ಅಹಮದಾಬಾದ್ : ಟಿ20 ವಿಶ್ವಕಪ್ 2026ರಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಟೀಂ ಇಂಡಿಯಾದ ಯುವ ಆಟಗಾರ ಅಭಿಷೇಕ್ ಶರ್ಮಾ ಅವರನ್ನು ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಸಮರ್ಥಿಸಿಕೊಂಡಿದ್ದಾರೆ. ನೆದರ್ಲೆಂಡ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಮಾತನಾಡಿದ ಅವರು, ಅಭಿಷೇಕ್ ಅವರ ಕಳಪೆ ಫಾರ್ಮ್ಗೆ ಅನಾರೋಗ್ಯವೇ ಮುಖ್ಯ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.
ಪಂಜಾಬ್ ಮೂಲದ ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾ, ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ರನ್ ಹೊಳೆ ಹರಿಸಿದ್ದರು. ಆದರೆ, ವಿಶ್ವಕಪ್ನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ (ಅಮೆರಿಕ ಮತ್ತು ಪಾಕಿಸ್ತಾನ ವಿರುದ್ಧ) ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದಾರೆ.
ಅನಾರೋಗ್ಯವೇ ಹಿನ್ನಡೆಗೆ ಕಾರಣ
ಅಮೆರಿಕ ವಿರುದ್ಧದ ಪಂದ್ಯದಲ್ಲಿ ಗೋಲ್ಡನ್ ಡಕ್ ಆಗಿದ್ದ ಅಭಿಷೇಕ್, ಎರಡನೇ ಇನಿಂಗ್ಸ್ನಲ್ಲಿ ಫೀಲ್ಡಿಂಗ್ಗೂ ಇಳಿದಿರಲಿಲ್ಲ. ಮುಂಬೈನಲ್ಲಿ ಕಲುಷಿತ ಆಹಾರ ಸೇವನೆಯಿಂದ ಉಂಟಾದ ಹೊಟ್ಟೆನೋವಿನ ಸಮಸ್ಯೆಯಿಂದಾಗಿ ಅವರ ಆರೋಗ್ಯ ಹದಗೆಟ್ಟಿತ್ತು. ಇದೇ ಕಾರಣಕ್ಕೆ ನಮೀಬಿಯಾ ವಿರುದ್ಧದ ಪಂದ್ಯದಿಂದಲೂ ಅವರು ಹೊರಗುಳಿಯಬೇಕಾಯಿತು. ದೆಹಲಿಯಲ್ಲಿ ನಡೆದ ಪಂದ್ಯದ ವೇಳೆ ಆಸ್ಪತ್ರೆಗೂ ದಾಖಲಾಗಿದ್ದರು ಎಂದು ಸಹ ಆಟಗಾರ ತಿಲಕ್ ವರ್ಮಾ ಮಾಹಿತಿ ನೀಡಿದ್ದಾರೆ. ನಂತರ ಪಾಕಿಸ್ತಾನ ವಿರುದ್ಧದ ಹೈ-ವೋಲ್ಟೇಜ್ ಪಂದ್ಯದಲ್ಲಿ ಕಣಕ್ಕಿಳಿದರಾದರೂ, ಸಲ್ಮಾನ್ ಅಲಿ ಅಘಾ ಅವರ ಎಸೆತದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಒತ್ತಡ ಹೇರಲ್ಲ ಎಂದ ಕೋಚ್
ಈ ಬಗ್ಗೆ ಪ್ರತಿಕ್ರಿಯಿಸಿರುವ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್, “ಅನಾರೋಗ್ಯಕ್ಕೂ ಮುನ್ನ ಅವರು ಉತ್ತಮ ಫಾರ್ಮ್ನಲ್ಲಿದ್ದರು. ಟಿ20 ಎಂಬುದು ಹೈ-ರಿಸ್ಕ್ ಆಟ. ಕೇವಲ ಒಂದೆರಡು ವೈಫಲ್ಯಗಳನ್ನು ದೊಡ್ಡದಾಗಿ ಮಾಡಬಾರದು. ನಾವು ಆಟಗಾರರ ಮೇಲೆ ಅನಗತ್ಯ ಒತ್ತಡ ಹೇರುವುದಿಲ್ಲ,” ಎಂದು ಅಭಯ ನೀಡಿದ್ದಾರೆ. ದೀರ್ಘಕಾಲದ ದೃಷ್ಟಿಕೋನ ಇಟ್ಟುಕೊಂಡು ಅಭಿಷೇಕ್ ಅವರಿಗೆ ಮತ್ತಷ್ಟು ಅವಕಾಶ ನೀಡುವ ಸುಳಿವು ನೀಡಿದ್ದಾರೆ.
ನಾಳೆ (ಫೆ. 18) ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಲಯ ಕಂಡುಕೊಳ್ಳುವ ನಿರೀಕ್ಷೆಯಿದೆ.
ಇದನ್ನೂ ಓದಿ : ಪರೀಕ್ಷೆಗೆ ಒಬ್ಬನೇ ವಿದ್ಯಾರ್ಥಿ.. ಆದ್ರೆ ಭದ್ರತೆಗೆ ಮ್ಯಾಜಿಸ್ಟ್ರೇಟ್, 18 ಮೇಲ್ವಿಚಾರಕರು, 12 ಪೊಲೀಸರು!



















