ವಾಷಿಂಗ್ಟನ್ : ಭಾರತ ಮತ್ತು ಅಮೆರಿಕ ನಡುವೆ ಇತ್ತೀಚೆಗೆ ಅಂತಿಮಗೊಂಡಿರುವ ವ್ಯಾಪಾರ ಒಪ್ಪಂದವನ್ನು ಶ್ವೇತಭವನವು ಇಂದು “ಐತಿಹಾಸಿಕ ಹೆಜ್ಜೆ” ಎಂದು ಬಣ್ಣಿಸಿದೆ. ಈ ಒಪ್ಪಂದವು ಸುಮಾರು 140 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಬೃಹತ್ ಭಾರತೀಯ ಮಾರುಕಟ್ಟೆಯನ್ನು ಅಮೆರಿಕದ ಉತ್ಪನ್ನಗಳಿಗೆ ಮುಕ್ತವಾಗಿ ತೆರೆಯಲಿದೆ ಎಂದು ಅಮೆರಿಕದ ಆಡಳಿತವು ವಿಶ್ವಾಸ ವ್ಯಕ್ತಪಡಿಸಿದೆ.
ಭಾರತವು ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಸಂಪೂರ್ಣವಾಗಿ ಅಂದರೆ ‘ಶೂನ್ಯ’ಕ್ಕೆ (Zero Tariff) ಇಳಿಸಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯು ಭಾರತೀಯ ವರ್ತಕರಲ್ಲಿ ಆತಂಕ ಮೂಡಿಸಿತ್ತು. ಈ ಕುರಿತು ಈಗ ಸ್ಪಷ್ಟನೆ ನೀಡಿರುವ ಶ್ವೇತಭವನವು, ಟ್ರಂಪ್ ಅವರ ಮಾತುಗಳು ಆಯ್ದ ಉತ್ಪನ್ನಗಳ ಮೇಲಿನ ಸುಂಕವನ್ನು ಹಂತಹಂತವಾಗಿ ಕಡಿಮೆ ಮಾಡುವ ಅಥವಾ ತೆಗೆದುಹಾಕುವ ತಾತ್ವಿಕ ಬದ್ಧತೆಯನ್ನು ಸೂಚಿಸುತ್ತವೆಯೇ ಹೊರತು, ಎಲ್ಲಾ ಉತ್ಪನ್ನಗಳ ಮೇಲಿನ ಸುಂಕವನ್ನು ತಕ್ಷಣವೇ ರದ್ದುಗೊಳಿಸುವುದಲ್ಲ ಎಂದು ಸ್ಪಷ್ಟಪಡಿಸಿದೆ.
ರಷ್ಯಾ ತೈಲಕ್ಕೆ ಗುಡ್ ಬೈ:
ಅಮೆರಿಕದಿಂದ ಸುಂಕ ಕಡಿತ ಈ ಒಪ್ಪಂದದ ಪ್ರಮುಖ ಅಂಶವೆಂದರೆ, ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಲು ಭಾರತ ಒಪ್ಪಿಕೊಂಡಿದೆ. ಭಾರತದ ಈ ನಿರ್ಧಾರವನ್ನು ಸ್ವಾಗತಿಸಿರುವ ಅಧ್ಯಕ್ಷ ಟ್ರಂಪ್, ಭಾರತೀಯ ಆಮದುಗಳ ಮೇಲೆ ವಿಧಿಸಲಾಗಿದ್ದ ಹೆಚ್ಚುವರಿ ಶೇ. 25ರಷ್ಟು ಸುಂಕವನ್ನು ತೆಗೆದುಹಾಕಲು ಸಮ್ಮತಿಸಿದ್ದಾರೆ. ಇದರೊಂದಿಗೆ ಭಾರತದ ಮೇಲಿನ ಪ್ರತಿಸುಂಕವು ಶೇ.25ರಿಂದ ಶೇ. 18ಕ್ಕೆ ಇಳಿಕೆಯಾಗಲಿದೆ. ಬದಲಾಗಿ ಭಾರತವು ಅಮೆರಿಕದ ಕೈಗಾರಿಕಾ ಉತ್ಪನ್ನಗಳು, ಹಣ್ಣುಗಳು, ಒಣದ್ರಾಕ್ಷಿ, ಗೋಡಂಬಿ, ವೈನ್ ಮತ್ತು ಸ್ಪಿರಿಟ್ ಸೇರಿದಂತೆ ಕೃಷಿ ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿಮೆ ಮಾಡಲು ಒಪ್ಪಿಗೆ ನೀಡಿದೆ ಎಂದೂ ಶ್ವೇತಭವನ ಮಾಹಿತಿ ನೀಡಿದೆ.
500 ಬಿಲಿಯನ್ ಡಾಲರ್ ಹೂಡಿಕೆ
ಒಪ್ಪಂದದ ಪ್ರಕಾರ, ಭಾರತವು ಅಮೆರಿಕದಿಂದ ಸುಮಾರು 500 ಶತಕೋಟಿ ಡಾಲರ್ ಮೌಲ್ಯದ ಇಂಧನ, ಮಾಹಿತಿ ತಂತ್ರಜ್ಞಾನ ಮತ್ತು ಕೃಷಿ ಉತ್ಪನ್ನಗಳನ್ನು ಖರೀದಿಸಲು ಬದ್ಧವಾಗಿದೆ. ಅಷ್ಟೇ ಅಲ್ಲದೆ, ಭಾರತವು ಜಾರಿಗೆ ತಂದಿದ್ದ ‘ಡಿಜಿಟಲ್ ಸೇವಾ ತೆರಿಗೆ’ಯನ್ನು ರದ್ದುಗೊಳಿಸಲು ನಿರ್ಧರಿಸಿದೆ. ಎಲೆಕ್ಟ್ರಾನಿಕ್ ವರ್ಗಾವಣೆಗಳ ಮೇಲೆ ಕಸ್ಟಮ್ಸ್ ಸುಂಕ ವಿಧಿಸದಂತೆ ಮತ್ತು ತಾರತಮ್ಯವಿಲ್ಲದ ಡಿಜಿಟಲ್ ವ್ಯಾಪಾರ ನಿಯಮಗಳನ್ನು ರೂಪಿಸಲು ಎರಡೂ ದೇಶಗಳು ಮಾತುಕತೆ ನಡೆಸಿವೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ನಡುವೆ ನಡೆದ ದೂರವಾಣಿ ಸಂಭಾಷಣೆಯ ಫಲವಾಗಿ ಈ ಮಧ್ಯಂತರ ಒಪ್ಪಂದದ ರೂಪುರೇಷೆ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ತಾಂತ್ರಿಕ ಅಡೆತಡೆಗಳು, ಬೌದ್ಧಿಕ ಆಸ್ತಿ ಹಕ್ಕುಗಳು, ಕಾರ್ಮಿಕ ಮತ್ತು ಪರಿಸರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೆಚ್ಚಿನ ಮಾತುಕತೆಗಳು ನಡೆಯಲಿವೆ. ಈ ಒಪ್ಪಂದವು ಅಮೆರಿಕದ ಕಾರ್ಮಿಕರಿಗೆ ಮತ್ತು ಭಾರತೀಯ ಉದ್ಯಮಗಳಿಗೆ ಸಮಾನವಾಗಿ ಪ್ರಯೋಜನ ನೀಡುವ ಗುರಿಯನ್ನು ಹೊಂದಿದೆ ಎಂದು ಶ್ವೇತಭವನದ ಅಧಿಕೃತ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ : ದಾವಣಗೆರೆಯಲ್ಲಿ ಬೈಕ್-ಸಾರಿಗೆ ಬಸ್ ಮಧ್ಯೆ ಭೀಕರ ಅಪಘಾತ | ಓರ್ವ ಸಾ*ವು.. ಇಬ್ಬರ ಸ್ಥಿತಿ ಗಂಭೀರ!



















