ಬೆಂಗಳೂರು: ನಗರದಲ್ಲಿ ಗೃಹಬಳಕೆ ಎಲ್ಪಿಜಿ ಸಿಲಿಂಡರ್ಗಾಗಿ ಜನರು ಅನುಭವಿಸುತ್ತಿರುವ ಸಂಕಷ್ಟ ಆತಂಕ ಹುಟ್ಟಿಸುವ ಮಟ್ಟಕ್ಕೆ ತಲುಪಿದೆ. ಮಧ್ಯಾಹ್ನದ ತೀವ್ರ ಬಿಸಿಲನ್ನೂ ಲೆಕ್ಕಿಸದೇ ಖಾಲಿ ಸಿಲಿಂಡರ್ ಹಿಡಿದು ಜನರು ಸಾಲಿನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿದ್ದು, ಕೆಲವೆಡೆ ಅರ್ಧ ಕಿಲೋಮೀಟರ್ ವರೆಗೆ ಕ್ಯೂ ವಿಸ್ತರಿಸಿದೆ. ಲಿಂಗರಾಜಪುರ, ಮಹಾದೇವಪುರ, ಕೆ.ಅರ್ ಪುರಂ ಭಾಗದ ಹೆಚ್ ಪಿ ಗ್ಯಾಸ್, ಇಂಡಿಯನ್ ಗ್ಯಾಸ್ ಏಜೆನ್ಸಿ ಮುಂದೆ ಕಳೆದ 3-4 ದಿನಗಳಿಂದ ಜನರು ಸಿಲಿಂಡರ್ಗಾಗಿ ಕಾಯುತ್ತಿದ್ದಾರೆ. ಅನೇಕರು ಈಗಾಗಲೇ 20 ದಿನಗಳ ಹಿಂದೆ ಬುಕ್ಕಿಂಗ್ ಮಾಡಿದ್ದು, ಓಟಿಪಿ ಬಂದಿದ್ದರೂ ಡೆಲಿವರಿ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಮರ್ಷಿಯಲ್ ಬಳಿಕ ಈಗ ಡೊಮೆಸ್ಟಿಕ್ ಸಮಸ್ಯೆ..?
ಈ ಹಿಂದೆ ಕಮರ್ಷಿಯಲ್ಎಲ್ಪಿಜಿ ಸಿಲಿಂಡರ್ ಕೊರತೆಯಿಂದ ಹೋಟೆಲ್ ಉದ್ಯಮಕ್ಕೆ ಹೊಡೆತ ನೀಡಿತ್ತು. ಇದೀಗ ಅದೇ ಪರಿಸ್ಥಿತಿ ಗೃಹಬಳಕೆ ಸಿಲಿಂಡರ್ ಮೇಲೂ ಬೀಳುತ್ತಿದೆಯೇ ಎಂಬ ಆತಂಕ ಜನರಲ್ಲಿ ಹೆಚ್ಚಾಗಿದೆ. ಕೊಲ್ಲಿ ಯುದ್ಧ ಮತ್ತು ಗಲ್ಫ್ ರಾಷ್ಟ್ರಗಳ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದ ಎಲ್ಪಿಜಿ ಸರಬರಾಜು ಮೇಲೆ ಪರಿಣಾಮ ಬೀರಿದೆ ಎಂಬ ಮಾತು ಕೇಳಿಬರುತ್ತಿದೆ. ಇದರಿಂದ ರಾಜ್ಯದಲ್ಲಿ ಸರಬರಾಜು ಸರಪಳಿ ಅಸ್ತವ್ಯಸ್ತವಾಗಿದೆಯೆಂಬ ಅನುಮಾನ ಮೂಡಿದೆ.
ಏಜೆನ್ಸಿಗಳ ಸ್ಪಷ್ಟನೆ ಏನು..?
ಆದರೆ ಗ್ಯಾಸ್ ಏಜೆನ್ಸಿ ಮಾಲೀಕರು ಇದನ್ನು “ಸಿಲಿಂಡರ್ ಕೊರತೆ” ಎಂದು ಅಲ್ಲ, “ಪ್ಯಾನಿಕ್ ಬುಕ್ಕಿಂಗ್” ಸಮಸ್ಯೆ ಎಂದು ಹೇಳುತ್ತಿದ್ದಾರೆ.
ಹಿಂದೆ ದಿನಕ್ಕೆ 500–600 ಬುಕ್ಕಿಂಗ್ ಆಗುತ್ತಿದ್ದವು. ಆದರೆ ಈಗ ದಿನಕ್ಕೆ 2000ಕ್ಕೂ ಹೆಚ್ಚು ಬುಕ್ಕಿಂಗ್ ಅಗುತ್ತಿದೆ. ಜನರು ಭಯದಿಂದ ಮುಂಚಿತವಾಗಿ ಬುಕ್ ಮಾಡುತ್ತಿರುವುದರಿಂದ ಡಿಮ್ಯಾಂಡ್ ಏಕಾಏಕಿ ಹೆಚ್ಚಾಗಿದೆ. ಇದರಿಂದ ಡಿಸ್ಟ್ರಿಬ್ಯೂಷನ್ನಲ್ಲಿ ವಿಳಂಬ ಉಂಟಾಗಿದೆ ಎಂದು ಗ್ಯಾಸ್ ಅಂಗಡಿ ಮಾಲೀಕರು ಹೇಳುತ್ತಿದರೆ.
ಸತ್ಯ ಏನು? ಕೊರತೆ ಅಥವಾ ಗಾಬರಿ?
ತಜ್ಞರ ಪ್ರಕಾರ, ನಿಜವಾದ ಕೊರತಿಗಿಂತ ಹೆಚ್ಚಾಗಿ “ಗಾಬರಿ ಮನೋಭಾವ”ವೇ ಸಮಸ್ಯೆ ಹೆಚ್ಚಿಸುತ್ತಿದೆ. ಸರಬರಾಜು ವ್ಯವಸ್ಥೆ ಮೇಲೆ ಒತ್ತಡ ಬಿದ್ದಿರುವುದರಿಂದ ತಾತ್ಕಾಲಿಕ ವಿಳಂಬ ಆಗುತ್ತಿದೆ ಎಂದು ತಜ್ಞರು ಹೇಳುತ್ತಾರೆ.
ಜನರಿಗೆ ಸಲಹೆ:
ಅಗತ್ಯವಿದ್ದಾಗ ಮಾತ್ರ ಬುಕ್ಕಿಂಗ್ ಮಾಡಿ, ಅನಗತ್ಯವಾಗಿ ಸ್ಟಾಕ್ ಮಾಡಬೇಡಿ. ಅಧಿಕೃತ ಮಾಹಿತಿ ಮೇಲೆ ನಂಬಿಕೆ ಇಡಿ. ಕಮರ್ಷಿಯಲ್ ಎಲ್ಪಿಜಿ ಸಮಸ್ಯೆಯ ನಂತರ ಈಗ ಗೃಹಬಳಕೆ ಸಿಲಿಂಡರ್ ಮೇಲೂ ಒತ್ತಡ ಹೆಚ್ಚಾಗಿದ್ದು, ಸರ್ಕಾರ ಹಾಗೂ ಸರಬರಾಜು ಸಂಸ್ಥೆಗಳು ಪರಿಸ್ಥಿತಿಯನ್ನು ಸಮತೋಲನಗೊಳಿಸುವ ಸವಾಲು ಎದುರಿಸುತ್ತಿವೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಸ್ಪಾಂಜ್ ಐರನ್ ಕಾರ್ಖಾನೆಗಳಿಂದ ಜನಜೀವನ ಅಸ್ತವ್ಯಸ್ತ!



















