ಬೆಂಗಳೂರು | ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ರಾಜ್ಯ ಸರ್ಕಾರ ಬಹುಕೋಟಿ ವೆಚ್ಚದ ಟನಲ್ ರಸ್ತೆ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ.
ಬಹುಕಾಲದಿಂದ ಚರ್ಚೆಯಲ್ಲಿದ್ದ ಈ ಯೋಜನೆ ಈಗ ಕಾಮಗಾರಿ ಹಂತಕ್ಕೆ ಬರಲು ಸಜ್ಜಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಕನಸಿನ ಯೋಜನೆ ಎಂದೇ ಗುರುತಿಸಿಕೊಂಡಿರುವ ಈ ಟನಲ್ ರಸ್ತೆ ಯೋಜನೆಗೆ ಸಂಬಂಧಿಸಿದಂತೆ ಟೆಕ್ನಿಕಲ್ ಬಿಡ್ ಪರಿಶೀಲನೆ ಈಗಾಗಲೇ ಮುಕ್ತಾಯಗೊಂಡಿದೆ. ಮುಂದಿನ 15 ದಿನಗಳಲ್ಲಿ ಕಾಮಗಾರಿ ಆರಂಭಕ್ಕೆ ಅಂತಿಮ ಮುದ್ರೆ ಬೀಳುವ ಸಾಧ್ಯತೆ ಇದೆ.
ಯಾರಿಗೆ ಒಲಿಯಿತು ಅವಕಾಶ..?
16.75 ಕಿಮೀ ಉದ್ದದ ಟನಲ್ ರಸ್ತೆ ಕಾಮಗಾರಿಯನ್ನು ಎರಡು ಪ್ಯಾಕೇಜ್ಗಳಲ್ಲಿ ಒಟ್ಟು 17,698 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸರ್ಕಾರ ಟೆಂಡರ್ ಕರೆದಿತ್ತು. ಟೆಂಡರ್ನಲ್ಲಿ ನಾಲ್ಕು ಕಂಪನಿಗಳು ಭಾಗವಹಿಸಿದ್ದವು. ಆದರೆ, ದಿಲೀಪ್ ಬಿಲ್ಡ್ಕಾನ್ ಹಾಗೂ ರೈಲ್ವೆ ವಿಕಾಸ್ ನಿಗಮ್ ಲಿಮಿಟೆಡ್ ಕಂಪನಿಗಳು ತಾಂತ್ರಿಕ ಕಾರಣಗಳಿಂದ ಅರ್ಹತೆ ಕಳೆದುಕೊಂಡವು. ಅಂತಿಮ ಹಣಕಾಸು ಹಂತಕ್ಕೆ ಅದಾನಿ ಗ್ರೂಪ್ ಮತ್ತು ಹೈದರಾಬಾದ್ ಮೂಲದ ವಿಶ್ವಸಮುದ್ರ ಕಂಪನಿ ಮಾತ್ರ ಅಂತಿಮ ಬಿಡ್ ಪ್ರವೇಶಿಸಿತ್ತು.
ಸರ್ಕಾರದ ಅಂದಾಜು ವೆಚ್ಚ : ₹17,698 ಕೋಟಿ
ಅದಾನಿ ಗ್ರೂಪ್ ಬಿಡ್ : ₹22,267 ಕೋಟಿ (ಅಂದಾಜಿಗಿಂತ ₹4,569 ಕೋಟಿ ಹೆಚ್ಚು – ಶೇ.24ರಷ್ಟು ಹೆಚ್ಚಳ)
ವಿಶ್ವಸಮುದ್ರ ಗ್ರೂಪ್ ಬಿಡ್ : ₹25,474 ಕೋಟಿ (ಅಂದಾಜಿಗಿಂತ ₹7,776 ಕೋಟಿ ಹೆಚ್ಚು)
ಎರಡೂ ಕಂಪನಿಗಳಲ್ಲಿ ಕಡಿಮೆ ಮೊತ್ತಕ್ಕೆ ಬಿಡ್ ಮಾಡಿರುವುದರಿಂದ ಅದಾನಿ ಗ್ರೂಪ್ಗೆ ಟೆಂಡರ್ ಒಲಿಯುವ ಸಾಧ್ಯತೆ ಹೆಚ್ಚು ಎಂದು ಮೂಲಗಳು ತಿಳಿಸಿವೆ. ಅದಾನಿ ಕುರಿತಾಗಿ ಆಗಾಗ ಟೀಕೆ ಮಾಡುತ್ತಿದ್ದ ಕಾಂಗ್ರೆಸ್ ಸರ್ಕಾರವೇ ಈಗ ಅದೇ ಅದಾನಿ ಗ್ರೂಪ್ಗೆ ಟೆಂಡರ್ ನೀಡಲಿದೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಮತ್ತೊಂದೆಡೆ, ಟನಲ್ ರಸ್ತೆ ಯೋಜನೆಯನ್ನು ವಿರೋಧಿಸುತ್ತಿದ್ದ ಬಿಜೆಪಿ, ಇದೀಗ ಅದಾನಿ ವಿರುದ್ಧ ಧ್ವನಿ ಎತ್ತುತ್ತದೆಯೇ ಎಂಬುದೂ ಕುತೂಹಲ ಹುಟ್ಟಿಸಿದೆ.
ಕಳೆದ ಎರಡು ತಿಂಗಳಿಂದ ತಾಂತ್ರಿಕ ಅಡಚಣೆಗಳನ್ನು ಬಗೆಹರಿಸಲಾಗಿದ್ದು, ಹಣಕಾಸು ಪರಿಶೀಲನೆ ಪೂರ್ಣಗೊಂಡ ಬಳಿಕ ಮುಂದಿನ 15 ದಿನಗಳಲ್ಲಿ ಅಂತಿಮ ಒಪ್ಪಂದಕ್ಕೆ ಸಹಿ ಬೀಳುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಎನ್ನಲಾಗುತ್ತಿರುವ ಟನಲ್ ರಸ್ತೆ ಯೋಜನೆ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ದೊಡ್ಡ ಚರ್ಚೆಗೆ ಕಾರಣವಾಗುತ್ತಿದೆ.
ಇದನ್ನೂ ಓದಿ : ನಿಧಿ ಆಸೆಗಾಗಿ ಅಪಾರ್ಟ್ಮೆಂಟ್ನ ಬೇಸ್ಮೆಂಟ್ ತೋಡಿದ ಬಿಲ್ಡರ್!



















