ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ನಾಳೆ ಇಂದೋರ್ನಲ್ಲಿ ನಡೆಯಲಿದೆ. ಈಗಾಗಲೇ ಟೀಮ್ ಇಂಡಿಯಾ ಆಟಗಾರರು ಇಂದೋರ್ಗೆ ತೆರಳಿ ಅಭ್ಯಾಸವನ್ನು ನಡೆಸುತ್ತಿದ್ದಾರೆ.
ಏತನ್ಮಧ್ಯೆ ಈ ಪಂದ್ಯಕ್ಕೂ ಮೊದಲು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಉಜ್ಜಯಿನಿ ದೇವಸ್ಥಾನಕ್ಕೆ ಭೇಟಿ ನೀಡಿ ಶಕ್ತಿಶಾಲಿ ಮಹಾಕಾಳೇಶ್ವರನ ದರ್ಶನ ಪಡೆದು ಪುನೀತರಾಗಿದ್ದಾರೆ. ಕೊಹ್ಲಿ ಜೊತೆಗೆ ಕುಲದೀಪ್ ಯಾದವ್ ಸಹ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಭಾಗಿಯಾಗಿ ಶಿವನ ಕೃಪೆಗೆ ಪಾತ್ರರಾಗಿದ್ದಾರೆ.
ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರನ ದರ್ಶನ ಪಡೆದ ಬಳಿಕ ಮಾತನಾಡಿದ ಕುಲದೀಪ್ ಯಾದವ್, “ಇದೊಂದು ಉತ್ತಮ ಅನುಭವ ಆಗಿದೆ. ನಾನು ಈ ಪವಿತ್ರ ಕ್ಷೇತ್ರಕ್ಕೆ ಮೊದಲ ಬಾರಿಗೆ ಭೇಟಿ ನೀಡಿ ಒಂಬತ್ತು ವರ್ಷಗಳಾಗುತ್ತಿವೆ. ಇದು ನನಗೆ ಖುಷಿಯನ್ನು ತಂದಿದೆ. ದೇವರ ಕೃಪೆಯಿಂದ ಎಲ್ಲವೂ ಚೆನ್ನಾಗಿ ನಡೆಯಯುತ್ತಿದೆ ಮತ್ತು ಅವರ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿದ್ದು, ಮುಂಬರುವ ಟಿ20 ವಿಶ್ವಕಪ್ನಲ್ಲಿ ನಾವು ಉತ್ತಮ ಪ್ರದರ್ಶನ ನೀಡಲಿದ್ದೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಪ್ರಸ್ತುತ 1-1ರಲ್ಲಿ ಸಮಬಲಗೊಂಡಿದ್ದು, ಇದೀಗ ನಾಳೆ ಇಂದೋರ್ನ ಹೋಳ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಪಂದ್ಯವು ಸರಣಿ ನಿರ್ಣಾಯಕ ಆಗಿರಲಿದೆ. ಏಕದಿನ ಸರಣಿಯ ಆರಂಭಿಕ ಪಂದ್ಯವನ್ನು ಭಾರತ ನಾಲ್ಕು ವಿಕೆಟ್ಗಳಿಂದ ಗೆದ್ದುಕೊಂಡರೇ, ಎರಡನೇ ಪಂದ್ಯದಲ್ಲಿ ಪುಟಿದೆದ್ದ ನ್ಯೂಜಿಲೆಂಡ್ ಏಳು ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿ ಸರಣಿ ಜೀವಂತವಾಗಿರಿಸಿಕೊಂಡಿದೆ.
ಇದನ್ನೂ ಓದಿ : ಶಿಡ್ಲಘಟ್ಟ ಬೆನ್ನಲ್ಲೇ ಸಿಎಂ ತವರಲ್ಲಿಯೂ ಮಹಿಳಾ ಅಧಿಕಾರಿಗೆ ಧಮ್ಕಿ, ನಿಂದನೆ!



















