ನವದೆಹಲಿ : ಕಳೆದ ಆವೃತ್ತಿಯ ಐಪಿಎಲ್ನಲ್ಲಿ ಬಿರುಗಾಳಿ ಎಬ್ಬಿಸಿದ್ದ ಬಿಹಾರದ 14 ವರ್ಷದ ವಿಸ್ಮಯ ಬಾಲಕ ವೈಭವ್ ಸೂರ್ಯವಂಶಿಗೆ ಈ ಬಾರಿಯ ಐಪಿಎಲ್ ಅಷ್ಟು ಸುಲಭವಾಗಿರುವುದಿಲ್ಲ ಎಂದು ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಎಚ್ಚರಿಸಿದ್ದಾರೆ. ಹೋದ ವರ್ಷ ‘ಸರ್ಪ್ರೈಸ್ ಪ್ಯಾಕೇಜ್’ ಆಗಿ ಅಂಗಳಕ್ಕಿಳಿದಿದ್ದ ವೈಭವ್ಗೆ ಈ ಬಾರಿ ಎದುರಾಳಿ ತಂಡಗಳ ಬೌಲರ್ಗಳು ರಣತಂತ್ರದ ಸ್ಕೆಚ್ ಹಾಕಲಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ 12 ತಿಂಗಳುಗಳಿಂದ ವೈಭವ್ ಅವರ ಪ್ರತಿಯೊಂದು ಪಂದ್ಯವನ್ನೂ ಗಮನಿಸುತ್ತಿರುವ ರಾಬಿನ್ ಉತ್ತಪ್ಪ, ಆತನ ಪ್ರತಿಭೆಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, 2026ರ ಐಪಿಎಲ್ ಆವೃತ್ತಿಯು ವೈಭವ್ ಪಾಲಿಗೆ ನಿಜವಾದ ಪರೀಕ್ಷೆಯ ಕಾಲ ಎಂದು ಹೇಳಿದ್ದಾರೆ. “ಮೊದಲ ಆವೃತ್ತಿಯಲ್ಲಿ ಆತ ಆಡುವಾಗ ಬೌಲರ್ಗಳಿಗೆ ಆತನ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಆದರೆ ಈಗ ಹಾಗಲ್ಲ. ಎದುರಾಳಿ ತಂಡಗಳು ಆತನ ದೌರ್ಬಲ್ಯ ಮತ್ತು ಬಲಿಷ್ಠತೆಗಳ ಬಗ್ಗೆ ಗಂಟೆಗಟ್ಟಲೆ ವಿಡಿಯೋ ವಿಶ್ಲೇಷಣೆ ಮಾಡಿರುತ್ತವೆ. ಹೀಗಾಗಿ ಕಳೆದ ವರ್ಷದ ಅಬ್ಬರ ಈ ಬಾರಿ ಮರುಕಳಿಸುವುದು ಕಷ್ಟ” ಎಂದು ಉತ್ತಪ್ಪ ಸ್ಟಾರ್ ಸ್ಪೋರ್ಟ್ಸ್ ಜೊತೆಗಿನ ಸಂವಾದದಲ್ಲಿ ತಿಳಿಸಿದ್ದಾರೆ.
ಅದೃಷ್ಟಕ್ಕಿಂತ ಈಗ ತಾಂತ್ರಿಕತೆ ಮುಖ್ಯ
ವೈಭವ್ ಅವರ ಬ್ಯಾಟಿಂಗ್ ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿರುವ ಉತ್ತಪ್ಪ, ಕಳೆದ ಬಾರಿ ಆತನ ಯಶಸ್ಸಿನ ಹಿಂದೆ ಸ್ವಲ್ಪ ಮಟ್ಟಿನ ಅದೃಷ್ಟದ ಪಾಲು ಇತ್ತು ಎಂದಿದ್ದಾರೆ. “ಕೆಲವೊಮ್ಮೆ ಆತ ಬ್ಯಾಟ್ ಮಾಡುವಾಗ ಆತನಿಗೆ ಲಕ್ ಸಾಥ್ ನೀಡುತ್ತಿದೆ ಎಂದು ಎನಿಸುತ್ತದೆ. ಆದರೆ ಪಂದ್ಯದ ಮಟ್ಟ ಏರುತ್ತಿದ್ದಂತೆ ಮತ್ತು ಬೌಲರ್ಗಳು ಎಲ್ಲಿ ಚೆಂಡು ಹಾಕಬೇಕು ಎಂಬ ನಿಖರತೆ ಸಾಧಿಸಿದಾಗ, ಸೂರ್ಯವಂಶಿ ತನ್ನ ತಾಂತ್ರಿಕತೆಯನ್ನು ಇನ್ನಷ್ಟು ಸುಧಾರಿಸಿಕೊಳ್ಳಬೇಕಾಗುತ್ತದೆ. ಈ ಬಾರಿ ಆತ ರನ್ ಗಳಿಸಬಹುದು, ಆದರೆ ಕಳೆದ ಬಾರಿಯ ಹವಾ ಇರುವುದಿಲ್ಲ” ಎಂದು ಉತ್ತಪ್ಪ ವಿಶ್ಲೇಷಿಸಿದ್ದಾರೆ.
ಅಂಕಿಅಂಶಗಳ ಅಬ್ಬರ ಮತ್ತು ವಿಶ್ವದಾಖಲೆಯ ಓಟ
ರಾಜಸ್ಥಾನ್ ರಾಯಲ್ಸ್ ತಂಡದಿಂದ 1.10 ಕೋಟಿ ರೂಪಾಯಿಗೆ ಖರೀದಿಸಲ್ಪಟ್ಟಿದ್ದ ಈ ಎಡಗೈ ಬ್ಯಾಟರ್, 2025ರ ಐಪಿಎಲ್ನಲ್ಲಿ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿ ಸಂಚಲನ ಸೃಷ್ಟಿಸಿದ್ದರು. ಏಳು ಪಂದ್ಯಗಳಲ್ಲಿ 206.55ರ ಸ್ಟ್ರೈಕ್ ರೇಟ್ನಲ್ಲಿ 252 ರನ್ ಗಳಿಸಿದ್ದ ಆತನ ಆಟ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತ್ತು. ಅಷ್ಟೇ ಅಲ್ಲದೆ, 2026ರ ಅಂಡರ್-19 ವಿಶ್ವಕಪ್ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 80 ಎಸೆತಗಳಲ್ಲಿ 175 ರನ್ ಸಿಡಿಸಿ ಭಾರತಕ್ಕೆ ಆರನೇ ಬಾರಿ ಕಿರಿಯರ ವಿಶ್ವಕಪ್ ತಂದುಕೊಟ್ಟ ಹಿರಿಮೆ ಇವರದ್ದು. ಒಟ್ಟಾರೆಯಾಗಿ, ವೈಭವ್ ಸೂರ್ಯವಂಶಿ ಸದ್ಯ ಭಾರತೀಯ ಕ್ರಿಕೆಟ್ನ ಅತ್ಯಂತ ಆಕರ್ಷಕ ಪ್ರತಿಭೆಯಾಗಿ ಬೆಳೆದು ನಿಂತಿದ್ದಾರೆ. ಆದರೆ ರಾಬಿನ್ ಉತ್ತಪ್ಪ ಹೇಳುವಂತೆ, 2026ರ ಐಪಿಎಲ್ ಈ ಯುವಕನಿಗೆ ಪಕ್ವತೆ ಮತ್ತು ತಾಳ್ಮೆಯ ಪಾಠವನ್ನು ಕಲಿಸಲಿದೆ. ಇದನ್ನು ವೈಭವ್ ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ನೋಡಲು ಕ್ರಿಕೆಟ್ ಲೋಕ ಕಾತರವಾಗಿದೆ.
ಇದನ್ನೂ ಓದಿ : ಭರ್ಜರಿ ಶತಕ ಸಿಡಿಸಿ ಫಾರ್ಮ್ಗೆ ಮರಳಿದ ಕ್ಯಾಮರೂನ್ ಗ್ರೀನ್.. ಕೆಕೆಆರ್ ಪಾಳಯದಲ್ಲಿ ಸಂತಸದ ಅಲೆ



















