ಸಿಡ್ನಿ: ಕ್ರಿಕೆಟ್ ಅಂಗಳದಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕವೇ ಗಮನ ಸೆಳೆಯುವ ಭಾರತ ಮಹಿಳಾ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್, ಇದೀಗ ಆಸ್ಟ್ರೇಲಿಯಾದಲ್ಲಿ ತಮ್ಮ ಮಾನವೀಯ ನಡೆಯ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಭಾನುವಾರ (ಫೆ. 15) ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಆರಂಭವಾಗಲಿದ್ದು, ಇದಕ್ಕೂ ಮುನ್ನ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಂದ್ಯಕ್ಕೂ ಮುನ್ನ ಅಭಿಮಾನಿಗಳೊಂದಿಗೆ ಫೋಟೋಗೆ ಪೋಸ್ ನೀಡುವ ಸಂದರ್ಭದಲ್ಲಿ, ಪುಟ್ಟ ಬಾಲಕನೊಬ್ಬ ಅಳುತ್ತಿರುವುದನ್ನು ಗಮನಿಸಿದ ಹರ್ಮನ್ಪ್ರೀತ್, ತಕ್ಷಣವೇ ಆತನ ಬಳಿ ತೆರಳಿದರು. ಬಾಲಕನ ಕೈ ಹಿಡಿದು, ಬೆನ್ನು ಸವರಿದ ಅವರು, ಆತನನ್ನು ಸಮಾಧಾನಪಡಿಸಿ ಧೈರ್ಯ ತುಂಬಿದರು. ಮೈದಾನದಲ್ಲಿ ಎಷ್ಟೇ ಆಕ್ರಮಣಕಾರಿಯಾಗಿದ್ದರೂ, ಹೊರಗಡೆ ಅವರ ಈ ತಾಯ್ತನದ ಗುಣಕ್ಕೆ ಕ್ರಿಕೆಟ್ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಸೀಸ್ ವಿರುದ್ಧದ ಸವಾಲಿಗೆ ಸಜ್ಜಾದ ಭಾರತ
ಟಿ20, ಏಕದಿನ ಮತ್ತು ಟೆಸ್ಟ್ ಸರಣಿಗಳನ್ನಾಡಲು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಭಾರತ ಮಹಿಳಾ ತಂಡ, ಭಾನುವಾರ ಸಿಡ್ನಿಯಲ್ಲಿ ಮೊದಲ ಟಿ20 ಪಂದ್ಯವನ್ನಾಡಲಿದೆ. ಸರಣಿ ಆರಂಭಕ್ಕೂ ಮುನ್ನ ಫೆಬ್ರವರಿ 13ರಂದು ಗವರ್ನರ್ ಜನರಲ್ ಇಲೆವೆನ್ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತ 5 ವಿಕೆಟ್ಗಳ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಹರ್ಮನ್ಪ್ರೀತ್ ಕೌರ್ 23 ಎಸೆತಗಳಲ್ಲಿ 26 ರನ್ ಗಳಿಸಿ ಉತ್ತಮ ಫಾರ್ಮ್ ಪ್ರದರ್ಶಿಸಿದ್ದರು.
ಗುರಿ ಮುಟ್ಟುವ ವಿಶ್ವಾಸದಲ್ಲಿ ನಾಯಕಿ
ಸರಣಿ ಕುರಿತು ಮಾತನಾಡಿರುವ ಹರ್ಮನ್ಪ್ರೀತ್, “ನಾವು ನಮ್ಮ ಗುರಿಗಳನ್ನು ತಲುಪಲು ಕಠಿಣ ಪರಿಶ್ರಮಪಡುತ್ತಿದ್ದೇವೆ. ಏಕದಿನ ವಿಶ್ವಕಪ್ ಗೆಲ್ಲುವುದು ನಮ್ಮ ಪ್ರಮುಖ ಗುರಿ. ಆಸ್ಟ್ರೇಲಿಯಾ ಬಲಿಷ್ಠ ತಂಡ ಎಂಬುದು ನಮಗೆ ತಿಳಿದಿದೆ. ಆದರೆ, ಸಕಾರಾತ್ಮಕ ಮನಸ್ಥಿತಿಯೊಂದಿಗೆ ಕಣಕ್ಕಿಳಿದರೆ ಎದುರಾಳಿ ಯಾರೇ ಆಗಿದ್ದರೂ ಉತ್ತಮ ಪ್ರದರ್ಶನ ನೀಡಲು ಸಾಧ್ಯ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ‘ಇತಿಹಾಸ ಬದಲಿಸಲು ಸಾಧ್ಯವಿಲ್ಲ’ | ಭಾರತದ ವಿರುದ್ಧ ಸೋಲು ಒಪ್ಪಿಕೊಂಡ್ರಾ ಪಾಕ್ ನಾಯಕ ಸಲ್ಮಾನ್ ಆಘಾ?



















