ಕೊಪ್ಪಳ: ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಇರುವ ಕನಕಾಚಲಪತಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ ಜಾತ್ರಾಮಹೋತ್ಸವದ ಅಂಗವಾಗಿ ಗರುಡೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.

ಎರಡನೇ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ಈ ಕ್ಷೇತ್ರದಲ್ಲಿ ನಡೆಯುವ ಜಾತ್ರಾಮಹೋತ್ಸವದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾದ ಗರುಡೋತ್ಸವ ಭಕ್ತಿಭಾವದಿಂದ ಜರುಗಿತು. ತಿರುಮಲ ತಿರುಪತಿ ದೇವಸ್ಥಾನದಲ್ಲಿ ನಡೆಯುವ ಗರುಡೋತ್ಸವ ಮತ್ತು ಬ್ರಹ್ಮೋತ್ಸವ ಮಾದರಿಯಲ್ಲೇ ಇಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದು ವಿಶೇಷವಾಗಿದೆ.
ಮಹಾರಥೋತ್ಸವಕ್ಕೆ ಮುನ್ನ ಬೆಳಗಿನ ಜಾವ ಗರುಡೋತ್ಸವ ನಡೆಯಿತು. ಸೂರ್ಯೋದಯಕ್ಕೂ ಮುಂಚೆ ಹಳದಿ ಬಣ್ಣದ ಗರುಡ ವಾಹನದ ಮೇಲೆ ಲಕ್ಷ್ಮೀ ದೇವಿ ಹಾಗೂ ನರಸಿಂಹ ಸ್ವಾಮಿ ಅವರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಭಕ್ತರ ನಡುವೆ ಭವ್ಯ ಮೆರವಣಿಗೆ ನಡೆಸಲಾಯಿತು.
ಸುಮಾರು ಎರಡು ಕಿಲೋಮೀಟರ್ ದೂರವರೆಗೆ ಸಾಗಿದ ಗರುಡೋತ್ಸವ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದರು. ಭಕ್ತರ ಜಯಘೋಷ, ಮಂಗಳವಾದ್ಯಗಳ ನಾದ ಹಾಗೂ ಭಕ್ತಿಭಾವದ ವಾತಾವರಣದಲ್ಲಿ ಕನಕಗಿರಿ ಪಟ್ಟಣವೇ ಧಾರ್ಮಿಕ ಉತ್ಸವದ ಸೊಬಗಿನಲ್ಲಿ ಕಂಗೊಳಿಸಿತು.



















