ಹುಬ್ಬಳ್ಳಿ : ಅನ್ಯ ಜಾತಿಯ ಯುವಕನನ್ನು ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ ಹೆತ್ತ ತಂದೆಯೇ ಏಳು ತಿಂಗಳ ಗರ್ಭಿಣಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಇಡೀ ಹುಬ್ಬಳ್ಳಿಯನ್ನೇ ಬೆಚ್ಚಿಬೀಳಿಸಿದೆ. ಇದೀಗ ಈ ಪ್ರಕರಣಕ್ಕೆ ರಾಜ್ಯ ಮಹಿಳಾ ಆಯೋಗ ಎಂಟ್ರಿ ಕೊಟ್ಟಿದ್ದು, ಘಟನೆಯನ್ನು ತೀವ್ರವಾಗಿ ಖಂಡಿಸಿದೆ.

ಈ ಸಂಬಂಧ ಧಾರವಾಡ ಜಿಲ್ಲಾ ಎಸ್ಪಿಗೆ ರಾಜ್ಯ ಮಹಿಳಾ ಆಯೋಗ ಪತ್ರ ಬರೆದಿದ್ದು, ಪ್ರಕರಣದ ಸೂಕ್ತ ತನಿಖೆ ನಡೆಸಿ ಅಪರಾಧಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಪತ್ರದಲ್ಲೇನಿದೆ?
ಹುಬ್ಬಳ್ಳಿ ಸಮೀಪದ ಬೆಳಗಲಿಯ ಇನಾಂ ವೀರಾಪುರ ಗ್ರಾಮದಲ್ಲಿ, ಮಾನ್ಯ ಪಾಟೀಲ್ ಎಂಬಾಕೆ ಅದೇ ಗ್ರಾಮದ ವಿವೇಕಾನಂದ ದೊಡ್ಡಮನಿಯನ್ನು ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಇದಕ್ಕೆ ಪೋಷಕರ ವಿರೋಧವಿದ್ದು, ಕುಟುಂಬಸ್ಥರ ವಿರೋಧದ ನಡುವೆಯೂ ಜತೆ ಎಂಟು ತಿಂಗಳ ಹಿಂದೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ವಿವಾಹವಾಗಿತ್ತು. ದಂಪತಿ ಪ್ರಾಣ ಭಯದಿಂದ ಹಾವೇರಿಯಲ್ಲಿ ವಾಸವಾಗಿದ್ದುದಾಗಿ ವರದಿಯಾಗಿರುತ್ತದೆ. ಡಿಸೆಂಬರ್ 8ರಂದು ದಂಪತಿ ಹುಬ್ಬಳ್ಳಿಗೆ ಮರಳಿದ್ದು, ಆದರೆ ಭಾನುವಾರ ಸಂಜೆ ಯುವತಿಯ ತವರು ಮನೆಯವರು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಾನ್ಯಾಳ ಮಾವ ಮರಿಯಪ್ಪನ ಮೇಲೆ ಟ್ರಾಕ್ಟರ್ ಹರಿಸಿ, ಕೊಲೆಗೆ ಯತ್ನ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನೊಂದೆಡೆ 15-20 ಜನರ ಗುಂಪೊಂದು ಮನೆಗೆ ನುಗ್ಗಿ ಮಾನ್ಯಾಗೆ ಕೊಡಲಿಯಿಂದ ಕುತ್ತಿಗೆಗೆ ಹೊಡೆದು ಮನೆ ಮಂದಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿರುತ್ತದೆ. ಅಲ್ಲದೆ, ಮಾನ್ಯ 6 ತಿಂಗಳ ಗರ್ಭಿಣಿಯಾಗಿದ್ದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಪರಿಣಾಮ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಜೊತೆಗೆ ಹೊಟ್ಟೆಯಲ್ಲಿದ್ದ ಮಗು ಸಹಾ ಸಾವನ್ನಪ್ಪಿರುವ ಬಗ್ಗೆಯೂ ವರದಿಯಾಗಿರುತ್ತದೆ. ಮಾನ್ಯಾಳ ಮೇಲೆ ನಡೆದಿರುವ ಬರ್ಬರ ಹತ್ಯೆಯನ್ನು ರಾಜ್ಯ ಮಹಿಳಾ ಆಯೋಗವು ತೀವ್ರವಾಗಿ ಖಂಡಿಸಿ ಗಂಭೀರವೆಂದು ಪರಿಗಣಿಸಿದೆ.

ಆದ್ದರಿಂದ ಪ್ರಕರಣದ ಬಗ್ಗೆ ನಿಯಮಾನುಸಾರ ಪರಿಶೀಲಿಸಿ, ಇದಕ್ಕೆ ಕಾರಣಕರ್ತರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಮಾನ್ಯಾ ಕುಟುಂಬಸ್ಥರಿಗೆ ರಕ್ಷಣೆ ಒದಗಿಸಿ ವರದಿ ನೀಡುವಂತೆ ಸಂಬಂಧಪಟ್ಟ ಠಾಣಾಧಿಕಾರಿಯವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಮಹಿಳಾ ಆಯೋಗ ಪತ್ರದಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ : ಒಸ್ಮಾನ್ ಹಾದಿ ಹತ್ಯೆಯ ಬೆನ್ನಲ್ಲೇ ಬಾಂಗ್ಲಾದ ಮತ್ತೊಬ್ಬ ನಾಯಕನ ತಲೆಗೆ ಗುಂಡೇಟು



















