ಉಡುಪಿ: 15 ದಿನಗಳ ಮುಂಚಿತವಾಗಿ ಸಲ್ಲಿಸಿದ ಚುಕ್ಕಿ ಗುರುತಿನ ಪ್ರಶ್ನೆಯಿದು. ಶಾಸಕನಾಗಿ ನನಗೆ ನನ್ನ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತನಾಡುವ ಸಂಪೂರ್ಣ ಹಕ್ಕಿದೆ. ಪೀಠಕ್ಕೆ ಗೌರವ ನೀಡಿ ನಾನು ಮೌನ ವಹಿಸಿದ್ದೇನೆ. ಆದರೆ ಸ್ಪೀಕರ್ ಅವರು ಹಿಂದೂ ಧರ್ಮದ ಹರಿಕಥೆಯ ಕುರಿತು ಹಗುರವಾಗಿ ಮಾತನಾಡಿರುವುದು ನೋವುಂಟು ಮಾಡಿದೆ ಎಂದು ಉಡುಪಿ ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ, ನಾನು ಎಂದಿಗೂ ದಾರಿ ತಪ್ಪುವ ಚರ್ಚೆ ಮಾಡಿಲ್ಲ, ಅನೇಕ ಶಾಸಕರು ಒಂದೊಂದು ಗಂಟೆ ಮಾತನಾಡುತ್ತಾರೆ. ಆದರೆ ಉಡುಪಿ ಪರ್ಯಾಯ ಮತ್ತು ಕರಾವಳಿ ಭಾಗದ ವಿಚಾರ ಬಂದಾಗ ಮಾತ್ರ ಟೀಕೆ ಮಾಡಲಾಗಿದೆ. ನೀವು ಕುಳಿತ ಪೀಠಕ್ಕೆ ಗೌರವಿಸುತ್ತೇನೆ, ಅದನ್ನ ಸರಿಯಾಗಿ ನಿಭಾಯಿಸಿಕೊಂಡು ಹೋಗಿ. ಅವರು ತಂದೆಯ ಹೆಸರಲ್ಲಿ ಮತ ಕೇಳಿ ಶಾಸಕರಾದವರು. ನಾನು ಕಾರ್ಯಕರ್ತನಾಗಿ ಬೆಳೆದು ಶಾಸಕನಾಗಿದ್ದೇನೆ. ಈ ನಡೆಗಳಿಂದ ನಮ್ಮ ಕಾರ್ಯಕರ್ತರು ಬಹಳಷ್ಟು ನೊಂದಿದ್ದಾರೆ.
ಚಳಿಗಾಲದ ಅಧಿವೇಶನದಲ್ಲಿ ಯಾರಿಗೆ ಚಳಿ ಬಿಡಿಸಬೇಕು ಎನ್ನುವುದು ನಮಗೆ ಗೊತ್ತು. ಖಾದರ್ ಅವರು ಓಲೈಕೆ ರಾಜಕೀಯ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬದಲಾಗುವ ಸಂದರ್ಭದಲ್ಲಿ ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಗಮನ ಸೆಳೆಯಲು ಹಿಂದುತ್ವದ ಬಗ್ಗೆ ಮಾತನಾಡುವ ಶಾಸಕರನ್ನು ಟೀಕಿಸುತ್ತಿದ್ದಾರೆ. ಕಳೆದ ಮೂರು ಮಳೆಗಾಲಗಳಲ್ಲಿ ದಾಖಲೆ ಪ್ರಮಾಣದ ಮಳೆಯಾಗಿ ಉಡುಪಿ ನಗರದಲ್ಲಿ ರಸ್ತೆ ಹಾಗೂ ಚರಂಡಿಗಳು ಕೊಚ್ಚಿಹೋಗಿವೆ. ಆದರೂ ಸರಕಾರದಿಂದ ಅಗತ್ಯ ಅನುದಾನ ಬಂದಿಲ್ಲ. ಜನರು ನನ್ನನ್ನು ಜನಸೇವೆಗಾಗಿ ಆಯ್ಕೆ ಮಾಡಿದ್ದಾರೆ,ಪರ್ಯಾಯಕ್ಕೆ ಅನುದಾನ ಕೇಳಿದ್ದಕ್ಕೆ ಟೀಕಿಸಿರುವುದು ಸರಿಯಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಯು.ಟಿ. ಖಾದರ್ ಅವರು ಉಡುಪಿ ಜನತೆಯ ಕ್ಷಮೆ ಯಾಚಿಸಬೇಕು ಎಂದು ಶಾಸಕ ಯಶ್ಪಾಲ್ ಸುವರ್ಣ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕುಂದಾಪುರ | ಸೌಕೂರು ಏತ ನೀರಾವರಿಗೆ ಉಚಿತ ವಿದ್ಯುತ್ ಸೌಲಭ್ಯ ನೀಡಿ ; ವಿಕಾಸ್ ಹೆಗ್ಡೆ ಆಗ್ರಹ



















