ರಾಯಚೂರು: ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟುಮಾಡಿ ಸಮಾಜ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿದ್ದ ಐವರನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಸಹಾಯಕ ಆಯುಕ್ತ ಗಜಾನನ ಬಾಳೆ ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ.
ನಾಲ್ವರನ್ನು ವಿಜಯಪುರ ಮತ್ತು ಓರ್ವ ವ್ಯಕ್ತಿಯನ್ನು ವಿಜಯನಗರ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ. ಸಾರ್ವಜನಿಕರ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಕರ್ನಾಟಕ ಪೊಲೀಸ್ ಕಾಯ್ದೆ 1963 ಕಲಂ 55(ಎ)(ಬಿ) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
2025 ನವೆಂಬರ್ 6ರಿಂದ 2026 ಜನವರಿ 6ರ ವರೆಗೆ ಎರಡು ತಿಂಗಳುಗಳ ಕಾಲ ಗಡಿಪಾರು ಅವದಿ ನಿಗದಿಪಡಿಸಲಾಗಿದ್ದು, ಆ ಅವಧಿಯಲ್ಲಿ ಗಡಿಪಾರು ಮಾಡಲ್ಪಟ್ಟವರು ಆಯಾ ಪೊಲೀಸ್ ಠಾಣೆಗಳಿಗೆ ಹಾಜರಾಗಿ ವರದಿ ಸಲ್ಲಿಸುವಂತೆ ಠಾಣಾಧಿಕಾರಿಗೆ ಸೂಚಿಸಲಾಗಿದೆ.
ಗಡಿಪಾರು ಅವಧಿಯಲ್ಲಿ ಗಡಿಪಾರು ಮಾಡಲಾಗಿದ್ದ ವ್ಯಕ್ತಿಗಳ ಚಲನವಲನಗಳ ಬಗ್ಗೆ ನಿಗಾವಹಿಸುವಂತೆ ಹಾಗೂ ಆದೇಶ ಉಲ್ಲಂಘಿಸಿ ಐವರ ಪೈಕಿ ಯಾರಾದರೂ ರಾಯಚೂರು ಜಿಲ್ಲಾ ವ್ಯಾಪ್ತಿಯಲ್ಲಿ ಪ್ರವೇಶ ಮಾಡಿದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲು ಮತ್ತು ಆರೋಪಿಗಳು ಪ್ರತೀ ವಾರ ಆಯಾ ಪೊಲೀಸ್ ಠಾಣೆಗೆ ಹೋಗಿ ಹಾಜರಿ ನೀಡುವಂತೆಯೂ ಸೂಚಿಸಲಾಗಿದೆ.
ಇದನ್ನೂ ಓದಿ : ಎನ್ಡಿಎಗೆ ಫಲಿತಾಂಶ ಬಂದರೆ ನಮ್ಮ ದೇಶದ ದುರಾದೃಷ್ಟ : ಸಚಿವ ರಾಮಲಿಂಗಾರೆಡ್ಡಿ



















