ಉಡುಪಿ : ಖ್ಯಾತ ನಟ, ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಅವರು ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನಡೆದ ಬೃಹತ್ ಗೀತೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ರಥ ಬೀದಿಗೆ ಆಗಮಿಸಿ ಕನಕನ ಗುಡಿಗೆ ಮಾಲಾರ್ಪಣೆ ಮಾಡಿ ಕನಕನ ಕಿಂಡಿಯ ಮೂಲಕ ದೇವರ ದರ್ಶನ ಮಾಡಿದರು. ಬಳಿಕ ಅನಂತೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜಿ ಸಲ್ಲಿಸಿದರು. ಪರ್ಯಾಯ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ಪವನ್ ಕಲ್ಯಾಣ್ಗೆ ನವಗ್ರಹ ಕಿಂಡಿಯ ಮೂಲಕ ದೇವರ ದರ್ಶನ ಮಾಡಿಸಿ, ಸುವರ್ಣತೀರ್ಥ ಮಂಟಪದಲ್ಲಿ ಪ್ರಸಾದ ನೀಡಿದರು. ಬಳಿಕ ಗೀತಾ ಮಂದಿರಕ್ಕೆ ತೆರಳಿದ ಡಿಸಿಎಂ, ಧ್ಯಾನ ಮಂದಿರದ ಅನಂತಪದ್ಮನಾಭ ಸ್ವಾಮಿ ಮೂರ್ತಿ ದರ್ಶನ ಮಾಡಿಸಿದರು.

ಸಂಜೆ ಮಠದ ರಾಜಾಂಗಣದಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಪರ್ಯಾಯ ಮಠದ ವತಿಯಿಂದ ‘ಅಭಿನವ ಶ್ರೀ ಕೃಷ್ಣ ದೇವರಾಯ’ ಪ್ರಶಸ್ತಿಯನ್ನು ಪವನ್ ಕಲ್ಯಾಣ್ಗೆ ನೀಡಿ ಗೌರವಿಸಲಾಯಿತು. ಧರ್ಮರಕ್ಷಣೆಯ ಕಾರ್ಯವನ್ನು ಮಾಡುತ್ತಿರುವುದರಿಂದ ಈ ಬಿರುದು ನೀಡುತ್ತಿದ್ದೇವೆ ಎಂದು ಸ್ವಾಮೀಜಿ ಆಶೀರ್ವಚನದಲ್ಲಿ ಹೇಳಿದರು.
ಯುದ್ಧಕಾಲಕ್ಕೆ ಭಗವದ್ಗೀತೆಯೆ ಪರಿಹಾರ | ಪವನ್ ಕಲ್ಯಾಣ್
ಬೃಹತ್ ಗೀತೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪವನ್ ಕಲ್ಯಾಣ್ “ಯುವ ಜನರ ಒತ್ತಡ ಪರಿಹಾರಕ್ಕೆ ಭಗವದ್ಗೀತೆಯೇ ಏಕೈಕ ಮಾರ್ಗ. ಗೋವು ರಕ್ಷಣೆ ವಿಚಾರದಲ್ಲಿ ಅನ್ಯ ಧರ್ಮವನ್ನು ದೂರುವ ಬದಲು, ಪ್ರತಿ ಕುಟುಂಬ ಒಂದು ಗೋವನ್ನು ಸಾಕಿ ಎಂದು ಕರೆ ನೀಡಿದರು. ರಾಜಕೀಯದಲ್ಲಿ ಸೋಲು ಗೆಲುವು ನನಗೆ ಮುಖ್ಯ ಅಲ್ಲ. ಯಾಕಂದ್ರೆ ಭಗವದ್ಗೀತೆ ನಿಷ್ಕಾಮ ಕರ್ಮವನ್ನು ನನಗೆ ಬೋಧಿಸಿದೆ. ರಷ್ಯಾ ಅಧ್ಯಕ್ಷ ಪುಟಿನ್ಗೆ ಪ್ರಧಾನಿ ಮೋದಿ ಭಗವದ್ಗೀತೆಯನ್ನು ನೀಡಿದ್ದಾರೆ. ಯುದ್ಧಕಾಲಕ್ಕೆ ಇದೇ ಪರಿಹಾರ” ಎಂದರು.
ಇದನ್ನೂ ಓದಿ : ಚುನಾವಣಾ ಅಕ್ರಮ ಆರೋಪ | ಸಿಎಂ ಸಿದ್ದರಾಮಯ್ಯಗೆ ಬಿಗ್ ಶಾಕ್.. ಸುಪ್ರೀಂಕೋರ್ಟ್ನಿಂದ ನೋಟಿಸ್!



















