ವಿಜಯಪುರ : ಆಟವಾಡುವ ವೇಳೆ ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳು ಮೃತಪಟ್ಟಿರುವ ಘಟನೆ ವಿಜಯಪುರ ತಾಲೂಕಿನ ಮಿಂಚನಾಳ ತಾಂಡಾದ ಮಹದೇವ ನಗರದಲ್ಲಿ ನಡೆದಿದೆ.
ಶಿವಮ್ಮ ರಾಜು ರಾಠೋಡ್ (8), ಕಾರ್ತಿಕ ವಿಶ್ವ ರಾಠೋಡ್ (7) ಹಾಗೂ ಸ್ವಪ್ನಾ ರಾಜು ರಾಠೋಡ್ (12) ಮೃತಪಟ್ಟ ಮಕ್ಕಳು. ಮಕ್ಕಳನ್ನು ಕಳೆದಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಮಹದೇವ ನಗರದ ಬಳಿಯ ರಾಠೋಡ್ ಎಂಬವರ ಜಮೀನಿನಲ್ಲಿ ಮೂವರು ಮಕ್ಕಳು ಕುರಿಗಳ ಜೊತೆಗೆ ಆಟವಾಡುತ್ತಿದ್ದರು.ಕುಟುಂಬದವರು ಸಹ ಮಕ್ಕಳು ಇಲ್ಲಿಯೇ ಆಟವಾಡುತ್ತಿದ್ದಾರೆ ಎಂದು ಅಂದುಕೊಂಡಿದ್ದರು. ಹೀಗೆ ಕುರಿಗಳ ಜೊತೆ ಆಡುತ್ತ ಕೃಷಿ ಹೊಂಡದ ಬಳಿ ತೆರಳಿರುವ ಮಕ್ಕಳು ಆಯತಪ್ಪಿ ಬಿದ್ದಿದ್ದು, ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಬಹಳ ಹೊತ್ತಾದರೂ ಮಕ್ಕಳು ಬಾರದಿರುವ ಹಿನ್ನಲೆ ಕುಟುಂಬಸ್ಥರು ಹುಡುಕಾಟ ನಡೆಸಿದ್ದು, ಸಂಶಯ ಬಂದು ಕೃಷಿ ಹೊಂಡದಲ್ಲಿ ಹುಡುಕಾಡಿದಾಗ ಮೂವರು ಮಕ್ಕಳ ಶವ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ವಿಜಯಪುರ ತಹಶೀಲ್ದಾರ ಚೆನಗೊಂಡ ಹಾಗೂ ವಿಜಯಪುರ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.