ಬೆಂಗಳೂರು: ಜಾತಿಗಣತಿ ಎರಡನೇ ದಿನ ಕೇಂದ್ರ ಸಚಿವ ವಿ ಸೋಮಣ್ಣ ನಿವಾಸದಲ್ಲಿ ಸರ್ವೇ ನಡೆಸಲಾಗಿದೆ. ವಿಜಯನಗರದಲ್ಲಿರುವ ಅವರ ಮನೆಗೆ 9 ಜನ ಗಣತಿಗಾರರು ಆಗಮಿಸಿದ್ದು,ಗಣತಿ ಮಾಡಲು ಇಷ್ಟು ಜನ ಯಾಕೆ ಬಂದಿದ್ದೀರಾ ಎಂದು ಕೇಳಿದ್ದಕ್ಕೆ ಪ್ರತ್ಯುತ್ತರವಾಗಿ ಹೌದು ಎಂದು ಸಿಬ್ಬಂದಿಗಳು ಉತ್ತರಿಸಿದ್ದಾರೆ.
ಈ ರಾಜ್ಯದಲ್ಲಿ ಎಷ್ಟು ಜನ ಎಬ್ಬೆಟ್ಟು ಇದ್ದಾರೆ. ಅವರೆಲ್ಲ ಹೇಗೆ ಅನ್ಲೈನ್ನಲ್ಲಿ ಮಾಡಿಸಿಕೊಳ್ಳುತ್ತಾರೆ? ನೀವು ಅಧಿಕಾರಿಗಳು ಸರ್ಕಾರಕ್ಕೆ ಹೇಳಬೇಕಲ್ವಾ ಎಂದು ಗರಂ ಆಗಿದ್ದಾರೆ.
ನಮ್ಮ ಕೇಂದ್ರ ಸರ್ಕಾರ ಮುಂದೆ ಗಣತಿ ಮಾಡಿಸುತ್ತೆ, ಹೇಗೆ ಮಾಡಿಸುತ್ತೆ ನೋಡಿ, ಅದನ್ನು ಸಹ ನೀವೇ ಮಾಡುವುದು. ಒಂದು ಜಾತಿಗಣತಿ ಮಾಡಲು ಇಷ್ಟು ಪ್ರಶ್ನೆಗಳು ಬೇಕಾ? ಇದೆಲ್ಲ ನೀವು ಸರ್ಕಾರಕ್ಕೆ ತಿಳಿಸ ಬೇಕು ಅಲ್ಲವಾ? ಸರ್ಕಾರಿ ನೌಕರರು ಸರ್ಕಾರದ ಏಜೆಂಟ್ ಆಗಿ ಕೆಲಸ ಮಾಡಬಾರದು ಎಂದು ಗಣತಿಗಾರರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ ಸಿದ್ದರಾಮಯ್ಯ ಅವರಿಗೆ ಜಾತಿ ಲೆಕ್ಕ ಬೇಕು. ಅದಕ್ಕೆ ಇದನ್ನೆಲ್ಲ ಮಾಡುತ್ತಿದ್ದಾರೆ. ಸಮೀಕ್ಷೆ ನಡೆಸಲು ನೀವು 9 ಜನ ಯಾಕೆ ಬಂದಿದ್ದೀರಿ ಎಂದು ಸೋಮಣ್ಣ ಪ್ರಶ್ನಿಸಿದ್ದಾರೆ. ಉಪಜಾತಿ ಯಾವುದು ಕೇಳಿದಾಗ, ಅದೆಲ್ಲ ಯಾಕೆ ಬೇಕು? ಸಿದ್ದರಾಮಯ್ಯ ಜಾತಿ ಎಂದು ಬರೆದುಕೊಳ್ಳಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಡೀ ದೇಶದಲ್ಲಿ ಸಿದ್ದರಾಮಯ್ಯ ಜಾತಿ ಎಂದು ಮಾಡಿಕೊಳ್ಳಿ . ಮದುವೆ ಆದಾಗ ಎಷ್ಟು ವರ್ಷ ಎನ್ನುವ ಪ್ರಶ್ನೆಗೆ, ಇವೆಲ್ಲ ಯಾಕೆ? ನಮ್ಮ ಅಪ್ಪ-ಅಮ್ಮನ ಕೇಳ್ಬೇಕು. 26 ಎಂದು ಬರೆದುಕೊಳ್ಳಿ. ಇದು ಸಿದ್ದರಾಮಯ್ಯ ವೋಟಿಗಾಗಿ ಮಾಡುತ್ತಿರುವುದು. ಅನೇಕ ಪ್ರಶ್ನೆಗಳಿಗೆ ಸಿದ್ದರಾಮಯ್ಯ, ಡಿಕೆಶಿ ಹೆಸರನ್ನೇ ಹಾಕಿಕೊಳ್ಳಿ ಎಂದು ಉತ್ತರಿಸಿದ್ದಾರೆ.
ಉತ್ತರ ಕೊಡಲಾಗದೆ ಇರುವ ಪ್ರಶ್ನೆಗಳನ್ನೆಲ್ಲ ಹಾಕಿದ್ದೀರಾ. ಯಾವನೊ ತಲೆ ಕೆಟ್ಟಿರೋರು ಮಾಡಿದ್ದು, ಅವನನ್ನು ಕರೀರಿ. ವೃತ್ತಿ ವಿಚಾರವಾಗಿ ಎಲ್ಲಿ ಕೆಲಸ ಮಾಡೋದು ಎಂಬ ಪ್ರಶ್ನೆ, ಸಿದ್ದರಾಮಯ್ಯ, ಡಿಕೆಶಿಗೆ ಯಾವ ಗ್ರೂಪ್ ಎಂದು ಹಾಕಿದ್ದೀರಿ ಎಂದು ಪ್ರತಿಯೊಂದಕ್ಕೂ ಸಿದ್ದರಾಮಯ್ಯ ಹೆಸರನ್ನು ಪ್ರಸ್ತಾಪಿಸಿದ್ದಾರೆ.