ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಪ್ರಕರಣಗಳು ಮುಂದುವರಿದಿದ್ದು, ಮತ್ತೊಂದು ಆಘಾತಕಾರಿ ಘಟನೆ ವರದಿಯಾಗಿದೆ. ರಾಜಧಾನಿ ಢಾಕಾದಿಂದ 150 ಕಿ.ಮೀ ದೂರದ ಹಳ್ಳಿಯೊಂದರಲ್ಲಿ ಖೋಕನ್ ಚಂದ್ರ ದಾಸ್ ಎಂಬ ಔಷಧಿ ವ್ಯಾಪಾರಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ.
ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾದ ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಧಾರ್ಮಿಕ ಕಾರಣಗಳಿಗಾಗಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಗಳ ಪಟ್ಟಿಗೆ ಖೋಕನ್ ಹೆಸರು ಕೂಡ ಸೇರ್ಪಡೆಯಾಗಿದೆ.

ಘಟನೆ ನಡೆದಿದ್ದು ಹೇಗೆ?
ಬುಧವಾರ ರಾತ್ರಿ ಖೋಕನ್ ದಾಸ್ ಅವರು ತಮ್ಮ ಅಂಗಡಿಯನ್ನು ಮುಚ್ಚಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ನಂತರ ಮುಖ ಮತ್ತು ತಲೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಖೋಕನ್ ಅವರು ತಕ್ಷಣವೇ ಪಕ್ಕದಲ್ಲಿದ್ದ ಕೊಳಕ್ಕೆ ಹಾರಿದ್ದಾರೆ. ಇದರಿಂದ ಬೆಂಕಿ ನಂದಿದೆ ಮತ್ತು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಸ್ಥಳೀಯರು ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಢಾಕಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಅವರ ಕಣ್ಣಿನ ಶಸ್ತ್ರಚಿಕಿತ್ಸೆ ಮುಗಿದಿದ್ದು, ಅವರನ್ನು ಐಸಿಯುಗೆ (ICU) ಸ್ಥಳಾಂತರಿಸಲಾಗುವುದು ಎಂದು ತಿಳಿದುಬಂದಿದೆ.
ಪತ್ನಿ ಸೀಮಾ ದಾಸ್ ಕಣ್ಣೀರು
ಘಟನೆಯಿಂದ ಆಘಾತಕ್ಕೊಳಗಾಗಿರುವ ಖೋಕನ್ ಅವರ ಪತ್ನಿ ಸೀಮಾ ದಾಸ್, “ನಮಗೆ ಯಾರೊಂದಿಗೂ ಯಾವುದೇ ವಿಷಯದಲ್ಲಿ ದ್ವೇಷವಿರಲಿಲ್ಲ. ನನ್ನ ಪತಿಯನ್ನು ಏಕೆ ಗುರಿಯಾಗಿಸಿಕೊಂಡರು ಎಂಬುದು ಅರ್ಥವಾಗುತ್ತಿಲ್ಲ,” ಎಂದು ಕಣ್ಣೀರು ಹಾಕಿದ್ದಾರೆ.
“ನಾವು ಹಿಂದೂಗಳು, ನಮಗೆ ಶಾಂತಿಯಿಂದ ಬದುಕಬೇಕು ಅಷ್ಟೇ. ಹಲ್ಲೆ ಮಾಡಿದವರು ಮುಸ್ಲಿಮರು ಮತ್ತು ಅವರಲ್ಲಿ ಇಬ್ಬರನ್ನು ನನ್ನ ಪತಿ ಗುರುತಿಸಿದ್ದಾರೆ. ಪೊಲೀಸರು ಅವರನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ನಮಗೆ ಸಹಾಯ ಮಾಡಬೇಕು,” ಎಂದು ಅವರು ಮನವಿ ಮಾಡಿದ್ದಾರೆ. ಖೋಕನ್ ದಾಸ್ ದಂಪತಿಗೆ ಮೂವರು ಮಕ್ಕಳಿದ್ದಾರೆ.
ಭಾರತ ಕಳವಳ
ಮೊಹಮ್ಮದ್ ಯೂನುಸ್ ನೇತೃತ್ವದ ಹಂಗಾಮಿ ಸರ್ಕಾರದ ಅಡಿಯಲ್ಲಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಈಗಾಗಲೇ 3 ಹಿಂದೂಗಳನ್ನು ಹತ್ಯೆಗೈಯ್ಯಲಾಗಿದೆ. ಕಳೆದ ವಾರವಷ್ಟೇ ಭಾರತ ಸರ್ಕಾರವು ಅಲ್ಪಸಂಖ್ಯಾತರ ಮೇಲಿನ ನಿರಂತರ ಹಲ್ಲೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಆದರೆ, ಬಾಂಗ್ಲಾದೇಶದ ಅಧಿಕಾರಿಗಳು ಅಲ್ಪಸಂಖ್ಯಾತರ ರಕ್ಷಣೆಗೆ ಬದ್ಧರಾಗಿರುವುದಾಗಿ ಹೇಳಿಕೆ ನೀಡುತ್ತಲೇ ಇದ್ದಾರೆ, ಆದರೂ ವಾಸ್ತವ ಬೇರೆಯೇ ಆಗಿದೆ.
ಇದನ್ನೂ ಓದಿ: ‘ಸ್ವಚ್ಛ ನಗರಿ’ಯ ಕರಾಳ ಮುಖ | ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಇಂದೋರ್ನಲ್ಲಿ 11 ಮಂದಿ ಬಲಿ



















