ಕೋಲಾರ | ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಬಳಿ, ರಾ.ಹೆ 75ರ ಟೋಲ್ ಗೇಟ್ ಸಮೀಪ ಕಂಟೇನರ್ ತಡೆದು ಅಕ್ರಮವಾಗಿ ಸಾಗಿಸುತ್ತಿದ್ದ 37 ಗೋವುಗಳನ್ನು ಹಿಂದೂ ಸಂಘಟನೆ ಮುಖಂಡರು ರಕ್ಷಿಸಿದ್ದಾರೆ.

ರಾಷ್ಟ್ರ ರಕ್ಷಣಾ ಪಡೆ ಹಾಗೂ ಜರಂಗದಳ ಸಂಘಟನೆಯ ಕಾರ್ಯಕರ್ತರು ಅನುಮಾನಾಸ್ಪದವಾಗಿ ಸಾಗುತ್ತಿದ್ದ ಕಂಟೇನರ್ ಅನ್ನು ತಡೆದು ಪರಿಶೀಲನೆ ನಡೆಸಿದಾಗ, ಅದರೊಳಗೆ 37 ಹಸುಗಳನ್ನು ತುಂಬಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಹಸುಗಳನ್ನು ರಾಯಚೂರಿನಿಂದ ಬೆಂಗಳೂರಿನ ಎಂ.ಎಸ್ ಪಾಳ್ಯಕ್ಕೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

ಹಸುಗಳು ಹಾಗೂ ಕಂಟೇನರ್ ಅನ್ನು ಸಂಘಟನೆ ಮುಖಂಡರು ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಗೆ ಒಪ್ಪಿಸಿದ್ದು, ಕಂಟೇನರ್ನ ಚಾಲಕ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಹಿಂದೆಯೂ ಇದೇ ಕಂಟೇನರ್ನಲ್ಲಿ ಹಸುಗಳನ್ನು ಖಸಾಯಿ ಖಾನೆಗೆ ಸಾಗಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಖಸಾಯಿ ಖಾನೆಗೆ ಹಸುಗಳ ಸಾಗಾಟ ನಡೆದಿದೆ ಎಂದು ಆರೋಪಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಿಂದೂ ಸಂಘಟನೆ ಮುಖಂಡರುಒತ್ತಾಯಿಸಿದ್ದಾರೆ. ಈ ಸಂಬಂಧ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ : ಪತ್ನಿಯ ತಲೆ ಬೋಳಿಸಿದ ಪಾಪಿ ಪತಿ.. ಬಾಗಲಕೋಟೆಯಲ್ಲಿ ಅಮಾನವೀಯ ಘಟನೆ!



















