ಕೊಲ್ಕತ್ತಾ : ಇಲ್ಲಿನ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ತಮ್ಮ ವೃತ್ತಿಜೀವನದ ಶ್ರೇಷ್ಠ ಇನಿಂಗ್ಸ್ ಆಡುವ ಮೂಲಕ ಭಾರತವನ್ನು ಸೆಮಿಫೈನಲ್ಗೆ ಕೊಂಡೊಯ್ದಿದ್ದಾರೆ. ವೆಸ್ಟ್ ಇಂಡೀಸ್ ನೀಡಿದ ಸವಾಲಿನ ಗುರಿಯನ್ನು ಬೆನ್ನಟ್ಟುವಾಗ ಸಂಜು ಕೇವಲ 50 ಎಸೆತಗಳಲ್ಲಿ 97 ರನ್ ಸಿಡಿಸಿ ಅಜೇಯರಾಗಿ ಉಳಿದರು.
ಈ ಸ್ಫೋಟಕ ಬ್ಯಾಟಿಂಗ್ ಮೂಲಕ ಟಿ20 ವಿಶ್ವಕಪ್ನ ಯಶಸ್ವಿ ರನ್ ಚೇಸ್ನಲ್ಲಿ ಭಾರತೀಯ ಆಟಗಾರನೊಬ್ಬ ಗಳಿಸಿದ ಗರಿಷ್ಠ ಸ್ಕೋರ್ ಎಂಬ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸಂಜು ಸ್ಯಾಮ್ಸನ್ ಹಿಂದಿಕ್ಕಿದ್ದಾರೆ. ಒಂದು ಹಂತದಲ್ಲಿ ವಿಕೆಟ್ ಉರುಳುತ್ತಿದ್ದರೂ ಎದೆಗುಂದದೆ ಅಬ್ಬರಿಸಿದ ಸಂಜು, ಟೀಮ್ ಇಂಡಿಯಾಕ್ಕೆ ಐದು ವಿಕೆಟ್ಗಳ ರೋಚಕ ಜಯ ತಂದುಕೊಟ್ಟರು.
ನಾಯಕ ಸೂರ್ಯಕುಮಾರ್ ಯಾದವ್ ಹ್ಯಾಟ್ಸ್ಆಫ್
ಸಂಜು ಸ್ಯಾಮ್ಸನ್ ಅವರ ಈ ಅಪ್ರತಿಮ ಪ್ರದರ್ಶನ ಕಂಡು ಮೈದಾನದಲ್ಲಿದ್ದ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಪಂದ್ಯ ಮುಗಿಯುತ್ತಿದ್ದಂತೆ ಗಡಿರೇಖೆಯ ಬಳಿಯೇ ತಮ್ಮ ಕ್ಯಾಪ್ ತೆಗೆದ ಸೂರ್ಯಕುಮಾರ್, ಸಂಜು ಅವರಿಗೆ ತಲೆಬಾಗಿ ಶಿರಸಾಷ್ಟಾಂಗ ನಮನ ಸಲ್ಲಿಸುವ ಮೂಲಕ ಗೌರವ ಸೂಚಿಸಿದರು. ನಂತರ ಬಿಸಿಸಿಐ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾತನಾಡಿದ ಸೂರ್ಯ, “ಒಳ್ಳೆಯ ಜನರಿಗೆ ಯಾವಾಗಲೂ ಒಳ್ಳೆಯದೇ ಆಗುತ್ತದೆ. ಸಂಜು ತಂಡಕ್ಕಾಗಿ ಆಡಬೇಕು ಎಂಬ ದೃಢ ಸಂಕಲ್ಪ ಹೊಂದಿದ್ದರು. ಕಳೆದ ಒಂದು ವರ್ಷದಿಂದ ಅವರು ಎದುರಿಸಿದ ಟೀಕೆಗಳು ಮತ್ತು ಕಠಿಣ ಹಂತಕ್ಕೆ ಇಂದು ಅವರ ಬ್ಯಾಟ್ ಉತ್ತರ ನೀಡಿದೆ. ವಿಶ್ವಕಪ್ನಂತಹ ದೊಡ್ಡ ವೇದಿಕೆಯಲ್ಲಿ ಧೈರ್ಯವಂತರು ಮಾತ್ರ ಇಂತಹ ಇನಿಂಗ್ಸ್ ಆಡಲು ಸಾಧ್ಯ” ಎಂದು ಭಾವುಕರಾಗಿ ಪ್ರಶಂಸಿಸಿದರು.

‘ರುಲಾಯೇಗಾ ಕ್ಯಾ ಪಗ್ಲೇ?’: ನಾಯಕನ ಹೊಗಳಿಕೆಗೆ ಸಂಜು ಭಾವುಕ ಪ್ರತಿಕ್ರಿಯೆ
ನಾಯಕ ಸೂರ್ಯಕುಮಾರ್ ಯಾದವ್ ಅವರು ನಿರಂತರವಾಗಿ ಸಂಜು ಅವರ ಶ್ರೇಷ್ಠತೆಯನ್ನು ಹೊಗಳುತ್ತಿದ್ದಾಗ ವಾತಾವರಣವು ತುಸು ಭಾವುಕವಾಗಿತ್ತು. ಸೂರ್ಯ ಅವರ ಪ್ರೀತಿಯ ಮಾತುಗಳನ್ನು ಕೇಳಿದ ಸಂಜು ಸ್ಯಾಮ್ಸನ್ ನಗುತ್ತಲೇ ಕಣ್ಣೀರು ತಡೆಯಲು ಪ್ರಯತ್ನಿಸಿ, “ರುಲಾಯೇಗಾ ಕ್ಯಾ ಪಗ್ಲೇ?” (ನನ್ನನ್ನು ಅಳಿಸುತ್ತೀಯಾ ಮರುಳ?) ಎಂದು ಕೇಳುವ ಮೂಲಕ ಹಾಸ್ಯದ ಜೊತೆಗೆ ತಮ್ಮ ಸಂತಸವನ್ನು ಹಂಚಿಕೊಂಡರು. ಬೆಂಚ್ ಕಾಯುತ್ತಿದ್ದ ದಿನಗಳಿಂದ ಹಿಡಿದು ಇಂದು ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮುವವರೆಗಿನ ಸಂಜು ಅವರ ಜರ್ನಿ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಭಾರತ ತಂಡ ಈಗ ಸೆಮಿಫೈನಲ್ ಪ್ರವೇಶಿಸಿದ್ದು, ಮಾರ್ಚ್ 5 ರಂದು ಇಂಗ್ಲೆಂಡ್ ವಿರುದ್ಧ ಸೆಣಸಾಡಲಿದೆ.
ಇದನ್ನೂ ಓದಿ : ಬಳ್ಳಾರಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಮನೆ ಛಿದ್ರ ಛಿದ್ರ



















