ಬೆಂಗಳೂರು : ಎಲ್ಪಿಜಿ ಪೂರೈಕೆ ಇಲ್ಲದೇ ಅನೇಕ ಹೊಟೇಲ್ಗಳು ಬಾಗಿಲು ಹಾಕಿದ್ದು, ಮೆನು ಕಡಿತಗೊಳಿಸಿರುವ ಕಾರಣ ಮಾರುಕಟ್ಟೆಗಳಲ್ಲಿ ತರಕಾರಿ ವ್ಯಾಪಾರದಲ್ಲಿ ಗಣನೀಯ ಕುಸಿತ ಕಂಡು ಬಂದಿದೆ.
ತರಕಾರಿ ವ್ಯಾಪಾರ ಕಡಿಮೆ ಆಗಿರುವುದರಿಂದ ಬೆಲೆಯೂ ಕಡಿಮೆಯಾಗಿದೆ. ಇದರಿಂದ ವ್ಯಾಪಾರಿಗಳು ಚಿಂತಾಕ್ರಾಂತರಾಗಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ತರಕಾರಿ ಮಾರಾಟದಲ್ಲಿ ಮತ್ತಷ್ಟು ಕುಸಿತವಾಗುವ ಆತಂಕ ಎದುರಾಗಿದೆ.
ಹಿಂದೆ 40 ರೂ. ಪ್ರತಿ ಕೆಜಿ ಇದ್ದ ಟೊಮೆಟೊ ಈಗ 8 ರೂ.ಗೆ ಮಾರಾಟವಾಗುತ್ತಿದೆ. ಕೆ.ಆರ್. ಮಾರುಕಟ್ಟೆಯಲ್ಲಿ ಕ್ಯಾರೇಟ್ 20 ರೂ. ಕೆ.ಜಿ, ಮೂಲಂಗಿ 10 ರೂ. ಕೆ.ಜಿ. ಬದನೆಕಾಯಿ 20 ರೂ.ಯಿಂದ 30 ರೂ. ಕೆ.ಜಿಯಾಗಿದೆ. ಉಳಿದ ಬಹುತೇಕ ತರಕಾರಿಗಳ ಬೆಲೆ 30 ರಿಂದ 40 ರೂ. ಆಸುಪಾಸು ಇದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ತರಕಾರಿ ಬೆಲೆ ಹೆಚ್ಚಾಗಿಯೇ ಇರುತ್ತದೆ. ಆದರೆ, ಎಲ್ಪಿಜಿ ಸಮಸ್ಯೆಯಿಂದ ಈಗ ಬೆಲೆ ಕುಸಿತವಾಗಿದೆ.
ಇನ್ನೊಂದೆಡೆ ನಿಂಬೆಹಣ್ಣಿನ ಬೆಲೆ ಮಾತ್ರ ಗಗನಕ್ಕೇರಿದೆ. ಮೊದಲು 3000ಕ್ಕೆ ಸಿಗುತ್ತಿದ್ದ ನಿಂಬೆಹಣ್ಣಿನ ಮೂಟೆ ಈಗ 7000ದತ್ತ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ಒಂದು ನಿಂಬೆಹಣ್ಣು 10ರಿಂದ 15ರವರೆಗೆ ಮಾರಾಟವಾಗುತ್ತಿದೆ. ಕೆಲ ತರಕಾರಿಗಳಿಗೆ ಬೆಲೆ ಇಲ್ಲದೆ ಹಾಳಾಗುತ್ತಿದ್ದರೆ, ನಿಂಬೆಹಣ್ಣು ಮಾತ್ರ ದುಬಾರಿ ಆಗಿದೆ. ಒಟ್ಟಾರೆ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತದಿಂದ ವ್ಯಾಪಾರಿಗಳು ಸಂಕಷ್ಟದಲ್ಲಿದ್ದಾರೆ.
ರೈತರ ಮೇಲೂ ಪರಿಣಾಮ
ಮಾರುಕಟ್ಟೆಯಲ್ಲಿ ತರಕಾರಿ ಖರೀದಿ, ಮಾರಾಟವಾಗದಿದ್ದರೆ ಅದರ ಪರಿಣಾಮ ತರಕಾರಿ ಬೆಳೆಯುವ ರೈತರ ಮೇಲೂ ಬೀಳುತ್ತದೆ. ತರಕಾರಿ ಖರೀದಿಯಾಗದಿದ್ದರೆ, ರೈತರು ಬೆಳೆದ ತರಕಾರಿಗಳು ಮಾರುಕಟ್ಟೆಗೆ ಬರಲು ಸಮಸ್ಯೆ ಆಗುತ್ತದೆ. ಗ್ಯಾಸ್ ಪೂರೈಕೆ ಕೊರತೆ ಪರಿಣಾಮ ಆರಂಭದಲ್ಲಿ ಹೊಟೇಲ್ ಉದ್ಯಮದ ಮೇಲೆ ಬಿದ್ದಿದ್ದರೂ ಮುಂದಿನ ದಿನಗಳಲ್ಲಿ ಅನ್ನದಾತರನ್ನು ಕಾಡುವ ಆತಂಕ ಶುರುವಾಗಿದೆ.
ಇದನ್ನೂ ಓದಿ : ಅಪಘಾತದಲ್ಲಿ ಪ್ರಾಣ ಬಿಟ್ಟ ಚಿರತೆ!



















