ಬೈರುತ್/ಜೆರುಸಲೆಮ್ : ಇರಾನ್ಗೆ ಬೆಂಬಲ ಸೂಚಿಸಿ ಇಸ್ರೇಲ್ ಮೇಲೆ ಹೆಜ್ಬುಲ್ಲಾ ಬಂಡುಕೋರರು ಕ್ಷಿಪಣಿ ದಾಳಿ ನಡೆಸಿದ್ದು, ಅದಕ್ಕೆ ಪ್ರತಿಯಾಗಿ ಇಸ್ರೇಲ್ ರಕ್ಷಣಾ ಪಡೆ (IDF) ಲೆಬನಾನ್ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿದೆ. ಈ ಸರಣಿ ದಾಳಿಯಲ್ಲಿ ಕನಿಷ್ಠ 31 ಮಂದಿ ಸಾವನ್ನಪ್ಪಿದ್ದು, 140ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ನ ಸಾರ್ವಜನಿಕ ಆರೋಗ್ಯ ಸಚಿವಾಲಯ ಅಧಿಕೃತವಾಗಿ ತಿಳಿಸಿದೆ. ಇರಾನ್ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಹತ್ಯೆಯ ನಂತರ ಈ ಪ್ರಾಂತ್ಯದಲ್ಲಿ ಉದ್ವಿಗ್ನತೆ ತಾರಕಕ್ಕೇರಿದ್ದು, ಇಸ್ರೇಲ್ ಮತ್ತು ಹೆಜ್ಬೊಲ್ಲಾ ನೇರ ಯುದ್ಧಕ್ಕೆ ಇಳಿದಿವೆ.
ಹಿಜ್ಬೊಲ್ಲಾ ಭದ್ರಕೋಟೆಗಳ ಮೇಲೆ ಮುಗಿಬಿದ್ದ ಇಸ್ರೇಲ್
ಹೆಜ್ಬೊಲ್ಲಾ ಸಂಘಟನೆಯು ಇಸ್ರೇಲ್ನ ಹೈಫಾ ನಗರದ ದಕ್ಷಿಣದಲ್ಲಿರುವ ಮಿಲಿಟರಿ ನೆಲೆಯ ಮೇಲೆ ನೂರಾರು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿತ್ತು. ಇದಕ್ಕೆ ತಕ್ಕ ಉತ್ತರ ನೀಡಲು ಸಜ್ಜಾದ ಇಸ್ರೇಲ್, ಲೆಬನಾನ್ ರಾಜಧಾನಿ ಬೈರುತ್ನ ದಕ್ಷಿಣ ಉಪನಗರಗಳು ಹಾಗೂ ದಕ್ಷಿಣ ಲೆಬನಾನ್ನಾದ್ಯಂತ ಏಕಕಾಲಕ್ಕೆ ದಾಳಿ ಆರಂಭಿಸಿದೆ. ಬೈರುತ್ನ ಹೆಜ್ಬೊಲ್ಲಾ ಭದ್ರಕೋಟೆಯಾದ ‘ದಹಿಯೆಹ್’ ಸೇರಿದಂತೆ ಹಲವು ಜನನಿಬಿಡ ಪ್ರದೇಶಗಳು ಇಸ್ರೇಲ್ನ ಕ್ಷಿಪಣಿಗಳಿಗೆ ಗುರಿಯಾಗಿವೆ. ಈ ದಾಳಿಯಲ್ಲಿ ಬೈರುತ್ನಲ್ಲಿ 20 ಮಂದಿ ಹಾಗೂ ದಕ್ಷಿಣ ಲೆಬನಾನ್ನಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಪ್ರಮುಖ ನಾಯಕ ಮೊಹಮ್ಮದ್ ರಾದ್ ಹತ್ಯೆ
ಈ ದಾಳಿಯಲ್ಲಿ ಹೆಜ್ಬೊಲ್ಲಾ ಸಂಘಟನೆಗೆ ಭಾರಿ ಹಿನ್ನಡೆಯಾಗಿದೆ. ಹೆಜ್ಬೊಲ್ಲಾದ ಸಂಸದೀಯ ಬಣದ ಮುಖ್ಯಸ್ಥ ಮೊಹಮ್ಮದ್ ರಾದ್ ಅವರನ್ನು ಇಸ್ರೇಲ್ ಪಡೆಗಳು ಹೊಡೆದುರುಳಿಸಿವೆ. “ಬೈರುತ್ ವಲಯದಲ್ಲಿರುವ ಹೆಜ್ಬೊಲ್ಲಾದ ಭಯೋತ್ಪಾದಕರು ಮತ್ತು ದಕ್ಷಿಣ ಲೆಬನಾನ್ನ ಕೇಂದ್ರ ಕಮಾಂಡರ್ ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ” ಎಂದು ಇಸ್ರೇಲ್ ಸೇನೆದೃಢಪಡಿಸಿದೆ. ಸಂಘರ್ಷದ ಹಾದಿಯನ್ನು ಹಿಡಿದಿರುವ ಹೆಜ್ಬೊಲ್ಲಾವೇ ಈ ಎಲ್ಲಾ ಅನಾಹುತಗಳಿಗೆ ನೇರ ಹೊಣೆ ಎಂದೂ ಇಸ್ರೇಲ್ ಹೇಳಿದೆ.
ಜನವಸತಿ ಪ್ರದೇಶಗಳಿಂದ ಸಾಮೂಹಿಕ ವಲಸೆ
ಇಸ್ರೇಲ್ನ ದಾಳಿಯ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಮತ್ತು ಪೂರ್ವ ಲೆಬನಾನ್ನ ಹತ್ತಾರು ಹಳ್ಳಿಗಳ ನಿವಾಸಿಗಳಿಗೆ ತಕ್ಷಣವೇ ಮನೆಗಳನ್ನು ಖಾಲಿ ಮಾಡುವಂತೆ ಎಚ್ಚರಿಕೆ ನೀಡಲಾಗಿದೆ. ಲೆಬನಾನ್ನ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳ ಪ್ರಕಾರ, ಬೈರುತ್ನ ದಕ್ಷಿಣ ಜಿಲ್ಲೆಗಳಲ್ಲಿ ನಾಗರಿಕರ ಸ್ಥಳಾಂತರ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. “ಆಕ್ರಮಣದ ವಿರುದ್ಧ ಹೋರಾಡುವುದು ನಮ್ಮ ಕರ್ತವ್ಯ” ಎಂದು ಹೆಜ್ಬೊಲ್ಲಾ ಘೋಷಿಸಿದ್ದರೆ, ಇತ್ತ ಇಸ್ರೇಲ್ ತನ್ನ ಗಡಿ ರಕ್ಷಣೆಗಾಗಿ ಯಾವುದೇ ಮಟ್ಟದ ದಾಳಿಗೂ ಸಿದ್ಧ ಎಂದು ಎಚ್ಚರಿಸಿದೆ. ಪ್ರಸ್ತುತ ಪರಿಸ್ಥಿತಿ ಕೈಮೀರುತ್ತಿದ್ದು, ಇಡೀ ಪ್ರಾಂತ್ಯದಲ್ಲಿ ಭೀತಿಯ ಕಾರ್ಮೋಡ ಕವಿದಿದೆ.
ಇದನ್ನೂ ಓದಿ : ಯೂಟ್ಯೂಬರ್ ’ಮಾಜಿ ಮುಸ್ಲಿಂ’ ಸಲೀಂ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಎನ್ಕೌಂಟರ್ಗೆ ಬಲಿ!



















