ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ 2026ರ ಸೀಸನ್ನ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಕ್ಕೆ ಭಾರಿ ಆಘಾತ ಎದುರಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಹೈವೋಲ್ಟೇಜ್ ಪಂದ್ಯದ ವೇಳೆ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಪಾದದ ಗಾಯಕ್ಕೆ ತುತ್ತಾಗಿ ಮೈದಾನದಿಂದ ಹೊರನಡೆದಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡವು ಗುರಿ ಬೆನ್ನಟ್ಟುತ್ತಿದ್ದ ವೇಳೆ, ಐದನೇ ಓವರ್ ಆರಂಭಕ್ಕೂ ಮುನ್ನ ರಹಾನೆ ತಮ್ಮ ಪಾದವನ್ನು ಹಿಡಿದುಕೊಂಡು ಮೈದಾನದಲ್ಲಿ ಕುಳಿತರು. ಕೂಡಲೇ ತಂಡದ ಫಿಸಿಯೋಗಳು ಮೈದಾನಕ್ಕೆ ಆಗಮಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದರಾದರೂ, ನೋವಿನಿಂದಾಗಿ ರಹಾನೆ ಅವರಿಗೆ ಮುಂದುವರಿಯಲು ಸಾಧ್ಯವಾಗಲಿಲ್ಲ. ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಾ ಅವರು ಮೈದಾನದಿಂದ ಹೊರಹೋಗಬೇಕಾಯಿತು. ರಹಾನೆ ಅವರ ಅನುಪಸ್ಥಿತಿಯಲ್ಲಿ ಉಪನಾಯಕ ರಿಂಕು ಸಿಂಗ್ ತಂಡದ ಹಂಗಾಮಿ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡರು.
ಬ್ಯಾಟಿಂಗ್ನಲ್ಲಿ ಮಿಂಚಿದ್ದ ರಹಾನೆ
ಗಾಯಗೊಂಡು ಮೈದಾನ ತೊರೆಯುವ ಮೊದಲು ಅಜಿಂಕ್ಯ ರಹಾನೆ ಬ್ಯಾಟಿಂಗ್ನಲ್ಲಿ ಅಬ್ಬರಿಸುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ವಾಂಖೆಡೆಯ ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಮುಂಬೈ ಬೌಲರ್ಗಳನ್ನು ಮನಬಂದಂತೆ ದಂಡಿಸಿದ ಅವರು, ಕೇವಲ 40 ಎಸೆತಗಳಲ್ಲಿ 67 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದರು.
ಸ್ಫೋಟಕ ಆಟದಲ್ಲಿ 3 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್ಗಳು ಒಳಗೊಂಡಿದ್ದವು. ರಹಾನೆ ಅವರ ಈ ಜವಾಬ್ದಾರಿಯುತ ಆಟ ಹಾಗೂ ಯುವ ಬ್ಯಾಟರ್ ಅಂಗ್ಕ್ರಿಶ್ ರಘುವಂಶಿ (51) ಅವರ ಅರ್ಧಶತಕದ ನೆರವಿನಿಂದ ಕೆಕೆಆರ್ ತಂಡವು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 220 ರನ್ಗಳ ಬೃಹತ್ ಮೊತ್ತವನ್ನು ಪೇರಿಸಲು ಸಾಧ್ಯವಾಯಿತು. ಆರಂಭಿಕ ಆಟಗಾರ ಫಿನ್ ಅಲೆನ್ ಕೂಡ 17 ಎಸೆತಗಳಲ್ಲಿ 37 ರನ್ ಸಿಡಿಸಿ ತಂಡಕ್ಕೆ ವೇಗದ ಆರಂಭ ಒದಗಿಸಿದ್ದರು.
ಮುಂಬೈ ಬೌಲರ್ಗಳ ಪರದಾಟ ಮತ್ತು ಶಾರ್ದೂಲ್ ಯಶಸ್ಸು
ಬೃಹತ್ ಮೊತ್ತವನ್ನು ನಿಯಂತ್ರಿಸುವಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಟ್ರೆಂಟ್ ಬೌಲ್ಟ್ ವಿಫಲರಾದರು. ಬುಮ್ರಾ 35 ರನ್ ನೀಡಿದರೆ, ಬೌಲ್ಟ್ 38 ರನ್ ಬಿಟ್ಟುಕೊಟ್ಟರು ಮತ್ತು ಇಬ್ಬರಿಗೂ ಯಾವುದೇ ವಿಕೆಟ್ ಲಭಿಸಲಿಲ್ಲ. ಆದರೆ, ಹಳೆಯ ತಂಡದ ವಿರುದ್ಧವೇ ಕಣಕ್ಕಿಳಿದಿದ್ದ ಶಾರ್ದೂಲ್ ಠಾಕೂರ್ ಮುಂಬೈ ಪರ ಆಪತ್ಬಾಂಧವರಾಗಿ ಮೂಡಿಬಂದರು. 39 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆಯುವ ಮೂಲಕ ಕೆಕೆಆರ್ ರನ್ ವೇಗಕ್ಕೆ ಬ್ರೇಕ್ ಹಾಕಿದರು. ರಹಾನೆ ಅವರನ್ನೇ ಔಟ್ ಮಾಡುವಲ್ಲಿ ಯಶಸ್ವಿಯಾದ ಶಾರ್ದೂಲ್, ಕೆಕೆಆರ್ ಸ್ಕೋರ್ 250ರ ಗಡಿ ದಾಟದಂತೆ ತಡೆಯುವಲ್ಲಿ ಯಶಸ್ವಿಯಾದರು. ಸದ್ಯ ರಹಾನೆ ಅವರ ಗಾಯದ ತೀವ್ರತೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದ್ದು, ಟೂರ್ನಿಯ ಆರಂಭದಲ್ಲೇ ನಾಯಕನ ಗಾಯ ಕೆಕೆಆರ್ ಪಾಳಯದಲ್ಲಿ ಆತಂಕ ಮೂಡಿಸಿದೆ.
ಇದನ್ನೂ ಓದಿ : ಮುಂಬೈ ಇಂಡಿಯನ್ಸ್ ಐತಿಹಾಸಿಕ ಜಯ : 13 ವರ್ಷಗಳ ಬಳಿಕ ಮೊದಲ ಪಂದ್ಯದಲ್ಲೇ ಗೆಲುವಿನ ನಗೆ



















