ಮುಂಬೈ : ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿದ್ದ, ಎನ್ಸಿಪಿ ನಾಯಕ ಅಜಿತ್ ಪವಾರ್ ಅವರು ವಿಮಾನ ಅವಘಡದಲ್ಲಿ ಸಾವಿಗೀಡಾಗುವ ಕೆಲವೇ ನಿಮಿಷಗಳ ಮೊದಲು ನಡೆಸಿದ್ದ ಕೊನೆಯ ಫೋನ್ ಸಂಭಾಷಣೆಯ ಆಡಿಯೋವನ್ನು ಅವರ ಪಕ್ಷ ಬಿಡುಗಡೆ ಮಾಡಿದೆ.
ಜನವರಿ 28 ರಂದು ಬಾರಾಮತಿ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ದುರಂತದಲ್ಲಿ ಅಸುನೀಗುವ ಕೇವಲ 9 ನಿಮಿಷಗಳ ಮೊದಲು ಅವರು ಪಕ್ಷದ ಕಾರ್ಯಕರ್ತರೊಬ್ಬರ ಜೊತೆ ಮಾತನಾಡುತ್ತಾ ಸೌಹಾರ್ದತೆಯ ಸಂದೇಶ ನೀಡಿದ್ದರು ಎಂಬುದು ಈ ಆಡಿಯೋದಿಂದ ತಿಳಿದುಬಂದಿದೆ
ಕಾಟೇವಾಡಿಯ ಎನ್ಸಿಪಿ ಕಾರ್ಯಕರ್ತ ಶ್ರೀಜೀತ್ ಪವಾರ್ ಎಂಬವರು ಅಜಿತ್ ಪವಾರ್ ಅವರಿಗೆ ಬೆಳಗ್ಗೆ 8.19ಕ್ಕೆ ಯಾವುದೋ ಕೆಲಸದ ನಿಮಿತ್ತ ಸಂದೇಶ ಕಳುಹಿಸಿದ್ದರು. ವಿಮಾನವು ಲ್ಯಾಂಡಿಂಗ್ ಆಗುವ ಸಮಯದಲ್ಲಿ ನೆಟ್ವರ್ಕ್ ವ್ಯಾಪ್ತಿಗೆ ಬಂದಾಗ, ಅಂದರೆ ಸರಿಯಾಗಿ 8.37ಕ್ಕೆ ಅಜಿತ್ ಪವಾರ್ ಅವರು ಶ್ರೀಜೀತ್ ಅವರಿಗೆ ಮರಳಿ ಕರೆ ಮಾಡಿದ್ದಾರೆ. ಈ ವೇಳೆ ಸ್ಥಳೀಯ ರಾಜಕೀಯದ ಬಗ್ಗೆ ಚರ್ಚಿಸುತ್ತಾ, “ನಾವು ಎಲ್ಲಾ ಜಾತಿ ಮತ್ತು ಧರ್ಮದವರನ್ನು ಒಟ್ಟಾಗಿ ಕರೆದೊಯ್ಯುತ್ತಿದ್ದೇವೆ. ಎಲ್ಲರಿಗೂ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದೇವೆ” ಎಂದು ಅಜಿತ್ ಪವಾರ್ ಹೇಳಿದ್ದಾರೆ. ಈ ಮಾತುಗಳನ್ನಾಡಿದ ಕೇವಲ 9 ನಿಮಿಷಗಳಲ್ಲಿ, ಅಂದರೆ 8.45 ಕ್ಕೆ ವಿಮಾನವು ಪತನಗೊಂಡಿದೆ.
ಆಡಿಯೋ ಬಿಡುಗಡೆಯ ಉದ್ದೇಶ
ಅಜಿತ್ ಪವಾರ್ ಅವರು ತಮ್ಮ ಕೊನೆಯ ಉಸಿರಿರುವವರೆಗೂ ಮಹಾರಾಷ್ಟ್ರದ ಅಭಿವೃದ್ಧಿ ಮತ್ತು ಸಾಮಾಜಿಕ ಸಮಾನತೆಯ ಬಗ್ಗೆಯೇ ಯೋಚಿಸುತ್ತಿದ್ದರು ಎಂಬುದು ಜನರಿಗೆ ತಿಳಿಯಲಿ ಎಂಬ ಉದ್ದೇಶದಿಂದ ಈ ಆಡಿಯೋ ಬಿಡುಗಡೆ ಮಾಡಲಾಗಿದೆ ಎಂದು ಶ್ರೀಜೀತ್ ಪವಾರ್ ತಿಳಿಸಿದ್ದಾರೆ. ಸಂಭಾಷಣೆಯ ವೇಳೆ ಅಜಿತ್ ಪವಾರ್ ಅವರು ಮಾಲಿ ಸಮುದಾಯಕ್ಕೆ ಜಿಲ್ಲಾ ಪಂಚಾಯತ್ನಲ್ಲಿ ನೀಡಲಾದ ಪ್ರಾತಿನಿಧ್ಯದ ಬಗ್ಗೆ ಪ್ರಸ್ತಾಪಿಸುತ್ತಾ, “ನಾವು ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತೇವೆ” ಎಂದು ಹೇಳಿ ನಂತರ “ಲ್ಯಾಂಡಿಂಗ್ ಸಿದ್ಧತೆಯಲ್ಲಿದ್ದೇನೆ, ಆಮೇಲೆ ಮಾತನಾಡೋಣ” ಎಂದು ಫೋನ್ ಇಟ್ಟಿದ್ದರು. ಇದೇ ಅವರ ಜೀವನದ ಅಂತಿಮ ಕರೆಯಾಗಿದೆ.
ಜನವರಿ 28 ರಂದು ಮುಂಬೈಯಿಂದ ಹೊರಟಿದ್ದ ಲಿಯರ್ಜೆಟ್ 45 ವಿಮಾನವು ಬಾರಾಮತಿ ವಿಮಾನ ನಿಲ್ದಾಣದಲ್ಲಿ ಎರಡನೇ ಬಾರಿ ಲ್ಯಾಂಡಿಂಗ್ಗೆ ಯತ್ನಿಸುತ್ತಿದ್ದಾಗ ಅಪಘಾತಕ್ಕೀಡಾಗಿತ್ತು. ಈ ದುರಂತದಲ್ಲಿ ಅಜಿತ್ ಪವಾರ್ ಅವರೊಂದಿಗೆ ಅವರ ವೈಯಕ್ತಿಕ ಭದ್ರತಾ ಅಧಿಕಾರಿ, ಸಹಾಯಕ ಮತ್ತು ಇಬ್ಬರು ಪೈಲಟ್ಗಳು ಸೇರಿದಂತೆ ಒಟ್ಟು ಐವರು ಸಾವನ್ನಪ್ಪಿದ್ದರು. ಕಡಿಮೆ ಗೋಚರತೆ ಈ ಅಪಘಾತಕ್ಕೆ ಕಾರಣವಿರಬಹುದು ಎಂದು ಪ್ರಾಥಮಿಕ ತನಿಖಾ ಮೂಲಗಳು ತಿಳಿಸಿವೆ.
ಅಜಿತ್ ಪವಾರ್ ಅವರ ಅಕಾಲಿಕ ನಿಧನವು ಮಹಾರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದ್ದು, ಅದರ ಬೆನ್ನಲ್ಲೇ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ನೂತನ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಜಿತ್ ಪವಾರ್ ಅವರ ಈ ಅಂತಿಮ ಸಂದೇಶವು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅವರ ಬೆಂಬಲಿಗರು ಕಣ್ಣೀರಿಡುತ್ತಿದ್ದಾರೆ.
ಇದನ್ನೂ ಓದಿ : ಬೆಂಗಳೂರು | ಅಮ್ಮ ಬೈದಿದ್ದಕ್ಕೆ ತಮ್ಮನ ಜೊತೆ ಮನೆಬಿಟ್ಟು ಫ್ರೀ ಬಸ್ಸಲ್ಲಿ ಊರೂರು ಸುತ್ತಿದ ಅಕ್ಕ!


















