ಕೊಪ್ಪಳ : ಕಾರ್ಖಾನೆಗಳಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ ವಿರೋಧಿಸಿ ಫೆಬ್ರವರಿ 24ರಂದು ಕೊಪ್ಪಳ ಸಂಪೂರ್ಣ ಬಂದ್ಗೆ ಕರೆ ನೀಡಲಾಗಿದೆ. ಈ ಸಂಬಂಧ ನಗರದಲ್ಲಿನ ಖಾಸಗಿ ಕಲ್ಯಾಣ ಮಂಟಪದಲ್ಲಿ “ಕೊಪ್ಪಳ ಬಚಾವ್ ಕಾರ್ಖಾನೆಗಳ ಹಟಾವು” ಕುರಿತು ಸಭೆ ನಡೆದಿದೆ.
ನಗರದ ಕೂಗಳತೆಯ ದೂರದಲ್ಲೇ ಕಾರ್ಯನಿರ್ವಹಿಸುತ್ತಿರುವ ಕೆಲವು ಕಾರ್ಖಾನೆಗಳು ಪರಿಸರವನ್ನು ಹಾಳು ಮಾಡುತ್ತಿವೆ ಎಂದು ಸಭೆಯಲ್ಲಿ ಆರೋಪಿಸಲಾಗಿದೆ. ಕಾರ್ಖಾನೆಗಳ ಧೂಳಿನಿಂದ ಮಹಿಳೆಯರು ಹಾಗೂ ಮಕ್ಕಳು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಸಭೆಯಲ್ಲಿ ರೈತ ಮಹಿಳೆಯರು ಹಾಗೂ ನಗರವಾಸಿ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ. ಗರ್ಭಪಾತ, ಅಸ್ತಮಾ, ಕ್ಯಾನ್ಸರ್, ಸ್ಟ್ರೋಕ್, ಚರ್ಮರೋಗ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ರೈತರ ಬೆಳೆದ ಬೆಳೆಗಳು ಕಾರ್ಖಾನೆಗಳ ಧೂಳಿನಿಂದ ಹಾನಿಗೊಳಗಾಗುತ್ತಿದ್ದು, ಹಲವರ ಜೀವವೂ ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕಾರ್ಖಾನೆಗಳನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಫೆ. 24ರಂದು ಗವಿಸಿದ್ದೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ಕೊಪ್ಪಳ ಬಂದ್ಗೆ ಕರೆ ನೀಡಲಾಗಿದೆ. ಕಾರ್ಖಾನೆಗಳನ್ನು ತಕ್ಷಣ ಬಂದ್ ಮಾಡದಿದ್ದರೆ ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಸಭೆಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ : ಶಾಸಕ ಬೈರತಿ ಬಸವರಾಜ್ನ ವೈದ್ಯಕೀಯ ಪರೀಕ್ಷೆಗೆ ಕರೆತಂದ ಸಿಐಡಿ | ಟೆಸ್ಟ್ ಬಳಿಕ ಕೊರ್ಟ್ಗೆ ಹಾಜರು



















