ದುಬೈ : ಐಸಿಸಿ ಟಿ20 ವಿಶ್ವಕಪ್ 2026ರ ಕಾವೇರುತ್ತಿದೆ. ಕ್ರಿಕೆಟ್ ಜಗತ್ತಿನ ಕಣ್ಣು ಈಗ ಕೊಲಂಬೊದತ್ತ ನೆಟ್ಟಿದೆ. ಕಾರಣ, ಫೆಬ್ರವರಿ 15ರ ಭಾನುವಾರ ನಡೆಯಲಿರುವ ಬದ್ಧವೈರಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ. ಅಭಿಮಾನಿಗಳು ಮತ್ತು ಕ್ರಿಕೆಟ್ ಪಂಡಿತರು ಈಗಾಗಲೇ ಭಾರತವೇ ಗೆಲ್ಲುವ “ಫೇವರಿಟ್” (ನೆಚ್ಚಿನ) ತಂಡ ಎಂದು ಲೆಕ್ಕಾಚಾರ ಹಾಕಿದ್ದಾರೆ. ಆದರೆ, ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಅನುಭವಿ ಆಟಗಾರ ರೋಹಿತ್ ಶರ್ಮಾ ಮಾತ್ರ ಈ ಅತಿಯಾದ ಆತ್ಮವಿಶ್ವಾಸದ ಬಗ್ಗೆ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
“ನಾನು ‘ಫೇವರಿಟ್’ ಎಂಬ ಪದವನ್ನೇ ನಂಬಲ್ಲ”
ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರೋಹಿತ್ ಶರ್ಮಾ, ಭಾರತ ತಂಡದ ಮೇಲೆ ಹೊರಿಸಲಾಗಿರುವ “ಗೆಲ್ಲುವ ಕುದುರೆ” ಎಂಬ ಹಣೆಪಟ್ಟಿಯನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. “ನಾನು ವೈಯಕ್ತಿಕವಾಗಿ ‘ಫೇವರಿಟ್’ ಎಂಬ ಪದವನ್ನು ನಂಬುವುದಿಲ್ಲ. ಟಿ20 ಕ್ರಿಕೆಟ್ ಎನ್ನುವುದು ಬಹಳ ವಿಚಿತ್ರವಾದ ಆಟ (Funny Game). ಕಳೆದ 10 ವರ್ಷಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇಂದು ಪ್ರತಿಯೊಂದು ತಂಡಕ್ಕೂ ಟಿ20 ಮಾದರಿಯಲ್ಲಿ ಅಪಾರ ಅನುಭವವಿದೆ. ಹೀಗಿರುವಾಗ ನಾವು ಸುಲಭವಾಗಿ ಹೋಗಿ ಎರಡು ಅಂಕಗಳನ್ನು ಬಾಚಿಕೊಳ್ಳಬಹುದು ಎಂದು ಭಾವಿಸುವುದು ಮೂರ್ಖತನವಾಗುತ್ತದೆ,” ಎಂದು ರೋಹಿತ್ ಎಚ್ಚರಿಸಿದ್ದಾರೆ.
ಅಂಕಿಅಂಶಗಳ ಬಲವಿದ್ದರೂ ಎಚ್ಚರಿಕೆ ಅಗತ್ಯ
ಟಿ20 ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ದಾಖಲೆ ಅತ್ಯಂತ ಬಲಿಷ್ಠವಾಗಿದೆ ಎನ್ನುವುದು ಸತ್ಯ. ಇದುವರೆಗೆ ನಡೆದ 8 ಮುಖಾಮುಖಿಗಳಲ್ಲಿ ಭಾರತ 7 ಬಾರಿ ಜಯಭೇರಿ ಬಾರಿಸಿದೆ. ಅಲ್ಲದೆ, ಕಳೆದ 5 ಟಿ20 ಪಂದ್ಯಗಳಲ್ಲಿ (ಏಷ್ಯಾಕಪ್ ಸೇರಿದಂತೆ) ಭಾರತವೇ ಮೇಲುಗೈ ಸಾಧಿಸಿದೆ. ಪ್ರಸ್ತುತ ಟಿ20 ಶ್ರೇಯಾಂಕದಲ್ಲೂ ಭಾರತ ನಂಬರ್ 1 ಸ್ಥಾನದಲ್ಲಿದೆ.
ಇಷ್ಟೆಲ್ಲಾ ಸಕಾರಾತ್ಮಕ ಅಂಶಗಳಿದ್ದರೂ, ರೋಹಿತ್ ಶರ್ಮಾ ಅವರು ಆಟಗಾರರು ಮೈಮರೆಯಬಾರದು ಎಂದು ಸಲಹೆ ನೀಡಿದ್ದಾರೆ. “ನೀವು ಹಿಂದೆ ಏನು ಮಾಡಿದ್ದೀರಿ ಎಂಬುದು ಮುಖ್ಯವಲ್ಲ. ಇತಿಹಾಸ ಗೆಲುವನ್ನು ತಂದುಕೊಡುವುದಿಲ್ಲ. ಆ ನಿರ್ದಿಷ್ಟ ದಿನದಂದು (ಭಾನುವಾರ) ನೀವು ಹೇಗೆ ಆಡುತ್ತೀರಿ, ಮೈದಾನದಲ್ಲಿ ಯಾರು ತಪ್ಪುಗಳನ್ನು ಕಡಿಮೆ ಮಾಡುತ್ತಾರೆ ಎಂಬುದು ಮಾತ್ರ ಫಲಿತಾಂಶವನ್ನು ನಿರ್ಧರಿಸುತ್ತದೆ. ಇಲ್ಲದಿದ್ದರೆ ಬರಿಗೈಯಲ್ಲಿ ಮನೆಗೆ ಮರಳಬೇಕಾಗುತ್ತದೆ,” ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ.
2021ರ ಕಹಿ ಘಟನೆ ಮರೆಯುವಂತಿಲ್ಲ
ರೋಹಿತ್ ಶರ್ಮಾ ಅವರ ಈ ಎಚ್ಚರಿಕೆಯ ಹಿಂದೊಂದು ಬಲವಾದ ಕಾರಣವಿದೆ. 2021ರ ಟಿ20 ವಿಶ್ವಕಪ್ನಲ್ಲಿಯೂ ಭಾರತ ತಂಡದ ಬಗ್ಗೆ ಇದೇ ರೀತಿಯ ನಿರೀಕ್ಷೆ ಇತ್ತು. ಆದರೆ ದುಬೈನಲ್ಲಿ ನಡೆದ ಆ ಪಂದ್ಯದಲ್ಲಿ ಪಾಕಿಸ್ತಾನವು ಭಾರತವನ್ನು 10 ವಿಕೆಟ್ಗಳಿಂದ ಸೋಲಿಸಿತ್ತು. ಅಂದು ತಂಡದ ಭಾಗವಾಗಿದ್ದ ರೋಹಿತ್ಗೆ ಆ ನೋವು ಇನ್ನೂ ಹಸಿರಾಗಿದೆ. ಹೀಗಾಗಿ, ಯಾವುದೇ ತಂಡವನ್ನು, ಯಾವುದೇ ಹಂತದಲ್ಲೂ ಹಗುರವಾಗಿ ಪರಿಗಣಿಸಬಾರದು ಎಂಬ ಪಾಠವನ್ನು ಅವರು ಯುವ ಆಟಗಾರರಿಗೆ ತಿಳಿಹೇಳಿದ್ದಾರೆ. “ಎದುರಾಳಿ ಯಾರೇ ಆಗಿರಲಿ, ಅಂದಿನ ದಿನ ಯಾರು ಬೇಕಾದರೂ ಯಾರನ್ನಾದರೂ ಸೋಲಿಸುವ ಸಾಮರ್ಥ್ಯ ಹೊಂದಿರುತ್ತಾರೆ,” ಎಂದು ಅವರು ನೆನಪಿಸಿದ್ದಾರೆ.
ಕೊಲಂಬೊದಲ್ಲಿ ಪಾಕಿಸ್ತಾನಕ್ಕೆ ಮೇಲುಗೈ?
ಇದೇ ವೇಳೆ, ಭಾರತ ತಂಡದ ಸಹಾಯಕ ಕೋಚ್ ರಿಯಾನ್ ಟೆನ್ ಡೊಯೆಸ್ಚೆಟ್ ಅವರು ಕೂಡ ಪಂದ್ಯದ ಕಠಿಣತೆಯನ್ನು ಒಪ್ಪಿಕೊಂಡಿದ್ದಾರೆ. ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಒಂದು ಸಣ್ಣ ಲಾಭವಿರುವ ಸಾಧ್ಯತೆಯಿದೆ. “ಪಾಕಿಸ್ತಾನ ತಂಡವು ಕಳೆದ ಎರಡು ವಾರಗಳಿಂದ ಕೊಲಂಬೊದಲ್ಲೇ ಬೀಡುಬಿಟ್ಟಿದ್ದು, ಅಲ್ಲಿನ ವಾತಾವರಣ ಮತ್ತು ಪಿಚ್ಗೆ ಚೆನ್ನಾಗಿ ಹೊಂದಿಕೊಂಡಿದೆ. ನಾವು ಈಗಷ್ಟೇ ಹೋಗುತ್ತಿದ್ದೇವೆ. ಹೀಗಾಗಿ ಇದೊಂದು ದೊಡ್ಡ ಸವಾಲಾಗಲಿದ್ದು, ನಮ್ಮ ಅತ್ಯುತ್ತಮ ಆಟವನ್ನು ಪ್ರದರ್ಶಿಸುವ ಕಡೆಗೆ ಮಾತ್ರ ನಾವು ಗಮನಹರಿಸಿದ್ದೇವೆ,” ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಹಾವೇರಿ ಸಮರ್ಪಣಾ ಕಾರ್ಯಕ್ರಮದಲ್ಲಿ 3 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ | ಸಚಿವ ಕೃಷ್ಣ ಬೈರೇಗೌಡ


















