ಕೊಲಂಬೊ : ಐಸಿಸಿ ಟಿ20 ವಿಶ್ವಕಪ್ 2026ರ ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ದಿನಗಣನೆ ಆರಂಭವಾಗಿರುವಾಗಲೇ, ಪಾಕಿಸ್ತಾನದ ಮಾಜಿ ಕ್ರಿಕೆಟ್ ದಿಗ್ಗಜ ಸಕ್ಲೇನ್ ಮುಷ್ತಾಕ್ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಫೆಬ್ರವರಿ 15ರಂದು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ, ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಪ್ರಭಾವದಿಂದ ಪಿಚ್ ಅನ್ನು ಭಾರತಕ್ಕೆ ಅನುಕೂಲವಾಗುವಂತೆ ತಿರುಚುವ ಸಾಧ್ಯತೆ ಇದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಐಸಿಸಿ ಮೇಲೆ ಬಿಸಿಸಿಐ ಪ್ರಭಾವ?
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳು ಕೇವಲ ಮೈದಾನಕ್ಕಷ್ಟೇ ಸೀಮಿತವಾಗಿಲ್ಲ. ರಾಜಕೀಯ ಮತ್ತು ರಾಜತಾಂತ್ರಿಕ ಸಂಘರ್ಷಗಳ ನಡುವೆಯೂ ಈ ಪಂದ್ಯಗಳು ನಡೆಯುತ್ತಿವೆ. ಬಿಸಿಸಿಐ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ನಡುವಿನ ಒಪ್ಪಂದದಂತೆ, ಉಭಯ ದೇಶಗಳ ನಡುವಿನ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಡಿಸಲಾಗುತ್ತಿದೆ. ಅದರಂತೆ, ಪಾಕಿಸ್ತಾನ ತಂಡ ಶ್ರೀಲಂಕಾದಲ್ಲಿ ತನ್ನ ಪಂದ್ಯಗಳನ್ನು ಆಡುತ್ತಿದೆ.
ಆದರೆ, ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಅವರು ತಟಸ್ಥ ಸ್ಥಳಗಳಲ್ಲಿಯೂ ಪಕ್ಷಪಾತ ನಡೆಯುವ ಸಾಧ್ಯತೆ ಇದೆ ಎಂದು ದೂರಿದ್ದಾರೆ.
“ಇಂದಿನ ತಂತ್ರಜ್ಞಾನ ಮತ್ತು ಆಧುನಿಕ ಕ್ಯುರೇಟರ್ಗಳ ಸಹಾಯದಿಂದ ಪಿಚ್ ಸ್ವರೂಪವನ್ನು ಹೇಗೆ ಬೇಕಾದರೂ ಬದಲಾಯಿಸಬಹುದು. ಐಸಿಸಿ ಯಾರ ಪ್ರಭಾವದ ಅಡಿಯಲ್ಲಿ ಕೆಲಸ ಮಾಡುತ್ತದೆ ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಚಾರ,” ಎಂದು ಅವರು ಬಿಸಿಸಿಐ ಮತ್ತು ಐಸಿಸಿ ಅಧ್ಯಕ್ಷ ಜೈ ಶಾ ಅವರತ್ತ ಪರೋಕ್ಷವಾಗಿ ಬೊಟ್ಟು ಮಾಡಿದ್ದಾರೆ. ಜೈ ಶಾ ಅವರು ಐಸಿಸಿ ಅಧ್ಯಕ್ಷರಾದಾಗಿನಿಂದ ಪಿಸಿಬಿ ಮತ್ತು ಬಿಸಿಬಿ (ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ) ಸೇರಿದಂತೆ ಇತರ ಮಂಡಳಿಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳು ಆಗಾಗ ಕೇಳಿಬರುತ್ತಲೇ ಇವೆ.
ಪಾಕ್ ನಾಯಕತ್ವದ ಮೇಲೆ ಹರಿಹಾಯ್ದ ದಿಗ್ಗಜರು
ಪಿಚ್ ವಿವಾದದ ಜೊತೆಗೆ, ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಆಗಾ ಅವರ ನಾಯಕತ್ವದ ಬಗ್ಗೆಯೂ ಮಾಜಿ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಕ್ಲೇನ್ ಮುಷ್ತಾಕ್, ಉಮರ್ ಗುಲ್ ಮತ್ತು ಮೊಹಮ್ಮದ್ ಹಫೀಜ್ ಸೇರಿದಂತೆ ಹಲವರು ತಂಡದ ಆಯ್ಕೆ ಮತ್ತು ಬೌಲಿಂಗ್ ತಂತ್ರಗಾರಿಕೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ವಿಶೇಷವಾಗಿ ತಂಡದಲ್ಲಿರುವ ಏಕೈಕ ವೇಗದ ಬೌಲಿಂಗ್ ಆಲ್-ರೌಂಡರ್ ಫಹೀಮ್ ಅಶ್ರಫ್ ಅವರ ಪಾತ್ರದ ಬಗ್ಗೆ ಚರ್ಚೆ ನಡೆದಿದೆ. “ಭಾರತದಂತಹ ಪ್ರಬಲ ತಂಡದ ವಿರುದ್ಧ 19ನೇ ಅಥವಾ 20ನೇ ಓವರ್ ಬೌಲ್ ಮಾಡುವವರು ಯಾರು?” ಎಂದು ಅವರು ಪ್ರಶ್ನಿಸಿದ್ದಾರೆ. ನೆದರ್ಲ್ಯಾಂಡ್ಸ್ ಮತ್ತು ಯುಎಸ್ಎ ವಿರುದ್ಧದ ಪಂದ್ಯಗಳಲ್ಲಿ ಸ್ಪಿನ್ನರ್ಗಳ ಮೂಲಕ ಕೊನೆಯ ಓವರ್ಗಳನ್ನು ಮಾಡಿಸಲಾಗಿತ್ತು. ಆದರೆ ಭಾರತದ ವಿರುದ್ಧ ಅದು ವರ್ಕೌಟ್ ಆಗುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. “ಜಿಮ್ಮಿ ನೀಶಮ್ ಅವರಂತೆ ಫಹೀಮ್ ಅಶ್ರಫ್ ಅವರನ್ನು ಬಳಸಿಕೊಳ್ಳಬೇಕು. ಅವರು ಕೆಲವೊಮ್ಮೆ ಒಂದು ಓವರ್ ಮಾಡಬಹುದು, ಕೆಲವೊಮ್ಮೆ 20ನೇ ಓವರ್ ಮಾಡಬಹುದು. ಆದರೆ ಉಸ್ಮಾನ್ ತಾರಿಕ್, ನವಾಜ್ ಅಥವಾ ಶಾದಾಬ್ ಖಾನ್ ಅವರಿಗೆ ಅಂತಿಮ ಓವರ್ ನೀಡಲು ಸಾಧ್ಯವೇ?” ಎಂದು ಸಕ್ಲೇನ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಪೊಲೀಸ್ ನಿರ್ಲಕ್ಷ್ಯಕ್ಕೆ ಬಲಿಯಾದ ಭಾರತೀಯ ವಿದ್ಯಾರ್ಥಿನಿ ಕುಟುಂಬಕ್ಕೆ 240 ಕೋಟಿ ರೂ. ಪರಿಹಾರ!



















