ಬೆಂಗಳೂರು | ಮನೆಯಲ್ಲಿ ಒಬ್ಬಳೇ ಇದ್ದಾಗ ಸೊಸೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಫೌಂಡರ್ ಅಬ್ದುಲ್ ಹಫೀಜ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಇದೀಗ ಈ ಪ್ರಕರಣಕ್ಕೆ ರಾಜ್ಯ ಮಹಿಳಾ ಆಯೋಗ ಎಂಟ್ರಿ ಕೊಟ್ಟಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ವರದಿ ನೀಡುವಂತೆ ಉತ್ತರವಿಭಾಗ ಉಪ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ.

ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಸೊಸೆ ಜೊತೆ ಮಾವ ಅಸಭ್ಯ ರೀತಿಯಲ್ಲಿ ವರ್ತಿಸಿ ಲೈಂಗಿಕ ದೌರ್ಜನ್ಯವೆಸಗಿರುವ ಬಗ್ಗೆ ವರದಿಯಾಗಿದೆ. ಹಾಗಾಗಿ ಈ ಪ್ರಕರಣದ ಬಗ್ಗೆ ನಿಯಮಾನುಸಾರ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ವರದಿ ನೀಡುವಂತೆ ಸಂಬಂಧಪಟ್ಟ ಠಾಣಾಧಿಕಾರಿಯವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಮಹಿಳಾ ಆಯೋಗ ಪತ್ರದಲ್ಲಿ ಉಲ್ಲೇಖಿಸಿದೆ.
ಪ್ರಕರಣವೇನು?
ಮನೆಯಲ್ಲಿ ಒಬ್ಬಳೇ ಇದ್ದಾಗ ಸೊಸೆಗೆ ಮಾವನೇ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಆರ್.ಟಿ.ನಗರದಲ್ಲಿ ನಡೆದಿದೆ. ಮಾವನ ದುರ್ವರ್ತನೆಗೆ ಬೇಸತ್ತು ಆರ್.ಟಿ. ನಗರ ಪೊಲೀಸ್ ಠಾಣೆಗೆ ಸೊಸೆ ದೂರು ನೀಡಿದ್ದಾಳೆ. ಆರ್.ಟಿ.ನಗರದ ನಿವಾಸಿಯಾಗಿರುವ ಅಬ್ದುಲ್ ಹಫೀಜ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಆರೋಪಿಯು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಫೌಂಡರ್ ಆಗಿದ್ದು, ಸಮಾಜದಲ್ಲಿ ಗೌರವಯುತ ಸ್ಥಾನ ಹೊಂದಿದ್ದರೂ ಮನೆಯಲ್ಲಿ ಮಾತ್ರ ವಿಕೃತವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ. ಸೊಸೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಈತ, ಆಕೆಯ ಸೌಂದರ್ಯದ ಬಗ್ಗೆ ಅಶ್ಲೀಲವಾಗಿ ಪತ್ರ ಬರೆದು, ಆಕೆಯ ಮುಂದೆಯೇ ಓದಿ ವಿಕೃತಾನಂದ ಅನುಭವಿಸುತ್ತಿದ್ದ ಎನ್ನಲಾಗಿದೆ.
ಸಂತ್ರಸ್ತ ಮಹಿಳೆ ಮನೆಯಲ್ಲಿ ಒಬ್ಬಳೇ ಇದ್ದಾಗ ಮಾವ ಅಬ್ದುಲ್ ಹಫೀಜ್ ಪದೇ ಪದೇ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಮಾವನ ಈ ಅಸಭ್ಯ ವರ್ತನೆಯಿಂದ ರೋಸಿಹೋದ ಮಹಿಳೆ, ಈ ಬಗ್ಗೆ ತನ್ನ ಪತಿಗೆ ತಿಳಿಸಿದ್ದಾಳೆ. ಈ ವೇಳೆ ಮಗ ಕೂಡ ತಂದೆಗೆ ಬೈದು ಬುದ್ಧಿ ಹೇಳಿದ್ದಾನೆ. ಆದರೂ ತಿದ್ದಿಕೊಳ್ಳದೇ ಹಳೆ ಚಾಳಿ ಬಿಡದೇ ಮಾವ ಕಿರುಕುಳ ಮುಂದುವರಿಸಿದ್ದಾನೆ. ಇನ್ನು ಇತ್ತೀಚೆಗೆ ಲಿಫ್ಟ್ನಲ್ಲಿ ಸಂತ್ರಸ್ತೆ ಒಬ್ಬಳೇ ಸಿಕ್ಕಾಗ ಆಕೆಯನ್ನು ತಡೆದು ಬಲವಂತಪಡಿಸಿದ್ದಾನೆ. ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿ ಅತಿರೇಕದ ವರ್ತನೆ ತೋರಿದ್ದಾನೆ. ಮಾವನ ಕಾಟ ತಾಳಲಾರದೆ ಸಂತ್ರಸ್ತ ಮಹಿಳೆ ಕೊನೆಗೂ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.
ಇದನ್ನೂ ಓದಿ : ದೂರದರ್ಶನದ ಜನಪ್ರಿಯ ಸುದ್ದಿ ನಿರೂಪಕಿ ಸರಳ ಮಹೇಶ್ವರಿ ವಿಧಿವಶ



















