್ ರಾಜಾ ಅವರ ಈ ಒಂದು ನಡೆ ಇಡೀ ಟೂರ್ನಿಯ ಭದ್ರತಾ ವ್ಯವಸ್ಥೆಯನ್ನೇ ಬಿಗಿಗೊಳಿಸುವಂತೆ ಮಾಡಿದೆ. ಇನ್ನು ಮುಂದೆ ನಿಯಮಗಳನ್ನು ಗಾಳಿಗೆ ತೂರುವ ಆಟಗಾರರಿಗೆ ಭಾರಿ ದಂಡ ಅಥವಾ ಅಮಾನತು ಕ್ರಮದ ಎಚ್ಚರಿಕೆಯನ್ನು ನೀಡಲಾಗಿದೆ.
ಇದನ್ನೂ ಓದಿ : ಅನ್ನಭಾಗ್ಯ ನೀಡ್ತಿರೋದು ಕೇಂದ್ರ, 2 ರೂ. ಚೀಲ ಕೊಡ್ತಿರೋದು ಮಾತ್ರ ಸಿದ್ದು ಸರ್ಕಾರ : ಆರ್.ಅಶೋಕ್



















