ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಆಲ್ರೌಂಡರ್ ಕೃನಾಲ್ ಪಾಂಡ್ಯ, ದೀರ್ಘಕಾಲದಿಂದ ಭಾರತೀಯ ರಾಷ್ಟ್ರೀಯ ತಂಡದಿಂದ ಹೊರಗುಳಿದಿರುವ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಐಪಿಎಲ್ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಟೀಮ್ ಇಂಡಿಯಾಕ್ಕೆ ಮರಳಲು ಅವಕಾಶ ಸಿಗದ ಬಗ್ಗೆ ಅವರು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
ಕೃನಾಲ್ ಪಾಂಡ್ಯ ಕಳೆದ ಐಪಿಎಲ್ ಸೀಸನ್ನಲ್ಲಿ ಆರ್ಸಿಬಿ ಪರ ಅದ್ಭುತ ಪ್ರದರ್ಶನ ನೀಡಿ, 17 ವಿಕೆಟ್ಗಳನ್ನು ಪಡೆಯುವ ಮೂಲಕ ತಂಡದ ಎರಡನೇ ಅತಿ ಹೆಚ್ಚು ವಿಕೆಟ್ ಟೇಕರ್ ಎನಿಸಿಕೊಂಡಿದ್ದರು. ಇಷ್ಟಾದರೂ ರಾಷ್ಟ್ರೀಯ ಆಯ್ಕೆಗಾರರು ಅವರನ್ನು ಪರಿಗಣಿಸದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಕಳೆದ ಐದು ವರ್ಷಗಳಿಂದ ನಾನು ನೀಲಿ ಜರ್ಸಿ ಧರಿಸಿಲ್ಲ. ಪ್ರತಿಭಾವಂತ ಆಟಗಾರನಿಗೆ ಸತತವಾಗಿ ಅವಕಾಶಗಳು ಸಿಗದಿದ್ದಾಗ ಅಥವಾ ಕಡೆಗಣಿಸಿದಾಗ ಖಂಡಿತವಾಗಿಯೂ ನೋವಾಗುತ್ತದೆ,” ಎಂದು ಒಪ್ಪಿಕೊಂಡಿದ್ದಾರೆ. ಆದರೂ, ತಮ್ಮಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಬಾಕಿ ಉಳಿದಿದ್ದು, ಮತ್ತೆ ಭಾರತ ತಂಡವನ್ನು ಪ್ರತಿನಿಧಿಸುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.
ಕೊಹ್ಲಿ ಬಗ್ಗೆ ಕೃನಾಲ್ ಮೆಚ್ಚುಗೆಯ ನುಡಿ
ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರ ಬಗ್ಗೆ ಮಾತನಾಡಿದ ಕೃನಾಲ್, ಕೊಹ್ಲಿ ಅವರ ಆಟದ ಮೇಲಿರುವ ಹಸಿವು ಅವರನ್ನು ಇತರರಿಗಿಂತ ಭಿನ್ನವಾಗಿಸುತ್ತದೆ ಎಂದು ಬಣ್ಣಿಸಿದರು. “ವಿರಾಟ್ ಕೊಹ್ಲಿ ಅವರ ಗೆಲುವಿನ ಹಸಿವು ಮತ್ತು ಕ್ರಿಕೆಟ್ ಮೇಲಿರುವ ಪ್ಯಾಶನ್ ಅದ್ಭುತವಾದದ್ದು. ಅವರು ಯಾವುದೇ ತಲೆಮಾರಿನಲ್ಲಿ ಹುಟ್ಟಿದ್ದರೂ ಒಬ್ಬ ಶ್ರೇಷ್ಠ ಆಟಗಾರನಾಗುತ್ತಿದ್ದರು. ಅವರು ಯಾರೊಂದಿಗೂ ಸ್ಪರ್ಧಿಸುತ್ತಿಲ್ಲ, ಬದಲಾಗಿ ತಮ್ಮದೇ ಆದ ಶ್ರೇಷ್ಠತೆಯ ಮಟ್ಟವನ್ನು ಕಾಯ್ದುಕೊಂಡಿದ್ದಾರೆ,” ಎಂದು ಶ್ಲಾಘಿಸಿದ್ದಾರೆ.
ಆರ್ಸಿಬಿ ವಾತಾವರಣದ ಬಗ್ಗೆ ಮಾಹಿತಿ
ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ತಂಡದ ವಾತಾವರಣದ ಬಗ್ಗೆ ಮಾತನಾಡಿದ ಪಾಂಡ್ಯ, “ಕಳೆದ ವರ್ಷಕ್ಕಿಂತ ಈ ಬಾರಿ ತಂಡವು ಹೆಚ್ಚು ಶಾಂತವಾಗಿದೆ. ಕಳೆದ ಸೀಸನ್ನಲ್ಲಿ ಹೊಸ ತಂಡವಾಗಿದ್ದರಿಂದ ಆಟಗಾರರು ಪರಸ್ಪರ ಅರ್ಥಮಾಡಿಕೊಳ್ಳಲು ಸಮಯ ಬೇಕಿತ್ತು. ಆದರೆ ಈಗ ಪ್ರತಿಯೊಬ್ಬ ಆಟಗಾರನಿಗೂ ಅವರ ಜವಾಬ್ದಾರಿಯ ಬಗ್ಗೆ ಸ್ಪಷ್ಟತೆಯಿದೆ. ಒತ್ತಡದ ಸಮಯದಲ್ಲಿ ನಾನು ಶಾಂತವಾಗಿರಲು ಪ್ರಯತ್ನಿಸುತ್ತೇನೆ ಮತ್ತು ದೊಡ್ಡ ಪಂದ್ಯಗಳಲ್ಲಿ ಮಿಂಚುವುದೇ ನನ್ನ ಗುರಿ,” ಎಂದಿದ್ದಾರೆ.
ಪ್ರಸ್ತುತ ಆರ್ಸಿಬಿ ತಂಡವು ತನ್ನ ಮೊದಲ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಜಯಗಳಿಸಿದ್ದು, ಏಪ್ರಿಲ್ 5 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲು ಸಜ್ಜಾಗಿದೆ.
ಇದನ್ನೂ ಓದಿ : ಗುಜರಾತ್ ಟೈಟಾನ್ಸ್ ತಂಡಕ್ಕೆ ‘ರಾಜಸ್ಥಾನಿ ಎಕ್ಸ್ಪ್ರೆಸ್’ ಎಂಟ್ರಿ: ಯಾರು ಈ ಅಶೋಕ್ ಶರ್ಮಾ?



















