ಜೈಪುರ : 2026ರ ಐಪಿಎಲ್ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. 2008ರ ಚೊಚ್ಚಲ ಆವೃತ್ತಿಯ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ (RR) ಈ ಬಾರಿ ಹೊಸ ನಾಯಕ ರಿಯಾನ್ ಪರಾಗ್ ನೇತೃತ್ವದಲ್ಲಿ ಕಣಕ್ಕಿಳಿಯುತ್ತಿದೆ. ಸಂಜು ಸ್ಯಾಮ್ಸನ್ ಅವರಂತಹ ಅನುಭವಿ ನಾಯಕನನ್ನು ತಂಡದಿಂದ ಕೈಬಿಟ್ಟು ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರನ್ ಅವರಂತಹ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿರುವ ರಾಯಲ್ಸ್, ದೊಡ್ಡ ಬದಲಾವಣೆಗಳಿಗೆ ಸಾಕ್ಷಿಯಾಗಿದೆ.
ತಂಡದ ಗೆಲುವಿನ ಓಟಕ್ಕೆ ಅಡ್ಡಿಯಾಗಬಹುದಾದ ಮತ್ತು ಫ್ರಾಂಚೈಸಿಗೆ ‘ಹೊರೆ’ಯಾಗಬಹುದಾದ ಮೂವರು ಪ್ರಮುಖ ಆಟಗಾರರ ಬಗ್ಗೆ ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಕಳಪೆ ಫಾರ್ಮ್ ಮತ್ತು ಗಾಯದ ಸಮಸ್ಯೆ ಈ ಆಟಗಾರರ ಮೇಲೆ ಸಂಶಯ ಮೂಡಲು ಪ್ರಮುಖ ಕಾರಣವಾಗಿದೆ.
ಈ ಪಟ್ಟಿಯಲ್ಲಿ ಮೊದಲ ಹೆಸರು ರಿಯಾನ್ ಪರಾಗ್. ಈ ಬಾರಿ ತಂಡದ ನಾಯಕತ್ವದ ಜವಾಬ್ದಾರಿ ಹೊತ್ತಿರುವ ಪರಾಗ್ ಅವರಿಗೆ 2025ರ ಸೀಸನ್ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ಕಳೆದ ಬಾರಿ ಅವರು 33ರ ಸರಾಸರಿಯಲ್ಲಿ ಕೇವಲ 393 ರನ್ ಗಳಿಸಿದ್ದರು ಮತ್ತು ತಂಡವು 9ನೇ ಸ್ಥಾನಕ್ಕೆ ಕುಸಿದಿತ್ತು. 2024ರಲ್ಲಿ ಅದ್ಭುತವಾಗಿ ಆಡಿದ್ದ ಪರಾಗ್ ಅವರ ಫಾರ್ಮ್ ದಿಢೀರ್ ಕುಸಿದಿರುವುದು ತಂಡಕ್ಕೆ ಚಿಂತೆಯ ವಿಷಯವಾಗಿದೆ. ನಾಯಕನಾಗಿ ತಂಡವನ್ನು ಮುನ್ನಡೆಸುವ ಜೊತೆಗೆ ಬ್ಯಾಟಿಂಗ್ನಲ್ಲಿ ಲಯಕ್ಕೆ ಮರಳುವುದು ಅವರಿಗೆ ದೊಡ್ಡ ಸವಾಲಾಗಿದೆ. ನಾಯಕನೇ ಫಾರ್ಮ್ ಕಳೆದುಕೊಂಡರೆ ಅದು ಇಡೀ ತಂಡದ ಮೇಲೆ ಮಾನಸಿಕ ಒತ್ತಡ ಹೇರುವ ಸಾಧ್ಯತೆ ಇದೆ.
ಭರವಸೆಯ ಆಟಗಾರ
ಇನ್ನು ಎರಡನೇ ಆಟಗಾರ ಧ್ರುವ ಜುರೆಲ್. ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ತಂಡದ ಭರವಸೆಯ ಆಟಗಾರನಾಗಿ ಮೂಡಿಬಂದಿರುವ ಜುರೆಲ್, ಐಪಿಎಲ್ನಲ್ಲಿ ಸ್ಥಿರತೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕಳೆದ ಸೀಸನ್ನಲ್ಲಿ ಅವರು ಕೇವಲ ಎರಡು ಅರ್ಧಶತಕಗಳ ನೆರವಿನಿಂದ 333 ರನ್ ಗಳಿಸಿದ್ದರು. ರಾಯಲ್ಸ್ ಮ್ಯಾನೇಜ್ಮೆಂಟ್ ಅವರನ್ನು ವಿಭಿನ್ನ ಕ್ರಮಾಂಕಗಳಲ್ಲಿ ಪ್ರಯೋಗ ಮಾಡುತ್ತಿರುವುದು ಕೂಡ ಅವರ ವೈಫಲ್ಯಕ್ಕೆ ಒಂದು ಕಾರಣವಿರಬಹುದು. ಐದನೇ ಕ್ರಮಾಂಕಕ್ಕಿಂತ ಕೆಳಗೆ ಬ್ಯಾಟಿಂಗ್ ಮಾಡುವುದು ಅವರ ನೈಸರ್ಗಿಕ ಆಟಕ್ಕೆ ಅಡ್ಡಿಯಾಗುತ್ತಿದ್ದು, ಈ ಬಾರಿಯಾದರೂ ಅವರು ಸ್ಥಿರ ಪ್ರದರ್ಶನ ನೀಡದಿದ್ದರೆ ತಂಡಕ್ಕೆ ಹಿನ್ನಡೆಯಾಗುವುದು ಖಚಿತ.
ಈ ಪಟ್ಟಿಯಲ್ಲಿರುವ ಮೂರನೇ ಮತ್ತು ಅತ್ಯಂತ ಚರ್ಚಿತ ಹೆಸರು ಇಂಗ್ಲೆಂಡ್ನ ವೇಗಿ ಜೋಫ್ರಾ ಆರ್ಚರ್. 12.50 ಕೋಟಿ ರೂಪಾಯಿಯ ಭಾರಿ ಮೊತ್ತಕ್ಕೆ ತಂಡಕ್ಕೆ ಮರಳಿರುವ ಆರ್ಚರ್, ಕಳೆದ ಸೀಸನ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದರು. 12 ಪಂದ್ಯಗಳಲ್ಲಿ ಕೇವಲ 11 ವಿಕೆಟ್ ಪಡೆದಿದ್ದ ಅವರು, ಓವರ್ಗೆ ಸರಾಸರಿ 9.47 ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದರು. ಪದೇ ಪದೇ ಕಾಡುತ್ತಿರುವ ಗಾಯದ ಸಮಸ್ಯೆ ಮತ್ತು ಲಯ ತಪ್ಪಿದ ಬೌಲಿಂಗ್ ಆರ್ಚರ್ ಅವರನ್ನು ತಂಡದ ಪಾಲಿಗೆ ಬಿಳಿ ಆನೆಯನ್ನಾಗಿ ಮಾಡುವ ಭೀತಿ ಮೂಡಿಸಿದೆ. ವಿಶ್ವಕಪ್ನಂತಹ ದೊಡ್ಡ ಟೂರ್ನಿಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದರೂ, ಒತ್ತಡದ ಸಮಯದಲ್ಲಿ ರನ್ ಬಿಟ್ಟುಕೊಡುವ ಅವರ ಹವ್ಯಾಸ ರಾಜಸ್ಥಾನ್ ರಾಯಲ್ಸ್ಗೆ ಮುಳುವಾಗಬಹುದು.
ಇದನ್ನೂ ಓದಿ : ಜಲಮಂಡಳಿ ವಿರುದ್ದ ಸಾಲು ಸಾಲು ಅಕ್ರಮ ಆರೋಪ – ಹೋರಾಟಕ್ಕೆ ಸಜ್ಜಾದ KRS ಪಕ್ಷ!



















