ಪಾಣಿಪತ್ (ಹರ್ಯಾಣ): ಮಕ್ಕಳ ಸೌಂದರ್ಯವನ್ನು ಕಂಡು ಅಸೂಯೆಪಟ್ಟು, ಸ್ವಂತ ಮಗ ಸೇರಿದಂತೆ ನಾಲ್ವರು ಮಕ್ಕಳನ್ನು ಕಳೆದ ಎರಡು ವರ್ಷಗಳಲ್ಲಿ ನೀರು ತುಂಬಿದ ತೊಟ್ಟಿಗಳಲ್ಲಿ ಮುಳುಗಿಸಿ ಕೊಂದ ಭೀಕರ ಘಟನೆ ಹರ್ಯಾಣದಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 32 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ಆರೋಪಿಯು ‘ಸೈಕೋಪಾತ್’ (ಮನೋವಿಕೃತಿ) ವರ್ತನೆ ಹೊಂದಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸೌಂದರ್ಯವೇ ಮುಳುವಾಯಿತು!
ಬಂಧಿತ ಆರೋಪಿ ಪೂನಂ, ರಾಜಕೀಯ ಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದಿದ್ದಾಳೆ. ಆದರೆ ಆಕೆಯ ಮನಸ್ಥಿತಿ ವಿಚಿತ್ರವಾಗಿತ್ತು. ತನ್ನ ಕುಟುಂಬದಲ್ಲಿ ಅಥವಾ ಸಂಬಂಧಿಕರಲ್ಲಿ ಯಾವ ಮಗುವು ತನಗಿಂತ ಹೆಚ್ಚು ಸುಂದರವಾಗಿರಬಾರದು ಎಂಬ ವಿಚಿತ್ರ ಅಸೂಯೆ ಆಕೆಯನ್ನು ಆವರಿಸಿತ್ತು. ಇದೇ ಕಾರಣಕ್ಕಾಗಿ ಆಕೆ ಈ ಘೋರ ಕೃತ್ಯಗಳನ್ನು ಎಸಗಿದ್ದಾಳೆ ಎಂದು ಪಾಣಿಪತ್ ಎಸ್ಪಿ ಭೂಪೇಂದ್ರ ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಎರಡು ವರ್ಷ, ನಾಲ್ಕು ಹತ್ಯೆ
ಈ ಸರಣಿ ಹತ್ಯೆಗಳ ಸರಮಾಲೆ 2023ರಲ್ಲೇ ಆರಂಭವಾಗಿತ್ತು. ಸೋನಿಪತ್ನ ಭಾವರ್ ಗ್ರಾಮದಲ್ಲಿ ತನ್ನ ನಾದಿನಿಯ 9 ವರ್ಷದ ಮಗಳನ್ನು ಪೂನಂ ಮೊದಲು ಹತ್ಯೆ ಮಾಡಿದ್ದಳು. ಈ ಸಾವಿನ ಬಗ್ಗೆ ಯಾರಿಗೂ ಅನುಮಾನ ಬಾರದಿರಲಿ ಎಂಬ ಕಾರಣಕ್ಕೆ, ತಾನೇ ಹೆತ್ತ 3 ವರ್ಷದ ಮಗುವನ್ನೂ ನೀರಿನಲ್ಲಿ ಮುಳುಗಿಸಿ ಕೊಂದಿದ್ದಾಳೆ. ನಂತರ 2025ರ ಆಗಸ್ಟ್ನಲ್ಲಿ ಇನ್ನೊಬ್ಬ ಸಂಬಂಧಿಯ 6 ವರ್ಷದ ಮಗಳನ್ನು ಹತ್ಯೆಗೈದಿದ್ದಳು. ಡಿಸೆಂಬರ್ 1, 2025ರಂದು ಮದುವೆ ಸಮಾರಂಭವೊಂದರಲ್ಲಿ 6 ವರ್ಷದ ‘ವಿಧಿ’ ಎಂಬ ಬಾಲಕಿಯನ್ನು ಇದೇ ರೀತಿ ಕೊಲೆ ಮಾಡಿದಾಗ ಪಾಪದ ಕೊಡ ಒಡೆದಿದೆ.
ಸಿಕ್ಕಿಬಿದ್ದಿದ್ದು ಹೇಗೆ?
ಮದುವೆ ಮನೆಯಲ್ಲಿ ವಿಧಿಯ ಮೃತದೇಹವು ಹೊರಗಿನಿಂದ ಬೀಗ ಹಾಕಲಾದ ಕೋಣೆಯಲ್ಲಿದ್ದ ಚಿಕ್ಕ ನೀರಿನ ಟಬ್ನಲ್ಲಿ ಪತ್ತೆಯಾಗಿತ್ತು. ಇದು ಆಕಸ್ಮಿಕ ಸಾವಲ್ಲ ಎಂಬುದು ಪೊಲೀಸರಿಗೆ ಮೇಲ್ನೋಟಕ್ಕೆ ದೃಢಪಟ್ಟಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪೂನಂನ ಚಲನವಲನಗಳ ಬಗ್ಗೆ ಅನುಮಾನ ಮೂಡಿದೆ. ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ, ಆಕೆ ತಾನು ನಡೆಸಿದ ನಾಲ್ಕೂ ಹತ್ಯೆಗಳ ಬಗ್ಗೆ ತಪ್ಪೊಪ್ಪಿಕೊಂಡಿದ್ದಾಳೆ. ಮಕ್ಕಳನ್ನು ನಂಬಿಸಿ ಕರೆದೊಯ್ದು, ನೀರಿನಲ್ಲಿ ಮುಳುಗಿಸಿ ಸಾಯಿಸುತ್ತಿದ್ದೆ ಎಂದು ಆಕೆ ಬಾಯಿಬಿಟ್ಟಿದ್ದಾಳೆ.
ಇದನ್ನೂ ಓದಿ: ನ್ಯಾಯಾಲಯದ ಆದೇಶ ಧಿಕ್ಕರಿಸಿ ದೇವಾಲಯ ದೀಪೋತ್ಸವದಲ್ಲಿ ಎಡವಟ್ಟು | ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಛೀಮಾರಿ



















