ವಿಜಯವಾಡ : ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಾಲೆಗೆ ಬಂದ ವಿದ್ಯಾರ್ಥಿಯನ್ನು ಆಡಳಿತ ಮಂಡಳಿ ಶಾಲೆಯಿಂದ ಹೊರಕಳುಹಿಸಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಎನ್ಟಿಆರ್ ಜಿಲ್ಲೆಯ ಗೊಲ್ಲಪುಡಿಯಲ್ಲಿನ ಖಾಸಗಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಶಾಲೆಯ ವಿದ್ಯಾರ್ಥಿ ಅಯ್ಯಪ್ಪ ಸ್ವಾಮಿಯ ಪವಿತ್ರ ವೇಷಭೂಷಣ ಮತ್ತು ಮಾಲೆಯನ್ನು ಧರಿಸಿ ಬಂದಿದ್ದ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಲಾ ಆಡಳಿತ ಮಂಡಳಿಯು, ಆತನ್ನನು ಆವರಣದೊಳಕ್ಕೆ ಬಿಟ್ಟುಕೊಳ್ಳಲು ನಿರಾಕರಿಸಿ ಮನೆಗೆ ವಾಪಸ್ ಕಳುಹಿಸಿದೆ.
ಘಟನೆಯ ಬಗ್ಗೆ ತಿಳಿದ ಅಯ್ಯಪ್ಪ ದೀಕ್ಷೆ ಆಚರಿಸುತ್ತಿರುವ ಭಕ್ತರು, ಎಬಿವಿಪಿ ಮತ್ತು ಆರ್ಎಸ್ಎಸ್ ಕಾರ್ಯಕರ್ತರೊಂದಿಗೆ ಶಾಲೆಗೆ ಆಗಮಿಸಿ ಆಡಳಿತ ಮಂಡಳಿಯ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಯ್ಯಪ್ಪ ದೀಕ್ಷೆ ಪಡೆದ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕಿದ ಬಗ್ಗೆ ವಿವರಣೆ ಕೇಳಿದ್ದಾರೆ.
ಈ ವೇಳೆ ಭವಾನಿಪುರಂ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅವರು ಶಾಲೆಗೆ ತಲುಪಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದ್ದಾರೆ. ನಂತರ, ಅಯ್ಯಪ್ಪ ಭಕ್ತರು ಜಿಲ್ಲಾ ಶಿಕ್ಷಣ ಅಧಿಕಾರಿ (ಡಿಇಒ)ಯ ಗಮನಕ್ಕೆ ತಂದಿದ್ದಾರೆ. ಶಾಲಾ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದ ನಂತರ ಸಮಸ್ಯೆ ಇತ್ಯರ್ಥವಾಗಿದೆ. ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ ಡಿಇಒ, ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಅವಕಾಶ ಸಿಗಲಿದೆ ಎಂದು ತಿಳಿಸಿ ಅಯ್ಯಪ್ಪ ಸ್ವಾಮಿಗಳಲ್ಲಿ ಕ್ಷಮೆಯಾಚಿಸಿದ್ದಾರೆ ಎಂದು ತಿಳಿದುಬಂದಿದೆ.
ಶಾಲೆಗೆ ನೋಟಿಸ್ ನೀಡಿದ ಡಿಇಒ | ಘಟನೆಯ ನಂತರ, ಡಿಇಒ ಸುಬ್ಬಾ ರಾವ್ ಅವರು ಶಾಲಾ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿ ಎರಡು ದಿನಗಳಲ್ಲಿ ವಿವರಣೆ ನೀಡುವಂತೆ ತಾಕೀತು ಮಾಡಿದ್ದಾರೆ. ಯಾವುದೇ ಖಾಸಗಿ, ಅನುದಾನಿತ ಅಥವಾ ಸರ್ಕಾರಿ ಮಾನ್ಯತೆ ಪಡೆದ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅಯ್ಯಪ್ಪ ಮಾಲೆ ಧರಿಸಿದರೂ ಸಹ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ಡಿಇಒ ಆದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಟನಲ್ ರಸ್ತೆ ಬಗ್ಗೆ ಧರಣಿ ಅಗತ್ಯವಿಲ್ಲ, ಆರ್.ಅಶೋಕ್ ನೇತೃತ್ವದಲ್ಲೇ ಸಲಹಾ ಸಮಿತಿ ರಚನೆಗೆ ಸಿದ್ಧ | ಡಿಸಿಎಂ ಡಿಕೆಶಿ



















