ಅಫ್ಘಾನಿಸ್ತಾನ್ : ಅಫ್ಘಾನಿಸ್ತಾನ್ ಹಾಗೂ ಪಾಕಿಸ್ತಾನ್ ನಡುವಣ ಸೇನಾ ಸಂಘರ್ಷ ಮುಂದುವರೆದಿದೆ. ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರ ಭಾರತ ಭೇಟಿ ಬೆನ್ನಲ್ಲೇ ಪಾಕಿಸ್ತಾನ್ ಕಾಬೂಲ್ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಗೆ ಪ್ರತೀಕಾರವಾಗಿ ಅಫ್ಘಾನಿಸ್ತಾನ್ ಡುರಾಂಡ್ ಲೈನ್ ಬಾರ್ಡರ್ನಲ್ಲಿ 12 ಪಾಕಿಸ್ತಾನ್ ಸೈನಿಕರನ್ನು ಹತ್ಯೆ ಮಾಡಿದ್ದರು. ಇದೀಗ ಮತ್ತೊಮ್ಮೆ ಪಾಕ್ ಸೇನೆಯು ಗಡಿ ಭಾಗದಲ್ಲಿ ದಾಳಿ ನಡೆಸಿದ್ದು, ಈ ದಾಳಿಯಿಂದಾಗಿ ಅಫ್ಘಾನಿಸ್ತಾನದ ಮೂವರು ಕ್ರಿಕೆಟಿಗರು ಸೇರಿ 8 ಮಂದಿ ಮೃತಪಟ್ಟಿದ್ದಾರೆ.
ಸೌಹಾರ್ದ ಪಂದ್ಯದಲ್ಲಿ ಭಾಗವಹಿಸಲು ಅಫ್ಘಾನಿಸ್ತಾನದ ಸ್ಥಳೀಯ ಆಟಗಾರರು ಪಾಕಿಸ್ತಾನ ಗಡಿಯಲ್ಲಿರುವ ಪೂರ್ವ ಪಕ್ತಿಕಾ ಪ್ರಾಂತ್ಯದ ಉರ್ಗುನ್ನಿಂದ ಶರಾನಾಗೆ ಪ್ರಯಾಣಿಸಿದ್ದರು. ಈ ವೇಳೆ ದಾಳಿ ನಡೆದಿದ್ದು, ಇದರಿಂದ ಮೂವರು ಕ್ರಿಕೆಟಿಗರು ಸೇರಿ 8 ಮಂದಿ ಸಾವನ್ನಪ್ಪಿದ್ದು, ಇನ್ನು ಕೆಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪಾಕ್ ದಾಳಿಯಿಂದಾಗಿ ಸಾವನ್ಯಪ್ಪಿದ ಕ್ರಿಕೆಟಿಗರನ್ನು ಕಬೀರ್, ಸಿಬ್ಘತುಲ್ಲಾ ಮತ್ತು ಹರೂನ್ ಎಂದು ಗುರುತಿಸಲಾಗಿದೆ. ಇದೀಗ ಈ ದಾಳಿ ವಿರುದ್ಧ ಅಫ್ಘಾನಿಸ್ತಾನ್ ಕ್ರಿಕೆಟಿಗರು ಧ್ವನಿಯೆತ್ತಿದ್ದು, ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಆಕ್ರೋಶವನ್ನು ಹೊರಹಾಕಿದ್ದಾರೆ.
ಕ್ರಿಕೆಟಿಗರ ಆಕ್ರೋಶ :
ಅಫ್ಘಾನಿಸ್ತಾನದ ಟಿ20 ತಂಡದ ನಾಯಕ ರಶೀದ್ ಖಾನ್ ಅವರು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಸರಣಿಯಿಂದ ಹಿಂದೆ ಸರಿಯುವ ಎಸಿಬಿ ನಿರ್ಧಾರವನ್ನು ಸ್ವಾಗತಿಸಿದ್ದಾರೆ. “ಮಹಿಳೆಯರು, ಮಕ್ಕಳು ಹಾಗೂ ದೇಶವನ್ನು ಪ್ರತಿನಿಧಿಸುವ ಕನಸು ಕಂಡ ಯುವ ಕ್ರಿಕೆಟಿಗರನ್ನು ಬಲಿ ಪಡೆದ ಈ ದಾಳಿಯಿಂದ ತೀವ್ರ ದುಃಖವಾಗಿದೆ. ನಾಗರಿಕರನ್ನು ಗುರಿಯಾಗಿಸುವುದು ಅನೈತಿಕ ಮತ್ತು ಅನಾಗರಿಕ ಕೃತ್ಯ. ಇದು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ” ಎಂದು ಅವರು ಎಕ್ಸ್ (ಟ್ವೀಟರ್) ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
ಇನ್ನೊಬ್ಬ ಅಂತಾರಾಷ್ಟ್ರೀಯ ಆಟಗಾರ ಮೊಹಮ್ಮದ್ ನಬಿ, “ಈ ಘಟನೆ ಕೇವಲ ಪಕ್ತಿಕಾಗಷ್ಟೇ ಅಲ್ಲ, ಇಡೀ ಅಫ್ಘಾನಿಸ್ತಾನ ಕ್ರಿಕೆಟ್ ಕುಟುಂಬ ಮತ್ತು ರಾಷ್ಟ್ರಕ್ಕೆ ಆದ ಆಘಾತ” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. “ಅಮಾಯಕ ನಾಗರಿಕರು ಮತ್ತು ನಮ್ಮ ದೇಶೀಯ ಕ್ರಿಕೆಟಿಗರ ಹತ್ಯೆಯು ಘೋರ ಹಾಗೂ ಕ್ಷಮಿಸಲಾಗದ ಅಪರಾಧ” ಎಂದು ವೇಗಿ ಫಜಲ್ಹಕ್ ಫಾರೂಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಅಫ್ಘಾನಿಸ್ತಾನದ ಕ್ರೀಡಾ ಸಮುದಾಯ, ಕ್ರಿಕೆಟ್ ಕುಟುಂಬಕ್ಕೆ ದೊಡ್ಡ ನಷ್ಟ. ದುಃಖಿತ ಕುಟುಂಬಗಳಿಗೆ ಸಂತಾಪ ಮತ್ತು ಅವರೊಂದಿಗೆ ನಾವು ಇರಲಿದ್ದೇವೆ ಎಂದು ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ತಿಳಿಸಿದೆ.